ಶಾಲೆಗೆ ಕೊಠಡಿಗಳು, ಕಾಂಪೌಂಡ್ ವ್ಯವಸ್ಥೆ, ಶುದ್ಧ ನೀರಿನ ಘಟಕಗಳು, ಚರಂಡಿ ವ್ಯವಸ್ಥೆ, ಇತ್ಯಾದಿಗಳು ಸರಿಯಿಲ್ಲವೆಂಬ ದೂರುಗಳು ಬಂದಿದ್ದು ಇವುಗಳನ್ನು ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಿಸುವ ಮೂಲಕ ಪರಿಹರಿಸಲಾಗುವುದು. ಸ್ಮಾರ್ಟ್ಕ್ಲಾಸ್ ಅಳವಡಿಕೆಗೆ ಆದ್ಯತೆ ನೀಡಲಾಗುವುದು.
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ನ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದು ಇದಕ್ಕೆ ಪೋಷಕರು ಕಡಿವಾಣ ಹಾಕಬೇಕು, ಮಕ್ಕಳಲ್ಲಿ
ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು ಎಂದು ತಾಪಂ ಇಒ ಎಸ್.ಆನಂದ್ ಸಲಹೆ ನೀಡಿದರು.
ತಾಲೂಕಿನ ಉಪ್ಪಾರಪೇಟೆಯ ಉದಯರವಿ ಸಮುದಾಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ನಡೆದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ಶಾಲೆಗೆ ಸೌಲಭ್ಯ ಕಲ್ಪಿಸುವ ಭರವಸೆ
ಶಾಲೆಗೆ ಕೊಠಡಿಗಳು, ಕಾಂಪೌಂಡ್ ವ್ಯವಸ್ಥೆ, ಶುದ್ಧ ನೀರಿನ ಘಟಕಗಳು, ಚರಂಡಿ ವ್ಯವಸ್ಥೆ, ಇತ್ಯಾದಿಗಳು ಸರಿಯಿಲ್ಲವೆಂಬ ದೂರುಗಳು ಬಂದಿದ್ದು ಇವುಗಳನ್ನು ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಿಸುವ ಮೂಲಕ ಪರಿಹರಿಸಲಾಗುವುದು. ಸ್ಮಾರ್ಟ್ಕ್ಲಾಸ್ ಅಳವಡಿಕೆಗೆ ಆದ್ಯತೆ ನೀಡಲಾಗುವುದು ಎಂದರು.
ಪಿಡಿಒ ಶಿವಣ್ಣ ಮಾತನಾಡಿ, ಇತ್ತೀಚೆಗೆ ರಾಜ್ಯ ಸರ್ಕಾರ ಹೊರಡಿಸಿರುವ ನಾಪತ್ತೆ ಪ್ರಕರಣಗಳ ಅಂಕಿಅಂಶಗಳ ಪ್ರಕಾರ ಏಪ್ರಿಲ್ನಿಂದ ಇಲ್ಲಿವರೆಗೆ ೪೬೧೧ ಸಂಖ್ಯೆಯ ಹೆಣ್ಣುಮಕ್ಕಳು ನಾಪತ್ತೆಯಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ೬೧೧ ಆಗಿದ್ದು ಚಿಂತಾಮಣಿ ತಾಲೂಕಿನಲ್ಲಿ ೩೭ ಪ್ರಕರಣಗಳಿವೆ. ಇವೆಲ್ಲವುಗಳಿಗೂ ಕಡಿವಾಣ ಹಾಕಬೇಕಿದೆ ಎಂದರು.
ಶಾಲೆಯಲ್ಲಿ ಶುಚಿತ್ವ ಕಾಪಾಡಿ
ಮಕ್ಕಳು ತಮ್ಮ ತಮ್ಮ ಶಾಲೆಯ ಆವರಣದ ಅಶುಚಿತ್ವ, ಕಾಂಪೌಂಡ್, ಶೌಚಾಲಯ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುವಂತೆ ಕೇಳಿದಾಗ ಅವುಗಳನ್ನು ವಿವಿಧ ಇಲಾಖೆಯ ಅನುದಾನಗಳೊಂದಿಗೆ ದೊರಕಿಸಿಕೊಡುವುದಾಗಿ ಅವರು ಭರವಸೆಯಿತ್ತರು.
ಈ ಸಂದರ್ಭದಲ್ಲಿ ಉಪ್ಪರಪೇಟೆ ಗ್ರಾ.ಪಂ. ಅಧ್ಯಕ್ಷ ಗೋವಿಂದರೆಡ್ಡಿ, ಉಪಾಧ್ಯಕ್ಷೆ ನಂಜಮ್ಮ, ಗ್ರಾ.ಪಂ. ಸದಸ್ಯರು ಉಷಾರಾಣಿಶೆಟ್ಟಿ, ಎಎಸ್ಐ ನಾರಾಯಣಸ್ವಾಮಿ, ಉಪ್ಪರಪೇಟೆ ಗ್ರಾ.ಪಂ. ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.