ಕನ್ನಡಪ್ರಭ ವಾರ್ತೆ ಶಿಕಾರಿಪುರ
ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ನೀಡಿದ ಪೊಲೀಸ್ ಇಲಾಖೆ ಇದೀಗ ಟಿಪ್ಪು ಜಯಂತಿ ಅಂಗವಾಗಿ ಭೀಮ್ ಪಥಸಂಚಲನಕ್ಕೆ ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಪ್ರಭಾವಶಾಲಿಗಳ ಒತ್ತಡಕ್ಕೆ ಮಣಿದು ಅನುಮತಿ ನಿರಾಕರಿಸುತ್ತಿದ್ದಾರೆ ಎಂದು ಕೆಡಿಪಿ ಸದಸ್ಯ ಅಹಿಂದ ಹೋರಾಟಗಾರ ರಾಘವೇಂದ್ರ ನಾಯ್ಕ ಆರೋಪಿಸಿದರು.ಪಟ್ಟಣದ ಸುದ್ದಿಮನೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅಪ್ರತಿಮ ದೇಶಭಕ್ತ,ಬ್ರಿಟೀಷರ ವಿರುದ್ದ ಮಗನನ್ನು ಒತ್ತೆಯಾಳಾಗಿರಿಸಿ ಹೋರಾಡಿದ ಸಾಹಸಿ,ಶೂರ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಭೀಮ ಪಥ ಸಂಚಲನ ನಡೆಸಲು ತಾಲೂಕು ಆಡಳಿತ,ರಕ್ಷಣಾ ಇಲಾಖೆ ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಅನುಮತಿ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ 17 ರಂದು ಟಿಪ್ಪು ಜಯಂತಿ ಆಂಗವಾಗಿ ತಾಲೂಕಿನ ಶಿರಾಳಕೊಪ್ಪದಲ್ಲಿ ದ.ಸಂ.ಸ,ವಿವಿಧ ಪ್ರಗತಿಪರ ಸಂಘಟನೆ ಹಾಗೂ ಅಲ್ಪಸಂಖ್ಯಾತರ ಸಂಘಟನೆ ನೇತೃತ್ವದಲ್ಲಿ ಭೀಮ ಪಥಸಂಚಲನಕ್ಕೆ ಅನುಮತಿಗಾಗಿ ಕಳೆದ ಕೆಲ ದಿನದ ಹಿಂದೆ ರಕ್ಷಣಾ ಇಲಾಖೆಗೆ ಸಲ್ಲಿಸಿದ ಮನವಿಗೆ ಇದೀಗ ಕಾನೂನು ಸುವ್ಯವಸ್ಥೆ ಜತೆಗೆ ಸರ್ಕಾರ ಟಿಪ್ಪು ಜಯಂತಿಗೆ ಪಥಸಂಚಲನಕ್ಕೆ ಅನುಮತಿ ನೀಡದಂತೆ ಮೌಖಿಕವಾಗಿ ಸೂಚಿಸಿದ್ದು ಇದರೊಂದಿಗೆ ಗುಪ್ತಚರ ವರದಿ ಮೇರೆಗೆ ಅನುಮತಿ ನಿರಾಕರಿಸಲಾಗಿದೆ ಎಂಬ ಅನುಮಾನಾಸ್ಪದ ಹೇಳಿಕೆ ಬಗ್ಗೆ ಸರ್ಕಾರದ ಸುತ್ತೋಲೆ ನೀಡದೆ ಪೊಲೀಸ್ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ದೂರಿದ ಅವರು ಅನುಮತಿ ನೀಡದಿದ್ದಲ್ಲಿ ರಾಜ್ಯದಲ್ಲಿಯೇ ಟಿಪ್ಪು ಜಯಂತಿ ಆಚರಣೆ ಬಗ್ಗೆ ಸರ್ಕಾರ ಸ್ಪಷ್ಟ ನಿರ್ದಾರ ಕೈಗೊಳ್ಳುವ ರೀತಿಯ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ತಾ.ದ.ಸಂ.ಸ (ಅಂಬೇಡ್ಕರ್ ವಾದ) ಸಂಚಾಲಕ ಜಗದೀಶ್ ಚುರ್ಚುಗುಂಡಿ ಮಾತನಾಡಿ,ನೋಂದಣಿಯಾಗದ ರಾ.ಸ್ವಂ.ಸೇ ಸಂಘದ ಪಥಸಂಚಲನಕ್ಕೆ ಅನುಮತಿ ನೀಡುವ ರಕ್ಷಣಾ ಇಲಾಖೆ ಸಂವಿಧಾನಾತ್ಮಕವಾಗಿ ನೋಂದಣಿಯಾದ ದ.ಸಂ.ಸ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿ ಕಾನೂನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿದರು.
ಟಿಪ್ಪು ಜಯಂತಿ ಶೀರ್ಷಿಕೆ ಹೊರತುಪಡಿಸಿದಲ್ಲಿ ಮಾತ್ರ ಅನುಮತಿ ನೀಡಲಾಗುವುದು ಎಂಬ ಅಧಿಕಾರಿಗಳ ವರ್ತನೆ ಅಕ್ಷಮ್ಯವಾಗಿದ್ದು ದಲಿತರ,ಅಲ್ಪಸಂಖ್ಯಾತರ ಸಹಿತ ಎಲ್ಲರ ಮತ ಪಡೆದುಕೊಳ್ಳುವ ಜನಪ್ರತಿನಿಧಿಗಳು ನಂತರದಲ್ಲಿ ಒಡೆದಾಳುವ ನೀತಿ ಅನುಸರಿಸುತ್ತಾರೆ ಪಥಸಂಚಲನಕ್ಕೆ ಅನುಮತಿ ನೀಡದಿದ್ದಲ್ಲಿ ಶೀಘ್ರದಲ್ಲಿಯೇ ಸಮಾನ ಮನಸ್ಕ ಸಂಘಟನೆಗಳ ಜತೆ ಚರ್ಚಿಸಿ ಹೋರಾಟದ ರೂಪುರೇಷೆಯ ಬಗ್ಗೆ ನಿರ್ದರಿಸಲಾಗುವುದು ಎಂದು ತಿಳಿಸಿದರು.ಶಿರಾಳಕೊಪ್ಪ ಅಂಜುಮನ್ ಇಸ್ಲಾಂ ಸಮಿತಿ ಪ್ರ.ಕಾ ಎಚ್.ಸೈಯದ್ ಹಾಶೀಂ ಮಾತನಾಡಿ, ಕಳೆದ 6 ಕ್ಕೆ ಸಲ್ಲಿಸಿದ ಮನವಿ ಬಗ್ಗೆ ಇದೀಗ ನಿರಾಕರಿಸುತ್ತಿರುವ ಡಿವೈಎಸ್ಪಿ ಟಿಪ್ಪು ಜಯಂತಿ ಪಥಸಂಚಲನಕ್ಕೆ ಅನುಮತಿ ನೀಡದಂತೆ ಸರ್ಕಾರದ ಸುತ್ತೋಲೆ ನೀಡಿದಲ್ಲಿ ಸಂಬಂದಿಸಿದ ಸಚಿವರ ಬಳಿ ತೆರಳಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
ಶಿರಾಳಕೊಪ್ಪದ ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜಾಸಾಬ್, ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸುನೀಲ್ ಬನ್ನೂರು, ದ.ಸಂ.ಸ ಸಂ.ಸಂಚಾಲಕ ಮಂಜು, ಬಸವನಂದಿಹಳ್ಳಿ ಸಂದೀಪ್ ಮತ್ತಿತರರು ಇದ್ದರು.