ಬ್ಯಾಡಗಿ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಮಟನ್, ಚಿಕನ್ ಹಾಗೂ ಮೀನು ಅಂಗಡಿಗಳನ್ನು ಪುರಸಭೆ ನಿರ್ಮಿಸಿರುವ ಕಟ್ಟಡಗಳಿಗೆ ಸ್ಥಳಾಂತರಿಸುವಂತೆ ಮಂಗಳವಾರ ಸಾರ್ವಜನಿಕರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಪಾಂಡುರಂಗ ಸುತಾರ ಮಾತನಾಡಿ, ಸಮಸ್ಯೆ ಕುರಿತಂತೆ ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಸಾರ್ವಜನಿಕರ ಮನವಿಗೂ ಸ್ಪಂದಿಸದಿರುವ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಒಂದು ವೇಳೆ ನಮ್ಮ ಮನವಿ ಪುರಸ್ಕಾರ ಮಾಡದೇ ಇದ್ದಲ್ಲಿ ನಾವು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದ್ದೇವೆ ಎಂದು ಎಚ್ಚರಿಸಿದರು.ಕೋಟ್ಯಂತರ ರುಪಾಯಿ ನೀರಲ್ಲಿ ಹೋಮ: ಫರೀದಾಬಾನು ನದೀಮುಲ್ಲಾ ಮಾತನಾಡಿ, ಮಟನ್, ಚಿಕನ್ ಹಾಗೂ ಮೀನು ಅಂಗಡಿಗಳಿಗಾಗಿಯೇ ಸ್ಥಳೀಯ ಪುರಸಭೆ ಕೋಟ್ಯಂತರ ವೆಚ್ಚ ಮಾಡಿ ಸಂತೆ ಮೈದಾನದಲ್ಲಿ ಮಳಿಗೆ ನಿರ್ಮಿಸಿದೆ. ಆದ್ದರಿಂದ ತಕ್ಷಣ ಕ್ರಮ ಕೈಗೊಂಡು, ಪಟ್ಟಣದ ವಿವಿಧ ಭಾಗಗಳಲ್ಲಿ ಇರುವ ಎಲ್ಲಾ ಮಟನ್, ಚಿಕನ್ ಹಾಗೂ ಮೀನು ಅಂಗಡಿಗಳನ್ನು ಸಂತೆ ಮೈದಾನದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ಆಗ್ರಹಿಸಿದರು, ಈ ವೇಳೆ ಮಹೇಶ ಗಿರಣಿ ಲಕ್ಷಣ ಆಯನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.