ಕನ್ನಡಪ್ರಭ ವಾರ್ತೆ ಪಾಂಡವಪುರ
ಮನ್ಮುಲ್ ಒಕ್ಕೂಟದಿಂದ ಕಳೆದ ಒಂದು ವರ್ಷದಿಂದೀಚೆಗೆ 4 ಕೋಟಿಗೂ ಅಧಿಕ ವಿಮೆ ಹಣವನ್ನು ರೈತ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.ಪಟ್ಟಣದ ಮನ್ಮುಲ್ ಉಪ ವ್ಯವಸ್ಥಾಪಕರ ಕಚೇರಿಯಲ್ಲಿ ರೈತ ಫಲಾನುಭವಿಗಳಿಗೆ ಅಂದಾಜು 27.30 ಲಕ್ಷ ರು. ವೆಚ್ಚದ ವಿಮೆ ಹಣದ ಚೆಕ್ ವಿತರಿಸಿ ಮಾತನಾಡಿ, ರೈತರು ರಾಸುಗಳಿಗೆ ವಿಮೆ ಮಾಡಿಸುವ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು, ಒಂದು ವೇಳೆ ರಾಸುಗಳು ಅಕಾಲಿನ ಮರಣಹೊಂದಿದರೆ ನಯಾಪೈಸೆ ಹಣ ದೊರೆಯುವುದಿಲ್ಲ. ರಾಸು ವಿಮೆಗೆ ರೈತರು ಶೇ.50 ಹಣ ಪಾವತಿಸಿದರೆ ಉಳಿದ ಶೇ.50 ರಷ್ಟು ಹಣವನ್ನು ಒಕ್ಕೂಟ ಪಾವತಿಸಲಿದೆ. ಈಗಾಗಲೇ 8 ಕೋಟಿಗೂ ಅಧಿಕ ಮೊತ್ತದ ವಿಮೆ ಹಣವನ್ನು ಒಕ್ಕೂಟ ವಿಮೆ ಕಂಪನಿಗೆ ನೀಡಿದೆ ಎಂದರು.
ರಾಸು ವಿಮೆ ಜೊತೆಗೆ ಉತ್ಪಾದಕರ ರೈತರಿಗೂ ವಿಮೆ ಸೌಲಭ್ಯವನ್ನು ಒಕ್ಕೂಟ ನೀಡಿದೆ. ಡೇರಿಗೆ ಹಾಲು ಹಾಕುವ ರೈತರು ಕೇವಲ 200 ರು. ನೀಡಿದರೆ 50 ಸಾವಿರದ ವರೆಗೆ ವಿಮೆ ಸೌಲಭ್ಯ ದೊರೆಯುತ್ತದೆ. ಹಾಗಾಗಿ ಕಡ್ಡಾಯವಾಗಿ ಉತ್ಪಾದಕ ರೈತರು ಗುಂಪು ವಿಮೆ ಮಾಡಿಸಬೇಕು ಎಂದರು.ಹಾಲು ಉತ್ಪಾದನೆ ದಿನೇ ದಿನೇ ಹೆಚ್ಚಾಗುತ್ತಿದೆ. ನಿತ್ಯ 15ಲಕ್ಷಕ್ಕೂ ಅಧಿಕ ಹಾಲು ಪೂರೈಕೆಯಾಗುತ್ತಿದೆ. ಹಾಗಾಗಿ ಎಲ್ಲರೂ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು, ಜೊತೆಗೆ ವಿಮೆ ಸೌಲಭ್ಯದ ಹಣವನ್ನು ಆರ್ ಟಿಜಿಎಸ್ ಮೂಲಕ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗುವುದು ಎಂದರು.
ಇದೇ ವೇಳೆ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್, ರಾಸು ವಿಮೆ ಸೇರಿದಂತೆ ವಿವಿಧ ಯೋಜನೆಗಳಿಂದ ರೈತ ಫಲಾನುಭವಿಗಳಿಗೆ 27.30 ಲಕ್ಷ ಮೌಲ್ಯದ ಚೆಕ್ ಗಳನ್ನು ವಿತರಣೆ ಮಾಡಿದರು. ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಪಶು ವೈದ್ಯಾಕಾರಿ ಡಾ.ಪ್ರಕಾಶ್, ಮಾರ್ಗ ವಿಸ್ತರ್ಣಾಕಾರಿ ಉಷಾ,ನಾಗೇಂದ್ರ ಸೇರಿದಂತೆ ಹಲವರು ಹಾಜರಿದ್ದರು.