ಜಾತಿಗಣತಿ ವರದಿ ಜಾರಿಗೆ ತರುವ ಮುನ್ನ ವಿಮರ್ಶಿಸುವಂತೆ ಆಗ್ರಹ

KannadaprabhaNewsNetwork | Published : Apr 19, 2025 12:33 AM

ನಯನಜ ಕ್ಷತ್ರಿಯ ಮತ್ತು ಹಡಪದ ಸಮುದಾಯದವರು ಮೂಲಕ ಕನ್ನಡಿಗರಾಗಿದ್ದು, ನಮ್ಮೊಂದಿಗೆ ಕೊಡವ, ತುಳು ಭಾಷಿಕರಾದ ಭಂಡಾರಿ, ದೇವಾಡಿಗ, ಭಜಂತ್ರಿ ಮುಂತಾದವರಿದ್ದಾರೆ. ನಾವೆಲ್ಲರೂ ಸಾವಿರಾರು ವರ್ಷಗಳಿಂದ ಕುಲ ಕಸುಬನ್ನು ಮಾಡಿಕೊಂಡು ಕನ್ನಡದ ನೆಲದಲ್ಲಿ ನೆಲೆಸಿದ್ದರೂ 1994ರಲ್ಲಿ ರಾಜ್ಯ ಸವಿತಾ ಸಮಾಜ ಎನ್ನುವ ಹೊಸ ಜಾತಿಯನ್ನು ಸೃಷ್ಟಿಸಿ ಕನ್ನಡದ ಮಕ್ಕಳಿಗೆ ಅನ್ಯಾಯ ಮಾಡಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರದ ಉದ್ದೇಶಿತ ಜಾತಿ ಗಣತಿಯನ್ನು ಜಾರಿಗೆ ತರುವ ಮುನ್ನ ಮರು ವಿಮರ್ಶಿಸುವಂತೆ ತಾಲೂಕು ನಯನಜ ಕ್ಷತ್ರಿಯ ಸಮಾಜ ಆಗ್ರಹಿಸಿದೆ.

ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಸಮಾಜದ ಮುಖಂಡರು ಸರ್ಕಾರದ ಮುಂದಿರುವ ಕಾಂತರಾಜು ಆಯೋಗದ ಜಾತಿ ಗಣತಿ ವೈಜ್ಞಾನಿಕವಾಗಿಲ್ಲ. ಸಮಿತಿ ಸದಸ್ಯರು ಜಾತಿ ಗಣತಿ ಸಂದರ್ಭದಲ್ಲಿ ನಮ್ಮ ಸಮುದಾಯದ ಯಾವುದೇ ಮನೆಗಳಿಗೆ ಭೇಟಿ ನೀಡಿಲ್ಲ ಎಂದು ತಿಳಿಸಿದ್ದಾರೆ.

ನಯನಜ ಕ್ಷತ್ರಿಯ ಮತ್ತು ಹಡಪದ ಸಮುದಾಯದವರು ಮೂಲಕ ಕನ್ನಡಿಗರಾಗಿದ್ದು, ನಮ್ಮೊಂದಿಗೆ ಕೊಡವ, ತುಳು ಭಾಷಿಕರಾದ ಭಂಡಾರಿ, ದೇವಾಡಿಗ, ಭಜಂತ್ರಿ ಮುಂತಾದವರಿದ್ದಾರೆ. ನಾವೆಲ್ಲರೂ ಸಾವಿರಾರು ವರ್ಷಗಳಿಂದ ಕುಲ ಕಸುಬನ್ನು ಮಾಡಿಕೊಂಡು ಕನ್ನಡದ ನೆಲದಲ್ಲಿ ನೆಲೆಸಿದ್ದರೂ 1994ರಲ್ಲಿ ರಾಜ್ಯ ಸವಿತಾ ಸಮಾಜ ಎನ್ನುವ ಹೊಸ ಜಾತಿಯನ್ನು ಸೃಷ್ಟಿಸಿ ಕನ್ನಡದ ಮಕ್ಕಳಿಗೆ ಅನ್ಯಾಯ ಮಾಡಿದೆ ಎಂದು ದೂರಿದ್ದಾರೆ.

1994ರ ಪೂರ್ವದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಸವಿತಾ ಸಮಾಜವನ್ನು ಕಾಂತರಾಜು ಆಯೋಗದ ವರದಿ ಅಸ್ತಿತ್ವಕ್ಕೆ ತಂದು ನಯನಜ ಕ್ಷತ್ರಿಯ, ಹಡಪದ ಮುಂತಾದವುಗಳನ್ನು ಅತೀ ಕಡಿಮೆ ಸಂಖ್ಯೆಯಲ್ಲಿ ಗುರುತಿಸಿದೆ. ಇದರಿಂದ ಪ್ರ.ವರ್ಗ 1ಎ, ಪ್ರವರ್ಗ 1 ಬಿ, ಪ್ರವರ್ಗ 2 ಎ, ಪ್ರವರ್ಗ 2 ಬಿ, ಪ್ರವರ್ಗ 3 ಎ, ಪ್ರವರ್ಗ 3ಬಿಯಲ್ಲಿ ಪ್ರಕಟಗೊಂಡಿರುವ ಜಾತಿ ಸಮೀಕ್ಷೆಯಲ್ಲಿ ಮೂಲ ಕನ್ನಡಿಗರಾದ ನಯನಜ ಕ್ಷತ್ರಿಯ ಜಾತಿ ಹೆಸರು ಮತ್ತು ಜನಸಂಖ್ಯೆ ದಾಖಲಿಸಿಲ್ಲ.

ಆದ್ದರಿಂದ ಕಾಂತರಾಜು ಆಯೋಗದ ಜಾತಿ ಗಣತಿ ಮರು ವಿಮರ್ಶೇ ಮಾಡಬೇಕು. ಪ್ರತಿಯೊಂದು ಜನಾಂಗದ ಆಧಾರ್ ಕಾರ್ಡ್ ಮತ್ತು ಶಾಲಾ ದಾಖಲಾತಿಗಳನ್ನು ಗಣತಿ ವೇಳೆ ದಾಖಲಿಸಬೇಕು. ನಯನಜ ಕ್ಷತ್ರಿಯ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಯಜ ಕ್ಷತ್ರಿಯ ಸಮಾಜವನ್ನು ಗುರುತಿಸುವಲ್ಲಿ ವಿಫಲವಾಗಿರುವ ಜಾತಿ ಗಣತಿಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅಂಗೀಕರಿಸದೆ ಮರು ವಿಮರ್ಶೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಮಾಜದ ತಾಲೂಕು ಅಧ್ಯಕ್ಷ ಕೆ.ಎಂ.ಶಿವಪ್ಪ, ಸದಸ್ಯರಾದ ಕೆ.ಆರ್.ಮಂಜುನಥ್, ಕೆ.ವಿ.ಸೋಮಶೇಖರ್, ನಂಜುಂಡ, ಗೋವಿಂದರಾಜು, ರಾಮಕೃಷ್ಣ, ಎಚ್.ಎಸ್.ಪುಟ್ಟಸ್ವಾಮಿ, ವೆಂಕಟರಾಮು, ಕುಮಾರ್, ಸಂತೋಷ್, ಎಚ್.ಎನ್.ಮಂಜುನಾಥ್ ಮತ್ತು ಕೆ.ಎಂ.ಗಿರೀಶ್ ಒಗ್ಗೂಡಿ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.