ಹೊಸಕೋಟೆ: ತಾಲೂಕಿನ ದಳಸಗೆರೆ ಗ್ರಾಮದಲ್ಲಿರುವ 40 ವರ್ಷಗಳ ಹಳೆಯ ಆಂಜನೇಯಸ್ವಾಮಿ ದೇಗುಲ ಮತ್ತು ವಿಗ್ರಹವನ್ನು ಕಿಡಿಗೇಡಿಗಳು ಗುರುವಾರ ತಡ ರಾತ್ರಿ ಧ್ವಂಸ ಮಾಡಿದ್ದಾರೆ. ದಳಸಗೆರೆ ಕೃಷ್ಣಪ್ಪ ಗ್ರಾಮದ ಪ್ರವೇಶ ದ್ವಾರದ ಬಳಿ ಆಂಜನೇಯಸ್ವಾಮಿ ದೇಗುಲ ನಿರ್ಮಿಸಿದ್ದರು. ವಿಗ್ರಹ ಪ್ರತಿಷ್ಠಾಪನೆ ಮಾಡಿ ಗ್ರಾಮಸ್ಥರೆಲ್ಲಾ ಪೂಜೆ ಸಲ್ಲಿಸುತ್ತಿದ್ದರು. ಕಿಡಿಗೇಡಿಗಳು ಗ್ರಾಮದಲ್ಲಿ ಗಲಭೆ ಸೃಷ್ಠಿಸಲು ದೇವಾಲಯ ಧ್ವಂಸ ಮಾಡಿದ್ದಾರೆ.ಈಗಾಗಲೇ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಅಂಟಿಸಿ ಅಪಮಾನ ಮಾಡಿರುವ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರಿಗೆ ಗ್ರಾಮದಲ್ಲಿ ಸಿಸಿಟಿವಿ ಇಲ್ಲದೆ ಸಮಸ್ಯೆಯಾಗಿದೆ. ಒಂದು ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಮತ್ತೊಂದು ಪ್ರಕರಣ ನಡೆದಿದ್ದು ಕಿಡಿಗೇಡಿಗಳನ್ನು ಬಂಧಿಸಲು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಘಟನೆ ನಡೆದ ಸ್ಥಳಕ್ಕೆ ನಂದಗುಡಿ ಪೊಲೀಸರು ಹಾಗೂ ಡಿವೈಎಸ್ಪಿ ಎಸ್.ಎ.ಪಾಟೀಲ್ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.