ಶಿವಕುಮಾರ ಕುಷ್ಟಗಿ ಗದಗ
ಕಾರ್ಯಕ್ರಮ ಆಯೋಜಕರು ಗದಗ ನಗರದಲ್ಲಿ ನಡೆದಿದ್ದ ಕರ್ನಾಟಕ ಸಂಭ್ರಮ-50 ಕ್ಕೆ ವಿವಿಧ ಸರಕು, ಸಾಮಗ್ರಿ, ಧ್ವನಿ ವರ್ಧಕ, ವಿದ್ಯುತ್ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿತ್ತು. ಇದರ ಎಲ್ಲ ಖರ್ಚು ವೆಚ್ಚದ ಬಿಲ್ ಬೆಂಗಳೂರು ಮೂಲದ ಸಂಸ್ಥೆಗೆ ಸಂದಾಯವಾಗಿವೆ.
ಬಿಲ್ ಸಂದಾಯವಾಗಿರುವುದನ್ನು ಆಧಾರವಾಗಿ ಇಟ್ಟುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ 7-12-2023 ರಂದು ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಸಭೆಯಲ್ಲಿ ₹3.82 ಕೋಟಿ ಹಣ ಬೆಂಗಳೂರು ಮೂಲದ ಸಂಸ್ಥೆಗೆ ಬಿಡುಗಡೆ ಮಾಡುವಂತೆ ಅನುಮೋದನೆ ನೀಡಲಾಗಿದೆ. ಅದರ ಅನ್ವಯ 16-2-2024 ರಂದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆದೇಶ ಸಂಖ್ಯೆ ಡಿಕೆಸಿ, 104-5-2023(ಭಾಗ-2) ಆಧಾರದಲ್ಲಿ ಈಗಾಗಲೇ ಹಣ ಬಿಡುಗಡೆಯಾಗಿದೆ.ಜಿಲ್ಲಾಡಳಿತದ ಬಳಿ ಮಾಹಿತಿಯೇ ಇಲ್ಲ
ರಾಜ್ಯದ ಹಲವಾರು ಜಿಲ್ಲೆಗಳ ಸಾವಿರಾರು ಕಲಾವಿದರು ಈ ಸಂಭ್ರಮದಲ್ಲಿ ಪಾಲ್ಗೊಂಡು ಕಲಾ ಪ್ರದರ್ಶನ ಮಾಡಿದ್ದು, ಈಗ ತಮ್ಮ ಗೌರವ ಧನಕ್ಕಾಗಿ ಕಾಯುತ್ತಿದ್ದಾರೆ. ಸರ್ಕಾರ ಇಷ್ಟೊಂದು ಅನುದಾನ ನೀಡಿದ್ದರೂ ಅದನ್ನು ಕಲಾವಿದರಿಗೆ ನೀಡದೇ 8 ತಿಂಗಳಿಂದ ಸತಾಯಿಸಲಾಗುತ್ತಿದೆ. ಕಲಾವಿದರು ಪ್ರಶ್ನೆ ಮಾಡಿದರೆ, ನಿಮಗೆ ಕೊಡಲು ಹಣವೇ ಇಲ್ಲ ಎಂದು ಹೇಳುತ್ತಿರುವುದು ಕೂಡಾ ಹಲವು ಸಂಶಯಗಳನ್ನು ಹುಟ್ಟು ಹಾಕುತ್ತಿದೆ.
ನಮ್ಮ ಇಲಾಖೆಯಿಂದ ₹3.82 ಕೋಟಿ ಅನುದಾನ ಬಿಡುಗಡೆಯಾದ ಬಗ್ಗೆ ಮಾತ್ರ ಮಾಹಿತಿ ಇದೆ. ಅದರ ಬಳಕೆ ಮತ್ತು ಯಾವೆಲ್ಲ ಸಂಸ್ಥೆಗೆ ಹಣ ನೀಡಿದ್ದಾರೆ ಎನ್ನುವ ಬಗ್ಗೆ ನಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ. ಬಿ. ತಿಳಿಸಿದ್ದಾರೆ.