ನರಗುಂದ: ಪಟ್ಟಣದ ಭಾಸ್ಕರರಾವ್ ಭಾವೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಡಯಾಲಿಸಿಸ್ ಘಟಕ ಆರಂಭಿಸುವಂತೆ ಆಗ್ರಹಿಸಿ ಮೂತ್ರಪಿಂಡದ ರೋಗಿಗಳು ಧರಣಿ ನಡೆಸಿದರು.
ಈಗಾಗಲೇ ಆಸ್ಪತ್ರೆಯಲ್ಲಿ ಎರಡೇ ಡಯಾಲಿಸಿಸ್ ಘಟಕಗಳು ಇದ್ದು, 17 ರೋಗಿಗಳು ಇದ್ದಾರೆ. ನಿರಂತರ ಯಂತ್ರಗಳು ಡಯಾಲಿಸಿಸ್ ಮಾಡಬೇಕಾದ ಅನಿವಾರ್ಯತೆ ಇದೆ. ಬೆಳಗ್ಗೆ 6 ಗಂಟೆಗೆ ಆರಂಭವಾದರೆ ಮೂರು ಪಾಳೆಯಗಳಲ್ಲಿ ಸಂಜೆ 6 ಗಂಟೆಯವರೆಗೂ ನಡೆಯುತ್ತದೆ.
ಆದರೆ ಮೂರೇ ಪಾಳೆಯಗಳಲ್ಲಿ ಎಲ್ಲ 17 ರೋಗಿಗಳಿಗೆ ಡಯಾಲಿಸಿಸ್ ಸಾಧ್ಯವಿಲ್ಲ. ಆದ್ದರಿಂದ ವೈದ್ಯರು ನಾಲ್ಕನೇ ಪಾಳೆಯದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಿ, ನಾವು ಸೇವೆ ನೀಡಲು ಸಿದ್ಧರಿದ್ದೇವೆ ಎನ್ನುತ್ತಾರೆ. ಆದರೆ ಸಂಜೆ 6 ಗಂಟೆ ನಂತರ ಡಯಾಲಿಸಿಸ್ ಮಾಡಿಸಿಕೊಂಡು ಮನೆಗೆ, ಬೇರೆ ಊರುಗಳಿಗೆ ನಾವು ತೆರಳುವುದು ಹೇಗೆ?, ಇದು ಅಸಾಧ್ಯ. ಜತೆಗೆ ವಯಸ್ಸಾದ, ಗಂಭೀರವಾದ ಕಾಯಿಲೆ ಹೊಂದಿದವರಿದ್ದೇವೆ. ನಾಲ್ಕನೇ ಪಾಳೆಯದಲ್ಲಿ ಚಿಕಿತ್ಸೆ ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಇರುವ ಎರಡು ಯಂತ್ರಗಳು ಸಾಕಾಗದು. ಒಂದು ವೇಳೆ ತಾಂತ್ರಿಕ ಸಮಸ್ಯೆ ಉಂಟಾದರೆ ಬೇರೆ ಯಂತ್ರಗಳು ಇಲ್ಲ. ಆದ್ದರಿಂದ ಹೆಚ್ಚುವರಿ ಎರಡು ಡಯಾಲಿಸಿಸ್ ಘಟಕಗಳನ್ನು ಆರಂಭ ಮಾಡಬೇಕೆಂದರು. ರೋಗಿಗಳ ಮನವಿ ಸ್ವೀಕರಿಸಿ ಡಾ. ಜಡೇಶ ಭದ್ರಗೌಡ್ರ ಮಾತನಾಡಿ, ಎರಡು ಡಯಾಲಿಸಿಸ್ ಘಟಕಗಳಿವೆ. ಆದರೆ ನಮ್ಮಲ್ಲಿ ಈಗಾಗಲೇ 17 ರೋಗಿಗಳು ಇದ್ದಾರೆ. 6 ರೋಗಿಗಳು ವೇಟಿಂಗನಲ್ಲಿ ಇದ್ದಾರೆ. ಇವರೆಲ್ಲರಿಗೂ ನಿಯಮಿತವಾಗಿ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಆದರೆ ನಿರಂತರ ಮೂರು ಪಾಳೆಯಗಳಲ್ಲಿ ಯಂತ್ರಗಳು ಹಾಗೂ ಮೂರು ಸಿಬ್ಬಂದಿ ಸೇವೆ ನಡೆಯುತ್ತಿದೆ. ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಘಟಕ ನಮ್ಮ ಆಸ್ಪತ್ರೆಯಲ್ಲಿ ಮಾತ್ರ ಇದೆ.ಆದ್ದರಿಂದ ತಾಲೂಕಿನ ಜತೆಗೆ ಬೇರೆ ತಾಲೂಕಿನ ರೋಗಿಗಳು ಇಲ್ಲಿಗೆ ಬರುತ್ತಿದ್ದಾರೆ. ಇದರಿಂದ ಮೂರು(ಸರತಿ)ಪಾಳೆಯದಿಂದ ನಾಲ್ಕನೇ ಪಾಳೆಯಕ್ಕೂ ಹೆಚ್ಚಿಸಲಾಗಿದೆ. ಇರುವ ಯಂತ್ರಗಳಲ್ಲಿ ಇದು ಸಾಕಾಗದು. ಆದ್ದರಿಂದ ಹೆಚ್ಚುವರಿ ಘಟಕಕ್ಕೆ ಜಿಲ್ಲಾ ಹಾಗೂ ರಾಜ್ಯ ಆರೋಗ್ಯ ಇಲಾಖೆಗೆ, ಶಾಸಕರಿಗೂ ಮನವಿ ಮಾಡಲಾಗಿದೆ. ಯಂತ್ರಗಳು ಬರುವವರೆಗೆ ನಾಲ್ಕನೇ ಪಾಳೆ ನಡೆಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಡಿಸೆಂಬರ್ನಲ್ಲಿ ಆಸ್ಪತ್ರೆಗೆ ಬಂದು ಪರಿಶೀಲನೆ ಮಾಡಿ ತೆರಳಿದ್ದು, ನಾಲ್ಕನೇ ಪಾಳೆಯಕ್ಕೆ ಸಿಬ್ಬಂದಿ ನೀಡಿದ್ದಾರೆ.