ಕನ್ನಡಪ್ರಭ ವಾರ್ತೆ ಪಾಂಡವಪುರ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.ಗ್ರಾಮದ ಶ್ರೀಗಣಪತಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಭಗವಂತ ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕನ್ನಡದ ಏಕೈಕ ಮಾಜಿ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನನ್ನ ನೆಚ್ಚಿನ ನಾಯಕರಾದ ಎಚ್.ಡಿ.ದೇವೇಗೌಡ ಅಪ್ಪಾಜಿ ಅವರ ಹುಟ್ಟುಹಬ್ಬದ ಅಂಗವಾಗಿ ಚಿನಕುರಳಿಯ ಗಣಪತಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದೇವೆ ಎಂದರು.ಮಾಜಿ ಪ್ರಧಾನಿಮಂತ್ರಿ ಎಚ್.ಡಿ.ದೇವೇಗೌಡರು ಕರ್ನಾಟಕದ ಹೆಮ್ಮೆಯ ಪ್ರತೀಕ, ರೈತನ ಮಗನಾಗಿ ಜನಿಸಿ ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಮಂತ್ರಿಯಾಗಿ ನೂರಾರು ಜನಪರ, ರೈತಪರ ಯೋಜನೆಗಳನ್ನು ಜಾರಿಗೆ ತಂದು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಕಾವೇರಿ ವಿಚಾರದಲ್ಲಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಇಂತಹ ಧೀಮಂತ ನಾಯಕರ ಸೇವೆ ಇನ್ನೂ ನೂರುಕಾಲ ನಾಡಿಗೆ ಅವಶ್ಯಕತೆ ಇದ್ದು ಭಗವಂತನಲ್ಲಿ ಎಚ್.ಡಿ.ದೇವೇಗೌಡರು ನೂರು ವರ್ಷಗಳ ಕಾಲ ಬಾಳಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ತಾಪಂ ಮಾಜಿ ಸದಸ್ಯ ಸಿ.ಎಸ್.ಗೋಪಾಲಗೌಡ, ಡೇರಿ ಅಧ್ಯಕ್ಷ ಸಿ.ಶಿವಕುಮಾರ್, ವಿಎಸ್ ಎಸ್ ಎನ್ ಬಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷರಾದ ಮೊಗ್ಗಣ್ಣಗೌಡ, ವಾಸುದೇವು, ಗ್ರಾಪಂ ಅಧ್ಯಕ್ಷ ಗಾಯಿತ್ರಿ, ಮಾಜಿ ಅಧ್ಯಕ್ಷರಾದ ಪಾಪಣ್ಣ, ಮಹಮದ್ ಪಾಷ, ಡೇರಿ ಉಪಾಧ್ಯಕ್ಷ ರಮೇಶ್, ರಾಜಣ್ಣ, ಗ್ರಾಪಂ ಸದಸ್ಯರು, ಡೇರಿ ನಿರ್ದೇಶಕರು ಸೇರಿ ಹಲವು ಮುಖಂಡರು, ಅಭಿಮಾನಿಗಳು ಹಾಜರಿದ್ದರು.