ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಹಂಪಿ ಉತ್ಸವ ಸಿದ್ಧತೆ ಕಾರ್ಯ ಭರದಿಂದ ಸಾಗಿದ್ದು, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಂಗಳವಾರ ಹಂಪಿಗೆ ಭೇಟಿ ನೀಡಿ ಪೂರ್ವ ಸಿದ್ಧತೆ ಕಾರ್ಯ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಫೆ.13,14 ಮತ್ತು 15 ರಂದು ನಡೆಯುವ ಹಂಪಿ ಉತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಹಂಪಿ ಉತ್ಸವಕ್ಕೆ ಇನ್ನೂ 9 ದಿನ ಬಾಕಿ ಉಳಿದಿದ್ದು, ಸಕಲ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ.
ಹಂಪಿ ಉತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದೆ, ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೇದಿಕೆ ಸೇರಿದಂತೆ ಪ್ರಮುಖ 6 ವೇದಿಕೆಗಳು ನಿರ್ಮಾಣವಾಗುತ್ತಿವೆ, ಈ ಬಾರಿ ಹಂಪಿ ಉತ್ಸವಕ್ಕೆ ಡಾ.ಶಿವರಾಜಕುಮಾರ್, ಡಾಲಿ ಧನಂಜಯ್ ಸೇರಿದಂತೆ ಹಲವು ಚಿತ್ರನಟರು ಆಗಮಿಸಿಲಿದ್ದಾರೆ.
ಈ ಬಾರಿಯ ಹಂಪಿ ಉತ್ಸವದ ಪ್ರಮುಖ ಆಕರ್ಷಣೆಯಾಗಲಿದೆ. ಬೇರೆ ಬೇರೆ ವೇದಿಕೆ ಹಂಚಿಕೊಳ್ಳಲಿರೋ ಹೆಸರಾಂತ ಕಲಾವಿದರು ಹಂಪಿ ಉತ್ಸವದ ಮೇರಗು ನೀಡಲಿದ್ದಾರೆ ಎಂದರು. ಮುಖ್ಯವೇದಿಕೆಯಾಗಿರುವ ಗಾಯಿತ್ರೀ ಪೀಠದ ವೇದಿಕೆಯಲ್ಲಿ 50 ಸಾವಿರ ಆಸನಗಳ ವ್ಯವಸ್ಥೆಯನ್ನು ಮಾಡಲಾಗುವುದು, ಕಲಾವಿದರಿಗಾಗಿ ಗ್ರೀನ್ ರೂಂ, ಮಾಧ್ಯಮ ಕೇಂದ್ರ, ಪ್ರಮುಖ ವೇದಿಕೆ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.ಪ್ರತಿವರ್ಷದಂತೆ ಹಂಪಿಯಲ್ಲಿ ಶಿಲ್ಪಕಲಾ ಶಿಬಿರ ನಡೆಯುತ್ತಿದ್ದು, ವಿಶೇಷ ಶಿಲ್ಪಿಗಳಿಂದ ವಿಭಿನ್ನವಾದ ಶಿಲ್ಪಗಳು ಮೂಡಿಬರುತ್ತಿವೆ. ಚಿತ್ರಕಲಾ ಶಿಬಿರ, ವಿಶೇಷ ಚಿತ್ರ ಕಲಾವಿದರಿಂದ ವಿಭಿನ್ನವಾದ ಕೃತಿಗಳು ಮೂಡಿಬರುತ್ತಿವೆ. ವಸಂತ ವೈಭವ ಭವ್ಯ ಮೆರವಣಿಗೆ ಕಾರ್ಯಕ್ರಮವು ಸಹ ನಡೆಯಲಿದೆ, ಸಹಾಸ ಕ್ರೀಡೆ. ಕುಸ್ತಿ ಸ್ವರ್ಧೆಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಉಪವಿಭಾಗಾಧಿಕಾರಿ ಪಿ. ವಿವೇಕಾನಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.ಹಂಪಿಯಲ್ಲಿ ನಡೆಯುತ್ತಿರುವ ಹಂಪಿ ಉತ್ಸವ ಸಿದ್ಧತೆ ಕಾರ್ಯಗಳನ್ನು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಂಗಳವಾರ ಹಂಪಿಗೆ ಭೇಟಿ ನೀಡಿ ಪೂರ್ವ ಸಿದ್ಧತೆ ಕಾರ್ಯ ಪರಿಶೀಲಿಸಿದರು.