ಯಡ್ತಾರೆ-ಕಬ್ಬರ್ಗಿಗೆ ರಸ್ತೆ, ಬಸ್ ಸೌಕರ್ಯ ಕಲ್ಪಿಸಲು ಒತ್ತಾಯ

KannadaprabhaNewsNetwork |  
Published : Jun 07, 2026, 02:15 AM IST
ಫೋಟೋ : ೬ಕೆಎಂಟಿ_ಜೆಯುಎನ್_ಕೆಪಿ೧ : ಯಡ್ತಾರೆ ಹಾಗೂ ಕಬ್ಬರ್ಗಿ ಭಾಗದ ಜನರು ಬಸ್ ಹಾಗೂ ಇತರ ಸೌಲಭ್ಯಕ್ಕೆ ವಿನಂತಿಸಿ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಘಟಕ ವ್ಯವಸ್ಥಾಪಕ ವಿನಾಯಕ ದೇಶಭಂಡಾರಿ, ಗಜಾನನ ಪೈ, ದೇವು ಗೌಡ, ಮಹೇಶ ಭಂಡಾರಿ, ಜಯಂತ ಗೌಡ, ಶ್ರೀಧರ ಪೈ ಇತರರು ಇದ್ದರು.  | Kannada Prabha

ಸಾರಾಂಶ

ಕುಮಟಾ ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಯಡ್ತಾರೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಬೆಳ್ಳಂಗಿ ಗ್ರಾಮದ ಕಬ್ಬರ್ಗಿ ವರೆಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಶಾಸಕ ದಿನಕರ ಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿ ವಿನಂತಿಸಿದರು.

ಕುಮಟಾ: ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಯಡ್ತಾರೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಬೆಳ್ಳಂಗಿ ಗ್ರಾಮದ ಕಬ್ಬರ್ಗಿ ವರೆಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಶಾಸಕ ದಿನಕರ ಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿ ವಿನಂತಿಸಿದರು.

ದಟ್ಟ ಅರಣ್ಯ ನಡುವಿನ ಯಡ್ತಾರೆ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ಸೇತುವೆ ಇಲ್ಲ, ಪ್ರತಿನಿತ್ಯ ಗ್ರಾಮಸ್ಥರು ಕತಗಾಲ ಅಥವಾ ಕುಮಟಾ ಕಡೆಗೆ ಬರುವುದಕ್ಕೆ ಬಹಳ ಕಷ್ಟಪಡಬೇಕು. ಇಲ್ಲಿಯ ಕೂಲಿ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಂಗವಿಕಲರು, ಹಿರಿಯ ನಾಗರಿಕರು ಮತ್ತು ಉದ್ಯೋಗಸ್ಥರು ಸುಮಾರು ಐದು ಕಿ.ಮೀ. ದೂರದ ವರೆಗೆ ಕಾಲ್ನಡಿಗೆಯಲ್ಲೇ ಸಂಚರಿಸಬೇಕಾಗುತ್ತದೆ. ಸಮರ್ಪಕ ಸೇತುವೆಯೊಂದಿಗೆ ರಸ್ತೆ ಸೌಲಭ್ಯ ಇಲ್ಲದಿರುವುದೇ ಇಂಥ ಸ್ಥಿತಿಗೆ ಕಾರಣ. ಮಳೆಗಾಲದಲ್ಲಂತೂ ಪರಿಸ್ಥಿತಿ ಇನ್ನೂ ಶೋಚನೀಯವಾಗಿರುತ್ತದೆ. ರಸ್ತೆಯ ಮೇಲೇ ಹಳ್ಳ ಹರಿಯುತ್ತದೆ. ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಜನರು ರಸ್ತೆ ನಡುವಿನ ಹಳ್ಳ ದಾಟಬೇಕಾಗುತ್ತದೆ. ಕೈಲಾಗದವರನ್ನು ಹೊತ್ತುಕೊಂಡು ಸಾಗಬೇಕಾಗುತ್ತದೆ. ಯಡ್ತಾರೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ಶ್ರೀ ಕೇಶವ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಸಾಗುವ ೧.೫ ಕಿ.ಮೀ.ನಷ್ಟು ರಸ್ತೆ ಹಾಗೂ ಸೇತುವೆಯನ್ನು ನಿರ್ಮಿಸಿಕೊಟ್ಟರೆ ಇಡೀ ಗ್ರಾಮದ ಜನರಿಗೆ ಹೊಸ ಬದುಕು ನೀಡಿದಂತಾಗುತ್ತದೆ ಎಂದು ಯಡ್ತಾರೆ ಗ್ರಾಮಸ್ಥರು ಶಾಸಕರಲ್ಲಿ ವಿನಂತಿಸಿದರು. ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದೇವೇಳೆ ಗ್ರಾಮಸ್ಥರು ಇನ್ನೊಂದು ಸಮಸ್ಯೆಯ ಕುರಿತು ಶಾಸಕರ ಗಮನ ಸೆಳೆದರು. ಕಬ್ಬರ್ಗಿಯಿಂದ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕುಮಟಾ ಕಡೆಗೆ ಬರುತ್ತಾರೆ. ಆದರೆ ಬಸ್ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕುಮಟಾದಿಂದ ಬೆಳ್ಳಂಗಿಯ ಕಬ್ಬರ್ಗಿ ವರೆಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ವಿನಂತಿಸಿದರು.

ಸ್ಥಳಕ್ಕೆ ವಾಕರಸಾ ಡಿಪೋ ವ್ಯವಸ್ಥಾಪಕ ವಿನಾಯಕ ಭಂಡಾರಿ ಅವರನ್ನು ಕರೆಯಿಸಿ, ಗ್ರಾಮಸ್ಥರ ಸಮಸ್ಯೆ ಕುರಿತು ಶಾಸಕರು ಚರ್ಚಿಸಿದರು. ಬಸ್-ಸಿಬ್ಬಂದಿ ಕೊರತೆ ಇನ್ನಿತರ ಕಾರಣದಿಂದ ತಕ್ಷಣದಿಂದಲೇ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸಲು ಅಸಾಧ್ಯವಾಗಿರುವುದರಿಂದ ಯಾಣ-ಬೆಳ್ಳಂಗಿ ಮಾರ್ಗದ ಬಸ್ ವೇಳಾಪಟ್ಟಿಯನ್ನೇ ಸ್ವಲ್ಪ ಬದಲಾವಣೆ ಮಾಡಿ ಕಬ್ಬರ್ಗಿ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಬಗ್ಗೆ ನಿರ್ಣಯಿಸಲಾಯಿತು. ಮುಂದಿನ ದಿನದಲ್ಲಿ ಹೆಚ್ಚುವರಿ ಬಸ್ ಒದಗಿಸುವ ಬಗ್ಗೆ ಕ್ರಮಕೈಗೊಳ್ಳುವ ಭರವಸೆಯನ್ನು ಶಾಸಕ ದಿನಕರ ಶೆಟ್ಟಿ ನೀಡಿದರು.

ಜಿಪಂ ಮಾಜಿ ಸದಸ್ಯ ಗಜಾನನ ಪೈ, ಅಳಕೋಡ ಗ್ರಾಪಂ ಮಾಜಿ ಅಧ್ಯಕ್ಷ ದೇವು ಗೌಡ, ಮಾಜಿ ಸದಸ್ಯರಾದ ಶ್ರೀಧರ ಪೈ, ಮಹೇಶ ದೇಶಭಂಡಾರಿ, ಅಂಗವಿಕಲ ಕ್ರೀಡಾಪಟು ಪ್ರಕಾಶ ವಿ. ನಾಯ್ಕ, ಯಡ್ತಾರೆಯ ಜಯಂತ ಗೌಡ, ಗಣಪತಿ ಗೌಡ, ಕಬ್ಬರ್ಗಿಯ ಮಂಜುನಾಥ ಗೌಡ, ಗಣೇಶ ಗೌಡ, ಹುಲಿಯಮ್ಮ ಗೋವಿಂದ ಗೌಡ, ಮಾಲಿನಿ ನಾಗರಾಜ ಗೌಡ, ಪ್ರೇಮಾ ಶ್ರೀಧರ ಗೌಡ, ಶಾಂತಿ ವಿನೋದ ಗೌಡ, ಹರೀಶ ಗೌಡ, ಸಂತೋಷ ಗೌಡ, ಸುರೇಶ ಪಟಗಾರ, ವಿದ್ಯಾಧರ ಉಪಾಧ್ಯಾಯ, ಕಮಲಾ ಶಂಕರ ಗೌಡ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಅರ್ಧ ತಾಸು ಸತತ ಮಳೆ: ಹೊಳೆಯಾದ ಮುಖ್ಯರಸ್ತೆ
ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದಲ್ಲಿ ಕಠಿಣ ಕ್ರಮ: ಸಿ.ಎನ್.ಶ್ರೀಧರ್ ಎಚ್ಚರಿಕೆ