ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಹಾವಂಜೆಯ ಭಾವನಾ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ, ಉಡುಪಿಯ ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್ ಮಾಹೆಯ ಸಹಯೋಗದಲ್ಲಿ ಆಯೋಜಿಸುತ್ತಿರುವ ಜನಪದ ಸರಣಿ ಕಲಾ ಕಾರ್ಯಾಗಾರಗಳನ್ನು ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ರಾವ್ ಕಿದಿಯೂರು ಉದ್ಘಾಟಿಸಿದರು.
ಈ ಸರಣಿ ಕಲಾ ಕಾರ್ಯಾಗಾರದ ಭಾಗವಾಗಿ ಮದುವೆ ಸಂದರ್ಭಗಳಲ್ಲಿ ಮಾಡಲಾಗುವ ಕೋಹ್ಬಾರ್ ಚಿತ್ರಕಲೆ, ಟಿಕುಲಿ ಹಾಗೂ ಮಂಜೂಷಾ ಚಿತ್ರಕಲೆ ಮತ್ತು ಜಾಲಿ ಫ್ರೇಂ ವಿನ್ಯಾಸಗಳ ಕಲೆಯನ್ನು ಈ ಬಾರಿ ಪರಿಚಯಿಸುತ್ತಿದ್ದು, ಬಿಹಾರದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶ್ರವಣ್ ಕುಮಾರ್ ಪಾಸ್ವಾನ್ ಹಾಗೂ ಪವನ್ ಕುಮಾರ್ ಅವರು ಈ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಏ.೧೮ರಿಂದ ೨೧ರ ತನಕ ಪ್ರತಿದಿನ ಬೆಳಗ್ಗೆ ೯:೩೦ ರಿಂದ ಸಂಜೆ 5ರ ತನಕ ಬಡಗುಪೇಟೆಯ ಹತ್ತು ಮೂರು ಇಪ್ಪಂತ್ತೆಂಟು ಗ್ಯಾಲರಿಯಲ್ಲಿ ಈ ನಾಲ್ಕೂ ಕಾರ್ಯಾಗಾರಗಳು ನಡೆದವು. ಇದೇ ಸಂದರ್ಭದಲ್ಲಿ ಪ್ರತಿದಿನ ಸಂಜೆ 4ರಿಂದ 6ರ ತನಕ ಕಲಾವಿದರ ಕಲಾ ಪ್ರದರ್ಶನ ಮತ್ತು ಮಾರಾಟವೂ ಬಡಗುಪೇಟೆಯಲ್ಲಿ ನಡೆಯಿತು.ಕಾರ್ಯಕ್ರಮದ ಸಂಯೋಜಕರಾದ ಡಾ. ಜನಾರ್ದನ ಹಾವಂಜೆ ಮತ್ತು ಭಾವನಾ ಪ್ರತಿಷ್ಠಾನದ ನಿರ್ದೇಶಕರಾದ ಹಾವಂಜೆ ಮಂಜುನಾಥ ರಾವ್ ಉಪಸ್ಥಿತರಿದ್ದರು.