ಕನ್ನಡಪ್ರಭ ವಾರ್ತೆ ಸಂಕೇಶ್ವರ
ಸಂಕೇಶ್ವರ ಪಟ್ಟಣದಲ್ಲಿ ದಿ.ಉಮೇಶ ಕತ್ತಿ ಅವರು ಮಂಜೂರು ಮಾಡಿಸಿದ್ದ ಹಳೇ ಪಿ.ಬಿ. ರಸ್ತೆ ನಿರ್ಮಾಣ ಕಾರ್ಯ ಹೊರತುಪಡಿಸಿದರೆ ಪಟ್ಟಣದ ಯಾವುದೇ ರಸ್ತೆ ಸಹ 10 ವರ್ಷಗಳಿಂದ ಕಂಡಿಲ್ಲ.
ಇದರಿಂದ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿರುವುದು ಒಂದು ಕಡೆಯಾದರೆ ಇನ್ನೊಂದು ಕಡೆಗೆ ವಾಹನಗಳ ಸಂಚಾರದಿಂದ ರಸ್ತೆಗಳಲ್ಲಿ ಧೂಳು ಆವರಿಸಿ ಜನರು ಮುಖ ಮುಚ್ವಿಕೊಂಡು ಸಾಗುವಂತಾಗಿದೆ.ಪುರಸಭೆ ಅಧಿಕಾರಿಗಳು ಹದಗೆಟ್ಟಿರುವ ಸಂಕೇಶ್ವರ ರಸ್ತೆಗಳಿಗೂ ತಮಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಗುರಿಯಾಗಿದೆ. ಗ್ರಾಮೀಣ ಭಾಗದಲ್ಲಿನ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳು ಕೂಡ ಡಾಂಬರೀಕರಣವಾಗಿವೆ. ಆದರೆ, ತಾಲೂಕುಮಟ್ಟದ ಸ್ಥಾನ ಪಡೆದಿರುವ ಸಂಕೇಶ್ವರ ಪಟ್ಟಣದ ರಸ್ತೆಗಳು ಮಾತ್ರ 10 ವರ್ಷಗಳಿಂದ ಡಾಂಬರೀಕರಣ ಭಾಗ್ಯ ಕಂಡಿಲ್ಲ. ಮನೆಗಳ ಹಾಗೂ ಅಂಗಡಿಗಳ ತೆರಿಗೆ ವಸೂಲಿಗೆ ಮುತುವರ್ಜಿ ವಹಿಸುವ ಪುರಸಭೆ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡುತಿಲ್ಲ ಎನ್ನುವುದು ದುರಂತ.ಸಂಕೇಶ್ವರ ಪಟ್ಟಣದ ರಸ್ತೆ ನಿರ್ಮಾಣ ಸೇರಿದಂತೆ ಕೆಲ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳಹಿಸಿಕೊಡಲಾಗಿದೆ. ಅನುದಾನ ಮಂಜೂರಾದ ತಕ್ಷಣ ರಸ್ತೆ ಸೇರಿ ಪಟ್ಟಣದ ಅಭಿವೃದ್ಧಿ ಕಾರ್ಯ ಮಾಡುತ್ತೇವೆ.