ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪಕನ್ನಡಪ್ರಭ ವಾರ್ತೆ ರಾಯಚೂರು
ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮಪಾಲು ಪಡೆಯಲು ಎಲ್ಲ ಹಿಂದುಳಿದ, ಶೋಷಿತ ಸಮಾಜದವರು ಒಗ್ಗಟ್ಟು ಪ್ರದರ್ಶನ ಮಾಡುವ ಅಗತ್ಯ ಇದೆ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಹೇಳಿದರು.ಸ್ಥಳೀಯ ಮಡಿವಾಳ ಸಮಾಜದ ಸಮುದಾಯ ಭವನದಲ್ಲಿ ಜ.28 ರಂದು ಚಿತ್ರದುರ್ಗದಲ್ಲಿ ನಡೆಯುವ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿ, ಸ್ವತಂತ್ರ ದೊರೆತ ನಂತರ ಹಿಂದುಳಿದ ವರ್ಗಗಳ ಸ್ಥಿತಿಗತಿ ಅಧ್ಯಯನಕ್ಕೆ ರವಾನೆಯಾದ ಆಯೋಗದಿಂದ ನೀಡಿದ ಎಲ್ಲ ವರದಿಗಳಿಗೂ ಮುಂದುವರಿದ ಜನಾಂಗದವರು ವಿರೋಧ ಮಾಡಿಕೊಂಡು ಬಂದಿದ್ದು, ಈಗಲೂ ಸಹ ಕಾಂತರಾಜ ವರದಿ ಜಾರಿಗೆ ವಿರೋಧಿಸುತ್ತಿದ್ದಾರೆ. ಅದನ್ನು ನಾವು ಪ್ರಬಲವಾಗಿ ಖಂಡಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಸಲಹೆ ಮಾಡಿದರು.
ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ನಮ್ಮ ಜನಸಂಖ್ಯೆಗನುಗುಣವಾಗಿ ಸಿಗಬೇಕಾದ ಪಾಲು ಸಿಗುತ್ತಿಲ್ಲ. ನಮಗೆ ಸಿಗಬೇಕಾದ ಸೌಲಭ್ಯಗಳು ಮುಂದುವರಿದ ಜಾತಿಗಳು ಕಬಳಿಸುತ್ತಿದ್ದರೂ ನಾವು ವೌನ ವಹಿಸಿದ್ದೇವೆ. ಶೇ.2ರಷ್ಟು ಇರುವ ಜನಾಂಗದ ವರಿಗೆ ಶೇ. 10ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ, ಶೇ.56 ರಷ್ಟಿರುವ ಹಿಂದುಳಿದ ಸಮಾಜದವರಿಗೆ ಕೇವಲ ಶೇ.27ರಷ್ಟು ಮಾತ್ರ ಇದೆ. ಇಂತಹ ಅನ್ಯಾಯ ಕಳೆದ ಏಳು ದಶಕದಿಂದಲೂ ಸಹಿಸುತ್ತ ಬಂದಿದ್ದೇವೆ. ಆದರೆ, ಈಗ ಅದನ್ನು ಮೆಟ್ಟಿ ನಿಂತು ಕಾಂತರಾಜ್ ವರದಿ ಜಾರಿ ಮಾಡಲು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ನಮ್ಮ ಹಕ್ಕು ಪಡೆಯಬೇಕಾಗಿದೆ ಎಂದರು.ಮುಖಂಡರಾದ ಡಾ.ರಝಾಕ್ ಉಸ್ತಾಾದ್, ಮಾಡಗಿರಿ ನರಸಿಂಹಲು,ಮಹ್ಮದ್ ಶಾಲಂ, ಎಂ.ಈರಣ್ಣಘಿ, ಬಿ.ವೆಂಕಟಸಿಂಗ್, ವೆಂಕಟರಾಮಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಚೂರು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ವಹಿಸಿದ್ದರು. ಸಭೆಯಲ್ಲಿ ದಲಿತ,ಹಿಂದುಳಿದ,ಆದಿವಾಸಿ,ಅಲೆಮಾರಿ,ಅಲ್ಪಸಂಖ್ಯಾತ ಮತ್ತು ಜನಪರ ಸಂಘಟನೆಗಳ ಮುಖಂಡರು,ಪದಾಧಿಕಾರಿಗಳು,ಸದಸ್ಯರು ಇದ್ದರು.