- ಇದುವರೆಗೂ ಪಾಠಗಳೇ ಆರಂಭವಾಗಿಲ್ಲ: ಎಸ್ಬಿಸಿ ಕಾರ್ಯದರ್ಶಿ ವೆಂಕಟೇಶ್ ಆರೋಪ
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಅಣಬೂರು ಗ್ರಾಮದ ಅನುದಾನಿತ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಮನೋಹರ ರೆಡ್ಡಿ ಅವರ ಏಕಸ್ವಾಮ್ಯ ಹಾಗೂ ದುರಾಡಳಿತದಿಂದಾಗಿ ಶಾಲೆಯ ಶೈಕ್ಷಣಿಕ ವಾತಾವರಣ ಸಂಪೂರ್ಣ ಹಾಳಾಗಿದೆ. ಶಾಲೆ ಆರಂಭವಾಗಿ ಒಂದೂವರೆ ತಿಂಗಳಾದರೂ ವಿದ್ಯಾರ್ಥಿಗಳಿಗೆ ಪಾಠ- ಪ್ರವಚನಗಳು ಆರಂಭವಾಗಿಲ್ಲ ಎಂದು ಶಾಲಾ ಸುಧಾರಣಾ ಸಮಿತಿ ** (SBC) ** ಕಾರ್ಯದರ್ಶಿ ಟಿ. ವೆಂಕಟೇಶ್ ತೀವ್ರ ಆರೋಪಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮಿತಿಯ ಪ್ರಮುಖರು, ಶಾಲೆಯ ಸದ್ಯದ ದುಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ೨೦೧೯ ರಿಂದ ೨೦೨೪ರವರೆಗೆ ಅತ್ಯುತ್ತಮವಾಗಿ ನಡೆಯುತ್ತಿದ್ದ ಶಾಲೆಯ ಆಡಳಿತ ವ್ಯವಸ್ಥೆ, ಆಡಳಿತ ಮಂಡಳಿ ಸಂಬಂಧಿಯಾದ ಗೌತಮ ರೆಡ್ಡಿ ಎಂಬ ಅತಿಥಿ ಶಿಕ್ಷಕ ಬಂದ ನಂತರ ಸಂಪೂರ್ಣ ಹದಗೆಟ್ಟಿದೆ. ಈ ಹಿಂದೆ ೧೪೦ ರಷ್ಟಿದ್ದ ಮಕ್ಕಳ ಸಂಖ್ಯೆ ಈಗ ೯೭ಕ್ಕೆ ಕುಸಿದಿದೆ. ಸದ್ಯ ಶಾಲೆಯಲ್ಲಿ ಹಿಂದಿ ಶಿಕ್ಷಕರನ್ನು ಹೊರತುಪಡಿಸಿ, ಯಾವುದೇ ಕಾಯಂ ಶಿಕ್ಷಕರಿಲ್ಲ, ಅತಿಥಿ ಶಿಕ್ಷಕರೂ ಇಲ್ಲ. ಇದರಿಂದಾಗಿ ಮಕ್ಕಳಿಗೆ ಇದುವರೆಗೂ ಪಾಠಗಳೇ ಆರಂಭವಾಗಿಲ್ಲ. ಅಣಬೂರು ಗ್ರಾಮಕ್ಕೆ ತಕ್ಷಣವೇ ಸರ್ಕಾರಿ ಕೆಪಿಎಸ್ ** (KPS) ** ಶಾಲೆ ಮಂಜೂರು ಮಾಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.
ಎಸ್ಬಿಸಿ ಗೌರವಾಧ್ಯಕ್ಷ ಶರಣಪ್ಪ ಮಾತನಾಡಿ, ಇಡೀ ಶಾಲೆ ಆಡಳಿತ ಒಂದು ಕುಟುಂಬದ ತೆಕ್ಕೆಯಲ್ಲಿದೆ. ಶಾಲೆ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಲು ಹೋದ ಮಹಿಳಾ ಪೋಷಕರಿಗೆ ಕಾರ್ಯದರ್ಶಿ ಮನೋಹರ ರೆಡ್ಡಿ ಏಕವಚನದಲ್ಲಿ ಮಾತನಾಡಿ ಅಪಮಾನಿಸಿದ್ದಾರೆ. ಮುಖ್ಯ ಶಿಕ್ಷಕರಾದ ಕುಮಾರ್ ನಾಯ್ಕ್ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಶೇ.೧೦೦ ಫಲಿತಾಂಶ ತಂದುಕೊಟ್ಟಿದ್ದಾರೆ. ಅತಿಥಿ ಶಿಕ್ಷಕರಿಗೆ ಮುಖ್ಯಶಿಕ್ಷಕರು, ಸಹ ಶಿಕ್ಷಕರೇ ತಮ್ಮ ಸ್ವಂತ ಹಣದಿಂದ ವೇತನ ನೀಡಿದ್ದಾರೆ ಹೊರತು, ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ. ಇಷ್ಟೆಲ್ಲಾ ಸಮಸ್ಯೆಗಳು ಗೊತ್ತಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿ ಈ. ಹಾಲಮೂರ್ತಿ ಮೌನಕ್ಕೆ ಶರಣಾಗಿದ್ದಾರೆ. ತಕ್ಷಣವೇ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಬಿಸಿ ಅಧ್ಯಕ್ಷ ಕೆ. ಚಂದ್ರಪ್ಪ, ಉಪಾಧ್ಯಕ್ಷ ಎಂ.ಎನ್. ಬಸವರಾಜ್, ಪೋಷಕರಾದ ರೂಪಾವತಿ, ವಿ.ಬಿ. ಶರಣಪ್ಪ, ನಾಗೇಂದ್ರಪ್ಪ, ಎನ್.ಬಾಲಪ್ಪ, ಮಹಾಲಿಂಗಪ್ಪ, ಪೋಷಕರು ಉಪಸ್ಥಿತರಿದ್ದರು.
-06ಜೆ.ಜಿ.ಎಲ್.1: