ಕನ್ನಡಪ್ರಭ ವಾರ್ತೆ ಹಿರಿಯೂರು
ಗೌನಹಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದು ಯುವಕರು ಮದ್ಯ ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟಗಾರರಿಗೆ ಅಬಕಾರಿ ಇಲಾಖೆಯ ಕಿಂಚಿತ್ತೂ ಭಯವಿಲ್ಲದಂತಾಗಿದೆ. ಕೆಂಚಪ್ಪ ಎನ್ನುವ ಯುವಕ ಕುಡಿದ ಮತ್ತಿನಲ್ಲಿ ಬಿದ್ದು ತುಮಕೂರು ಆಸ್ಪತ್ರೆಗೆ ದಾಖಲಿಸಿದರು ಬದುಕುಳಿಯಲಿಲ್ಲ. ಇದೀಗ ಮೃತ ದೇಹವನ್ನು ಊರಿಗೆ ತರಲಾಗುತ್ತಿದೆ. ಹಲವು ಬಾರಿ ಮನವಿ ನೀಡಿದರು ಸಹ ಅಕ್ರಮ ಮದ್ಯ ಮಾರಾಟ ನಿಲ್ಲಿಸುತ್ತಿಲ್ಲ. ಇನ್ನಾದರೂ ಅಲ್ಲಿನ ಅಕ್ರಮ ಮದ್ಯ ಮಾರಾಟ ತಡೆಗಟ್ಟಿ ಗ್ರಾಮದ ಜನರ ಜೀವ ಉಳಿಸಿ ಎಂದು ಮನವಿ ಮಾಡಿದರು.
ಈ ವೇಳೆ ಬಿಡಿಎಸ್ಎಸ್ ರಾಜ್ಯ ಕಾರ್ಯಾಧ್ಯಕ್ಷ ತಿಮ್ಮರಾಜ್ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ. ಈಗಾಗಲೇ ಅಬಕಾರಿ ಇಲಾಖೆಗೆ ನೂರಾರು ಹಳ್ಳಿಗಳ ಜನರು ಮನವಿ ಮಾಡಿದರು ಸಹ ಅವರಿಂದ ಅಕ್ರಮ ಮದ್ಯ ಮಾರಾಟ ಮತ್ತು ಸಾಗಾಟ ತಡೆಯಲು ಆಗಿಲ್ಲ. ಇತ್ತೀಚಿಗೆ ಕುಡಿತದಿಂದಲೇ ಆಗುತ್ತಿರುವ ಸಾವುಗಳ ಸಂಖ್ಯೆ ಹೆಚ್ಚುತ್ತಿದೆ. ಈಗ ಭೂತಯ್ಯನಹಟ್ಟಿ ಯುವಕ ಹಾಗೂ ಸೂರಗೊಂಡನಹಳ್ಳಿಯ ವ್ಯಕ್ತಿ ಮಧ್ಯದ ಕಾರಣಕ್ಕಾಗಿಯೇ ಮೃತಪಟ್ಟಿದ್ದಾರೆ. ಅಬಕಾರಿ ಅಧಿಕಾರಿಗಳಿಗೆ ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ದಯಮಾಡಿ ಬೇರೆ ಕಡೆ ಹೋಗಬಹುದು. ಕೆಲಸ ಮಾಡುವ ಯಾರಾದರೂ ಅಧಿಕಾರಿಗಳು ಬರುತ್ತಾರೆ. ಬಡವರ ಜೀವಗಳಾದರು ಉಳಿಯುತ್ತವೆ. ಈಗಲಾದರೂ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಕ್ರಮ ವಹಿಸದಿದ್ದರೆ ನಮ್ಮ ಸಂಘಟನೆ ವತಿಯಿಂದ 10ಕ್ಕೂ ಹೆಚ್ಚು ಹಳ್ಳಿಗಳ ಜನರೊಂದಿಗೆ ಅಬಕಾರಿ ಇಲಾಖೆ ಮುಂಭಾಗ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆ ಬಿಡಿಎಸ್ಎಸ್ ರಾಜ್ಯ ವಿಭಾಗೀಯ ಅಧ್ಯಕ್ಷ ಕೊಟ್ಟಿಗೆ ರಾಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಹುಲಿಗೆಪ್ಪ, ಶ್ರೀನಿವಾಸ್, ಈರಣ್ಣ, ನಾಗರಾಜ್, ಸೋಮಶೇಖರ್, ವೀರೇಶ್, ತಿಮ್ಮರೆಡ್ಡಿ, ನಾಗರಾಜ್, ತಿಮ್ಮಯ್ಯ, ಲಕ್ಷ್ಮಿ ದೇವಿ, ಪುಟ್ಟಮ್ಮ, ಅಂಜಿನಮ್ಮ, ಸಾವಿತ್ರಮ್ಮ, ಹನುಮಕ್ಕ, ಸಿದ್ದಮ್ಮ, ಮಮತಾ, ತಿಮ್ಮಕ್ಕ ಮುಂತಾದವರು ಹಾಜರಿದ್ದರು.