ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಪಂನ ಯರಮುಖದವರೆಗೆ ಶಿರಸಿ- ಉಳವಿ ಬಸ್ ಸಂಚರಿಸಲು ಗುಂದದ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಶಿರಸಿ- ಉಳವಿ ಬಸ್ ಈ ಹಿಂದೆ ನಂದಿಗದ್ದೆ ಯರಮುಖದ ಮೇಲಿಂದ ಉಳವಿಗೆ ಹೋಗುತ್ತಿತ್ತು. ಆದರೆ ಈ ವರ್ಷದ ಮಳೆಗಾಲದ ಪೂರ್ವದಲ್ಲಿ ತಾಲೂಕಿನ ಫೋಟೋಲಿ, ಗುಂದ ಉಳವಿ ಮಾರ್ಗದ ಕೈಟಾ ನಾಲೆಯ ಸೇತುವೆ ಕುಸಿತವಾದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರ ನಿಂತಿದೆ. ಈ ರಸ್ತೆಯಲ್ಲಿ ಬರುವ ಎಲ್ಲ ಬಸ್ ಗಳು ಜೋಯಿಡಾ ಮೇಲಿಂದ ಉಳವಿಗೆ ಹೋಗುತ್ತಿರುವ ಕಾರಣ ಅವುರ್ಲಿ, ನಂದಿಗದ್ದೆ, ಗುಂದ, ಯರಮುಖ, ಸೇರಿದಂತೆ ಹತ್ತಾರು ಹಳ್ಳಿ ಗಳ ಜನತೆಗೆ ತೊಂದರೆ ಆಗಿದೆ. ಈಗ ಶಿರಸಿ ಉಳವಿ ಬಸ್ ಜೋಯಿಡಾ ಮೇಲಿಂದ ಉಳವಿಗೆ ಬಂದು ಮುಂದೆ ನಂದಿಗದ್ದೆ ಮೂಲಕ ಯರಮುಖಕ್ಕೆ ಬಂದು ವಸತಿ ಮಾಡಿದರೆ ಈ ಹತ್ತಾರು ಹಳ್ಳಿಗಳ ಜನತೆಗೆ ಮೊದಲಿನಂತೆ ಅನುಕೂಲವಾಗುತ್ತದೆ. ವ್ಯವಹಾರ ಇರುವ ರೈತರು ಶಿರಸಿ ಯಲ್ಲಾಪುರ ಮಾರುಕಟ್ಟೆಗೆ ಹೋಗಲು ಅನುಕೂಲಕರ ಎಂದು ಸ್ಥಳೀಯರು ಹೇಳುತ್ತಾರೆ.
ಹಾಗೇ ರಾತ್ರಿ ವಸತಿಗೆ ಬರುವ ದಾಂಡೇಲಿ- ತಮ್ಮಣಿಗೆ ಬಸ್ ದಾಂಡೇಲಿಯಿಂದ ಮದ್ಯಾಹ್ನ ತಮ್ಮಣಿಗೆವರೆಗೆ ಬಂದರೆ ಈ ಎರಡೂ ಬಸ್ ಗಳಿಂದ ಗ್ರಾಮಸ್ಥರು ನೆಮ್ಮದಿಯಿಂದ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ಅನುಕೂಲವಾಗುತ್ತದೆ. ತಮ್ಮಣಿಗೆ ಬಸ್ಸು ಈಗ ಪ್ರತಿದಿನ ರಾತ್ರಿ 10 ಗಂಟೆ ಮೇಲೆ ಬರುತ್ತದೆ. ಹೀಗಾಗಿ ಬಸ್ ನಲ್ಲಿ ಯಾರೂ ಇರದ ಕಾರಣ ಮಹಿಳೆಯರು ಬಸ್ ಹತ್ತಲು ಹೆದರುತ್ತಾರೆ. ರಾತ್ರಿ ಬಸ್ ಕೆಟ್ಟು ನಿಂತರೆ ಗತಿಯೇನು ಎಂದು ಹೆಸರು ಹೇಳಲು ಇಚ್ಚಿಸದ ಮಹಿಳೆಯರು ಹೇಳು ತ್ತಾರೆ.ಮಧ್ಯಾಹ್ನ ಬಸ್ ಬಂದರೆ ನಮ್ಮ ಅಂಚೆ ಇಲಾಖೆಯವರಿಗೆ ತುಂಬ ಅನುಕೂಲವಾಗುತ್ತಿತ್ತು. ಈಗ ನಾವು 40 ಕಿ.ಮೀ. ದೂರದಿಂದ ಬೈಕ್ ಮೇಲೆ ಅಂಚೆ ಬ್ಯಾಗ್ ತರುವುದು ತುಂಬ ತೊಂದರೆ, ಜೊತೆಗೆ ಕರಡಿ ಹುಲಿಗಳು ಓಡಾಡುವ ಪ್ರದೇಶ ಏನು ಮಾಡೋಣ ಎಂದು ತಮ್ಮ ಕಷ್ಟ ಹೇಳುತ್ತಾರೆ.
ಎಲ್ಲ ತಿಳಿದ ವಾಯವ್ಯ ಸಾರಿಗೆ ಇಲಾಖೆಯವರು ಮಾನವೀಯತೆ ದೃಷ್ಟಿಯಿಂದ ಜೊತೆಗೆ ಸರ್ಕಾರದ ಸ್ತ್ರೀ ಭಾಗ್ಯವಾದ ಸಾರಿಗೆ ಭಾಗ್ಯ ಮಹಿಳೆಯರಿಗೆ ಸಿಗುವ ದೃಷ್ಟಿಯಿಂದಲಾದರೂ ಹೊಸ ಸೇತುವೆ ಆಗುವವರೆಗೆ ಈ ಎರಡೂ ಬಸ್ ಗಳನ್ನು ಸಂಜೆ ಮತ್ತು ಮಧ್ಯಾಹ್ನ ಬಿಡುವ ಮೂಲಕ ಗ್ರಾಮೀಣ ಜನರ ಆರೋಗ್ಯ, ಶಿಕ್ಷಣ, ವ್ಯವಹಾರ, ಇನ್ನಿತರ ವಿಷಯಗಳಿಗೆ ಅನುಕೂಲ ಮಾಡಿ ಕೊಡಲಿ ಎಂದು ಗ್ರಾಮಸ್ಥರು ದಾಂಡೇಲಿ, ಯಲ್ಲಾಪುರ ಘಟಕಗಳ ಸಾರಿಗೆ ಅಧಿಕಾರಿಗಳಿಗೆ ಆಗ್ರಸಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿ ಗಳಿಗೆ, ತಾಲೂಕು ದಂಡಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.