- ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ: ಕೃಷಿ ಅಧಿಕಾರಿ ಮಾಹಿತಿ
- - -ಚನ್ನಗಿರಿ: ತಾಲೂಕಿನ ಮಾದಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಚಂದ್ರಶೇಖರ್ ಮತ್ತು ಜಯದೇವ ಎಂಬುವರು ಬೆಳೆದಿದ್ದ ಮೆಕ್ಕೆಜೋಳದ ಹೊಲದಲ್ಲಿ ನ್ಯಾನೊ ಯೂರಿಯಾವನ್ನು ಡ್ರೋನ್ ಮೂಲಕ 20 ಎಕರೆ ಪ್ರದೇಶದಲ್ಲಿ ಸಿಂಪರಣೆ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಲಾಯಿತು. ಕೃಷಿ ಅಧಿಕಾರಿ ಮೇತಾಬ್ ಆಲಿ ರೈತರ ಉದ್ದೇಶಿಸಿ ಮಾತನಾಡಿ, ಹರಳು ರೂಪದ ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ದ್ರವರೂಪದ ನ್ಯಾನೊ ಯೂರಿಯಾ ಆವಿಷ್ಕರಿಸಲಾಗಿದೆ. ಈ ದ್ರವಗೊಬ್ಬರವನ್ನು ಡ್ರೋನ್ ಮೂಲಕ ಸಿಂಪರಣೆ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಬೆಳೆಗಳಿಗೆ ಉತ್ತಮವಾದ ಔಷಧಿ ಲಭ್ಯವಾದಂತಾಗಲಿದೆ ಎಂದರು.
20 ಎಕರೆ ಪ್ರದೇಶದಲ್ಲಿ ನ್ಯಾನೊ ಗೊಬ್ಬರ ಸಿಂಪಡಿಸಲಾಗುತ್ತಿದೆ. ಮುಂದಿನ 10 ದಿನಗಳ ನಂತರ ಬೆಳೆ ಸಮೃದ್ಧವಾಗಿ ಬೆಳೆಯಲಿದೆ. ಈಗಾಗಲೇ ತಾಲೂಕಿನ ಹಲವಾರು ಕಡೆ ನ್ಯಾನೊ ಯೂರಿಯಾ ಗೊಬ್ಬರ ಬಳಸಲಾಗಿದೆ. ಈ ದ್ರವರೂಪದ ಗೊಬ್ಬರ ನೇರವಾಗಿ ಬೆಳೆಯ ಎಲೆಗಳಿಗೆ ಬೀಳುವುದರಿಂದ ಗಿಡಗಳು ಸಾರಜನಕ ಹೀರಿಕೊಂಡು ಉತ್ತಮವಾಗಿ ಬೆಳೆಯುತ್ತವೆ ಎಂದು ತಿಳಿಸಿದರು.ಪ್ರತಿ ಎಕರೆಗೆ ಕೇವಲ 500 ಎಂ.ಎಲ್. ನ್ಯಾನೋ ಯೂರಿಯಾ ಬೇಕಾಗುತ್ತದೆ. ಡ್ರೋನ್ ಮೂಲಕ 10 ಲೀಟರ್ ನೀರಿಗೆ ದ್ರವರೂಪದ ನ್ಯಾನೊ ಗೊಬ್ಬರವನ್ನು 500 ಎಂ.ಎಲ್. ಬೆರೆಸಿ ಪ್ರತಿ ಎಕರೆ ಬೆಳೆಗಳಿಗೆ ಸಿಂಪಡಿಸಬಹುದಾಗಿದೆ. ಇದರಿಂದ ರೈತರಿಗೆ ಖರ್ಚು ಸಹ ಕಡಿಮೆಯಾಗುವುದು. ಇಫ್ಕೋ ಸಂಸ್ಥೆಯಿಂದ ಡ್ರೋಣ್ ಮೂಲಕ 1 ಎಕರೆ ಸಿಂಪರಣೆ ಮಾಡಲು ₹400 ದರ ನಿಗದಿಪಡಿಸಲಾಗಿದೆ. ಇಚ್ಛೆಯುಳ್ಳ ರೈತರು ಕೃಷಿ ಇಲಾಖೆ ಸಂಪರ್ಕಿಸಬಹುದು ಎಂದು ಸಲಹೆ ನೀಡಿದರು. ಈ ಸಂದರ್ಭ ರೈತರು ಇದ್ದರು.
- - - -19ಕೆಸಿಎನ್ಜಿ3.ಜೆಪಿಜಿ:ಚನ್ನಗಿರಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ನ್ಯಾನೊ ಗೊಬ್ಬರವನ್ನು ಡ್ರೋನ್ ಮೂಲಕ ಸಿಂಪಡಿಸುವ ಪ್ರಾತ್ಯಕ್ಷಿತೆ ನಡೆಸಲಾಯಿತು.