ದೇವರಾಜು ಅರಸು ಭವನದಲ್ಲಿ ದೇವರಾಜ ಅರಸು ಅವರ 111 ನೇ ಜನ್ಮ ದಿನಾಚರಣೆ ಸಮಾರಂಭ
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹಲವು ಕ್ರಾಂತಿಕಾರಕ ನಿರ್ಧಾರದಿಂದ ಹಿಂದುಳಿದ ವರ್ಗದವರಿಗೆ ಇಂದು ಸಮಾಜದಲ್ಲಿ ಸ್ಥಾನ ಮಾನ ಸಿಕ್ಕುತ್ತಿದೆ ಎಂದು ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಅಭಿಪ್ರಾಯಪಟ್ಟರು.
ಗುರುವಾರ ಡಿ.ದೇವರಾಜ ಅರಸು ಭವನದಲ್ಲಿ ನಡೆದ ದೇವರಾಜ ಅರಸು ಅವರ 111 ನೇ ಜನ್ಮದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು. ದೇವರಾಜು ಅರಸು ಜಾರಿಗೆ ತಂದ ಹಾವನೂರು ವರದಿಗೂ ಮುನ್ನ ಹಿಂದುಳಿದ ಜಾತಿಗಳು ಇದೆ ಎಂಬುದೇ ಸರ್ಕಾರಕ್ಕೆ ಮಾಹಿತಿ ಇರಲಿಲ್ಲ. ಹಿಂದುಳಿದ ವರ್ಗಗಳಿಗೆ ಶಾಶ್ವತವಾಗಿ ಮೀಸಲಾತಿ ನೀಡಬಾರದು ಎಂಬುದು ಕೆಲವರು ವಾದ ಮಾಡುತ್ತಿದ್ದಾರೆ. ಆದರೆ, ಹಿಂದಳಿದವರು, ಕೆಳ ಜಾತಿಯವರನ್ನು ದಮನ ಮಾಡುವ ಸ್ಥಿತಿ ಇರುವವರೆಗೂ ಮೀಸಲಾತಿ ಅಗತ್ಯ ಎಂದರು.ಅತಿಥಿಯಾಗಿದ್ದ ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ಮಾತನಾಡಿ ದೇವರಾಜ ಅರಸು ಕರ್ನಾಟಕ ರಾಜ್ಯದಲ್ಲಿ ಉಳುವುವನೇ ಭೂ ಒಡೆಯ ಎಂಬ ಕಾನೂನು ತಂದು ಲಕ್ಷಾಂತರ ಗೇಣಿದಾರರನ್ನು ಮಾಲೀಕರನ್ನಾಗಿ ಮಾಡಿದ್ದರು. ಮೈಸೂರು ಜಿಲ್ಲೆಯವರಾದ ದೇವರಾಜ ಅರಸು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ರಾಜ್ಯಕ್ಕೆ ಹೊಸ ಭಾಷ್ಯ ಬರೆದಿದ್ದರು.
ದೇವರಾಜ ಅರಸು ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಿಂದುಳಿದ ವರ್ಗಗಳ ಹಾಸ್ಟೆಲ್ ನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ತಾಲೂಕಿನ ವಿದ್ಯಾರ್ಥಿ ನಿಲಯಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.