ನೆಲಮಂಗಲ: ರಾಜ್ಯದಲ್ಲಿ ವೀರಶೈವ ಲಿಂಗಾಯತರ ಶಕ್ತಿಯುತರಾಗಿದ್ದು, ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸಂಘಟನೆ ಬಲಪಡಿಸಿದರೆ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಘಟಕದ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ ಹೇಳಿದರು.
ವೀರಶೈವ ಲಿಂಗಾಯತ ಮಹಾಸಭಾ ಸಂಘಟನೆ ತಾಲೂಕು ಮಟ್ಟದಲ್ಲಿ ಬಲಪಡಿಸಿದರೆ ಸರ್ಕಾರವನ್ನು ಎಚ್ಚರಿಸುವ ಶಕ್ತಿ ದುಪ್ಪಟ್ಟಾಗುತ್ತದೆ. ಮಹಿಳೆಯರು ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಿ ಸಂಸ್ಕೃತಿ ಉಳಿಸಬೇಕು. ವೀರಶೈವ ಲಿಂಗಾಯತರ ಮಕ್ಕಳು ಸಂಸ್ಕೃತಿ, ಆಚಾರಗಳಿಂದ ದೂರ ಹೋದರೆ ನಮ್ಮ ಧರ್ಮದ ವಿಚಾರಗಳನ್ನು ಮರೆಯುತ್ತಾರೆ. ಆದ್ದರಿಂದ ಮಹಿಳೆಯರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎನ್.ರಾಜಶೇಖರ್ ಮಾತನಾಡಿ, ಗುರುಹಿರಿಯರ ಮಾರ್ಗದರ್ಶನದಲ್ಲಿ ಸಮಾಜವನ್ನು ಸಂಘಟನೆ ಮಾಡುವ ಅವಕಾಶ ಸಿಕ್ಕಿದ್ದು, ಶಕ್ತಿ ಮೀರಿ ಸೇವೆ ಸಲ್ಲಿಸುತ್ತೇನೆ. ಸಮುದಾಯದಲ್ಲಿ ಸೇವೆ ಸಲ್ಲಿಸಿದವರಿಗೆ ಅಭಿನಂದನೆ ಸಲ್ಲಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಮಾಡಲಾಗಿದೆ. ರಾಜ್ಯ, ಜಿಲ್ಲಾ ಘಟಕದ ಪ್ರಮುಖ ಮುಖಂಡರು ಆಗಮಿಸಿರುವುದು ಪ್ರೋತ್ಸಾಹದಾಯಕ ಎಂದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಹಾಗೂ ತಾಲೂಕು ಘಟಕದಲ್ಲಿ 2019-2024ನೇ ಸಾಲಿನಲ್ಲಿ ಸೇವೆ ಸಲ್ಲಿಸಿದ ಪದಾಧಿಕಾರಿಗಳಿಗೆ ತಾಲೂಕು ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಪ್ರಶಂಸನಾ ಪತ್ರ ನೀಡಿದರು. ಇದೇ ವೇಳೆ 2024-2029ನೇ ಸಾಲಿನ ತಾಲೂಕು ಘಟಕದ ಪದಾಧಿಕಾರಿಗಳಿಗೆ ಕೇಂದ್ರ ಸಮಿತಿ ಸದಸ್ಯ ಎನ್.ಎಸ್.ನಟರಾಜು ಸಮ್ಮುಖದಲ್ಲಿ ನೇಮಕಾತಿ ಪತ್ರ ನೀಡಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಪ್ರದೀಪ್, ಪೂರ್ಣಿಮಾ, ಲೋಲಾಕ್ಷಿ, ಜಿಲ್ಲಾಧ್ಯಕ್ಷ ರೇವಣಸಿದ್ದಯ್ಯ, ಮಾಜಿ ಅಧ್ಯಕ್ಷ ಕೆ.ಸಿ.ಅಣ್ಣಪ್ಪ, ಮಹಿಳಾ ಜಿಲ್ಲಾಧ್ಯಕ್ಷೆ ರಾಜಮ್ಮ, ರಾಜ್ಯ ಯುವ ಘಟಕದ ಕಾರ್ಯದರ್ಶಿ ಕೊಟ್ರೇಶ್, ಮಹಿಳಾ ಘಟಕ ಅಧ್ಯಕ್ಷೆ ವೇದಾವತಿ, ನಿರ್ದೇಶಕ ಮಂಜುನಾಥ್, ರುದ್ರೇಶ್ವರ ಸೊಸೈಟಿ ನಿರ್ದೇಶಕ ಎನ್.ವಿ.ಮಂಜುನಾಥ್, ಗ್ರಾ.ಪಂ ಸದಸ್ಯೆ ಅನುಸೂಯಮಲ್ಲಯ್ಯ, ವೀರಶೈವ ಸೊಸೈಟಿ ಅಧ್ಯಕ್ಷ ಲೋಕೇಶ್, ಟೌನ್ ಕೋ ಆಪರಟಿವ್ ಸೊಸೈಟಿ ಅಧ್ಯಕ್ಷ ಚನ್ನಬಸವರಾಜು, ಮಾಜಿ ಅಧ್ಯಕ್ಷ ಜಯದೇವಯ್ಯ, ಬಸವೇಶ್ವರ ಯುವ ಸಂಘದ ಅಧ್ಯಕ್ಷ ಎನ್.ಆರ್.ಗಣೇಶ್ ಮತ್ತಿತರರಿದ್ದರು.ಪೊಟೊ-27ಕೆಎನ್ಎಲ್ಎಮ್1 :
ನೆಲಮಂಗಲದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ನೂತನ ಜಿಲ್ಲಾಧ್ಯಕ್ಷ ರೇವಣಸಿದ್ದಯ್ಯ, ತಾಲೂಕು ಅಧ್ಯಕ್ಷ ಎನ್.ರಾಜಶೇಖರ್, ಮಹಿಳಾ ಘಟಕ ಅಧ್ಯಕ್ಷೆ ವೇದಾವತಿ ಅವರನ್ನು ಕೇಂದ್ರ ಘಟಕದ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ, ಸಮಿತಿ ಸದಸ್ಯ ಎನ್.ಎಸ್.ನಟರಾಜು ಅಭಿನಂದಿಸಿದರು.