ಕೊಟ್ಟೂರು ಪಟ್ಟಣದ ತಾಲೂಕು ಕಚೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಬಿ.ಸಿ.ಎಂ. ಇಲಾಖೆ ಸಹಯೋಗದಲ್ಲಿ ಗುರುವಾರ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ನಡೆಯಿತು.
ಕೊಟ್ಟೂರು: ದೇವರಾಜ ಅರಸು ಅವರ ಹೊಂದಿದ್ದ ದೂರದೃಷ್ಟಿತ್ವ, ಆಡಳಿತದ ನಿರ್ಧಾರಗಳಿಂದ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಧ್ಯವಾಗಿದ್ದು, ಬಡವರ ಪರ ಕಾಳಜಿಯಿಂದ ಅವರೆಲ್ಲರ ಆಶಾಕಿರಣವಾಗಿದ್ದರು ಎಂದು ಗ್ರೇಡ್ ೨ ತಹಸೀಲ್ದಾರ್ ಎಂ. ಪ್ರತಿಭಾ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಬಿ.ಸಿ.ಎಂ. ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದ ೨ ಬಾರಿ ಮುಖ್ಯಮಂತ್ರಿಯಾಗಿದ್ದ ಅರಸು ಅವರು, ಮೈಸೂರು ಎಂಬ ಹೆಸರನ್ನು ಬದಲಿಸಿ ರಾಜ್ಯಕ್ಕೆ ಕರ್ನಾಟಕ ಎಂದು ೧೯೭೩ ನವೆಂಬರ್ ೧ರಂದು ನಾಮಕರಣ ಮಾಡಿದ್ದರು. ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕೆ ಅವರೇ ಕಾರಣ. ಅವರ ಅವಧಿಯಲ್ಲಿ ಜಾರಿಗೆ ತಂದು ಭೂ ಸುಧಾರಣೆ ಮತ್ತು ಉಳುವವನೇ ಒಡೆಯ ಎಂಬ ಕಾನೂನಿಂದ ನಿರಾಶ್ರಿತರಾಗಿದ್ದ ರಾಜ್ಯದ ಲಕ್ಷಾಂತರ ರೈತರು, ಬಡವರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಸಮುದಾಯದವರು ಭೂಮಿ ಹೊಂದಿ ಬದುಕು ಕಟ್ಟಿಕೊಳ್ಳಲು ಕಾರಣವಾಗಿತ್ತು. ಗೇಣಿ ಶಾಸನ, ಹಾವನೂರು ವರದಿಯನ್ನು ಜಾರಿ ಮಾಡುವ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕಾರಣರಾಗಿದ್ದರು. ಹಿಂದುಳಿದ ವರ್ಗಗಳ ಶಿಕ್ಷಣಕ್ಕಾಗಿ ಉಚಿತ ವಸತಿ ನಿಲಯಗಳನ್ನು ತೆರೆದು ಜ್ಞಾನ ದಾಸೋಹ ಮಾಡಿದ್ದರು. ಅಂತಹ ಮಹನೀಯರ ಆದರ್ಶ, ತತ್ವಗಳನ್ನು ಅಳವಡಿಸಿಕೊಂಡು ನಾವೆಲ್ಲರೂ ನಡೆಯಬೇಕು ಎಂದರು.
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಶಿವಲೀಲಾ ಬಣಕಾರ, ಮೆಟ್ರಿಕ್ ಪೂರ್ವ ಬಾಲಕ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ರೇವಣ್ಣ, ಕುಬೇರ, ಶಿರಸ್ತೇದಾರ್ ಎನ್. ರೇಖಾ, ಆರ್ಐ ಶಿವಕುಮಾರ, ಹಾಲಸ್ವಾಮಿ, ಸಿಬ್ಬಂದಿ ದೇವರಾಜ, ಮುಸ್ತಾಫ, ಸುಧಾ ಜೈನರ್, ಯಶೋದಾ, ಶ್ರೀದೇವಿ ಹಾಗೂ ವಿದ್ಯಾರ್ಥಿಗಳು ಇದ್ದರು. ಸಿ.ಮ. ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.