ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ
ಕಳೆದ ಆರು ವರ್ಷಗಳಿಂದ ನಡೆಯುತ್ತಿರುವ ಈ ಪಂದ್ಯಾವಳಿ ಉತ್ತಮ ಸಂಬಂಧ ಮತ್ತು ಬೆಳವಣಿಗೆಗೆ ನೆರವಾಗುತ್ತಿದೆ. ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಮತ್ತು ಆಡಳಿತ ಯಂತ್ರದ ಅಧಿಕಾರಿಗಳು ಹೊಂದಾಣಿಕೆ ಇಟ್ಟುಕೊಂಡು ಹೋಗಲು ಈ ವೇದಿಕೆ ಸಹಕಾರಿ. ಇಲಾಖೆಗಳ ನಡುವೆ ಸಮನ್ವಯತೆ ಇದ್ದರೆ ತಾಲೂಕಿನ ಉತ್ತಮ ಅಭಿವೃದ್ಧಿ ಸಾಧ್ಯ ಎಂದು ಬೇಡ್ಕಣಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಹೇಳಿದರು.
ತಾಲೂಕಿನ ಕಡಕೇರಿ- ಕಾನಳ್ಳಿ ಮೈದಾನದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನದ ಪತ್ರಕರ್ತರು ಹಾಗೂ ವಿವಿಧ ಇಲಾಖೆಯ ನೌಕರರ ೬ನೇ ವರ್ಷದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ಟಿ.ಎಸ್.ಎಸ್ ನ ನಿರ್ದೇಶಕ ರವೀಂದ್ರ ಹೆಗಡೆ, ವೇ. ಪರಮೇಶ್ವರಯ್ಯ ಕಾನಳ್ಳಿಮಠ ಮಾತನಾಡಿದರು.
ಪಿಡಿಒ ಸುಬ್ರಮಣ್ಯ ಹೆಗಡೆ, ಅರಣ್ಯ ಇಲಾಖೆಯ ಮಂಜುನಾಥ, ಆಧಾರ ಸಂಸ್ಥೆಯ ನಾಗರಾಜ ಮಾಲ್ಕೋಡ್, ಶಿಕ್ಷಕರ ತಂಡದ ಪ್ರತಿನಿಧಿ ಮಂಜುನಾಥ ನಾಯ್ಕ, ಬಿಸಿಎಂ ಇಲಾಖೆಯ ಸಂಜಯ್, ಆರೋಗ್ಯ ಇಲಾಖೆಯ ಅರುಣ ಕುಮಾರ, ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ್ ಕೊಲಸಿರ್ಸಿ ಸೇರಿ ವಿವಿಧ ಇಲಾಖೆಯ ಪ್ರಮುಖರಿದ್ದರು.
ಎರಡು ದಿನಗಳ ಈ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ, ಕಂದಾಯ, ಅರಣ್ಯ, ಪೊಲೀಸ್ ಇಲಾಖೆ, ಸಹಕಾರಿ ಕ್ಷೇತ್ರ, ಟೀಚರ್ಸ್-೧೧, ಹೆಸ್ಕಾಂ, ಆರೋಗ್ಯ ಇಲಾಖೆ, ತಾಪಂ ಹಾಗೂ ಸರ್ಕಾರಿ ನೌಕರರ ತಂಡಗಳು ಸೇರಿದಂತೆ ಒಟ್ಟು ೧೦ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ.
ಪಟ್ಟಣದ ಕಡಕೇರಿ-ಕಾನಳ್ಳಿ ಮೈದಾನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಂಘ ಆಯೋಜಿಸಿದ್ದ ತಾಲೂಕಿನ ಎಲ್ಲ ಇಲಾಖೆಗಳ ೬ನೇ ವರ್ಷದ ೨ದಿನಗಳ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಟೀಚರ್ಸ್ ತಂಡ ಗೆಲುವು ಸಾಧಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಪ್ರೆಸ್ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.