ಹಿರಿಯ ಕಲಾವಿದ ದೇಶಿಗೌಡರಿಗೆ ಬಂಗಾರದ ಕಡಗ ತೊಡಿಸಿ ಅಭಿನಂದನೆ

KannadaprabhaNewsNetwork | Updated : Apr 29 2024, 01:32 AM IST

ಸಾರಾಂಶ

ಹಿರಿಯ ಕಲಾವಿದ ದೇಶಿಗೌಡರು ರಂಗಭೂಮಿಯಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಶನಿಪ್ರಭಾವ, ಷಣ್ಮುಕ ವಿಜಯ ನಾಟಕದಲ್ಲಿ ತಾರಕಸುರ, ರಾಜ ಸತ್ಯವ್ರತ, ಸತ್ಯಹರಿಶ್ಚಂದ್ರ ನಾಟಕ ಪ್ರದರ್ಶನ ನೀಡಿದ್ದಾರೆ.

ಭಾರತೀನಗರ: ದೇವರಹಳ್ಳಿ ರಸ್ತೆಯಲ್ಲಿ ಶನಿಪ್ರಭಾವ ಭಕ್ತಿ ಪ್ರಧಾನ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಹಿರಿಯ ಕಲಾವಿದ ದೇಶಿಗೌಡರಿಗೆ ಬಂಗಾರದ ಕಡಗ ತೊಡಿಸಿ ಅಭಿನಂದಿಸಲಾಯಿತು. ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘ, ರಂಗಭೂಮಿ ಚಾರಿಟೇಬಲ್ ಸೇವಾಟ್ರಸ್ಟ್ ಸಿ.ಎ.ಕೆರೆ ಹೋಬಳಿ ವತಿಯಿಂದ ಆಯೋಜಿಸಿದ್ದ ಶನಿಪ್ರಭಾವ ಪೌರಾಣಿಕ ನಾಟಕ ಪ್ರದರ್ಶನದಲ್ಲಿ 100 ಕ್ಕೂ ಹೆಚ್ಚು ಶನಿಪ್ರಭಾವ ನಾಟಕವನ್ನು ಪ್ರದರ್ಶಿಸಿರುವ ಹಿರಿಯ ಕಲಾವಿದ ದೇಶಿಗೌಡರನ್ನು ಗೌರವಿಸಲಾಯಿತು.

ರಂಗಭೂಮಿ ಕಲಾವಿದರ ಸಂಘದ ಹೋಬಳಿ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ ಮಾತನಾಡಿ, ಹಿರಿಯ ಕಲಾವಿದ ದೇಶಿಗೌಡರು ರಂಗಭೂಮಿಯಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಶನಿಪ್ರಭಾವ, ಷಣ್ಮುಕ ವಿಜಯ ನಾಟಕದಲ್ಲಿ ತಾರಕಸುರ, ರಾಜ ಸತ್ಯವ್ರತ, ಸತ್ಯಹರಿಶ್ಚಂದ್ರ ನಾಟಕ ಪ್ರದರ್ಶನ ನೀಡಿದ್ದಾರೆ ಎಂದರು.

ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿ, ಅಭಿನಯಿಸಿದ್ದಾರೆ. ಇವರ ಕಲಾಗೌರವ ಮೆಚ್ಚಿ ಜಿಲ್ಲಾ ಮತ್ತು ತಾಲೂಕು ಆಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಗಾಗಿ ನಮ್ಮ ಕಲಾವಿದರ ಸಂಘದಿಂದ ಬಂಗಾರದ ಕಡಗವನ್ನು ನೀಡಿ ಅಭಿನಂದಿಸಲಾಗಿದೆ ಎಂದರು. ಇದೇ ವೇಳೆ ದೇಶಿಗೌಡ, ಪತ್ನಿ ಚನ್ನಮ್ಮ ದಂಪತಿಯನ್ನು ಅಭಿನಂದಿಸಲಾಯಿತು.

ಸಿದ್ದರಾಜುಗೆ ಶ್ರದ್ಧಾಂಜಲಿ ಸಭೆ :

ಇದೇ ವೇಳೆ ಯುವ ಕಲಾವಿದ ಛತ್ರದ ಹೊಸಹಳ್ಳಿ ಸಿದ್ದರಾಜು ನಿಧನರಾದ ಹಿನ್ನೆಲೆಯಲ್ಲಿ ಕಲಾವಿದರ ಸಂಘದ ವತಿಯಿಂದ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಳವಳ್ಳಿ ಚೌಡೇಶ್, ಶೆಟ್ಟಹಳ್ಳಿ ದ್ಯಾಪೇಗೌಡ, ತೈಲೂರು ಸಿದ್ದರಾಜು, ಅಣ್ಣೂರು ಸತೀಶ್, ತಿಪ್ಪೂರು ಅಂದಾನಿ, ದೇವರಹಳ್ಳಿ ದೇವರಾಜು, ಬೀರೇಶ್, ಲಕ್ಷ್ಮೇಗೌಡನದೊಡ್ಡಿ ರವಿ, ಕಡಿಲುವಾಗಿಲು ಪುಟ್ಟೇಗೌಡ, ಕ್ಯಾತಘಟ್ಟದ ಸುನೀಲ್, ಈಶಪ್ರಸಾದ್, ಜಿ.ಸಿ.ಮಾದೇಗೌಡ, ಕುಪ್ಪುಸ್ವಾಮಿ, ನಗರಕೆರೆ ರವಿ, ಡ್ರಾಮ ನಿರ್ದೇಶಕ ಕೃಷ್ಣೋಜಿರಾವ್, ಚಿಕ್ಕಣ್ಣ, ಕರಿಯಪ್ಪ, ಮಲ್ಲೇಶ್, ಕಳ್ಳಿಮೆಳೆದೊಡ್ಡಿ ಸಿದ್ದರಾಜು, ಬಿ.ರಾಜು, ಬೋರಾಪುರ ನಾಗರಾಜು ಸೇರಿ ಹಲವರಿದ್ದರು.

Share this article