ಹೊಸಪೇಟೆ: ದೇಶ ಈಗ ಅಭಿವೃದ್ಧಿಯ ಹೊರತಾಗಿ ಕೋಮುವಾರು ವಿಷಯಗಳಿಂದ ಬಳಲುತ್ತಿದೆ. ಈ ಸಮಸ್ಯೆಗಳಿಂದ ಹೊರಬರಲು ಅಭಿವೃದ್ಧಿ ಒಂದೇ ಪರಿಹಾರವಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ರಾಜ್ಯ ಶಿಕ್ಷಣ ಆಯೋಗದ ಸದಸ್ಯ ಪ್ರೊ. ಸತೀಶ್ ದೇಶಪಾಂಡೆ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ, ಅಭಿವೃದ್ಧಿ ಅಧ್ಯಯನ ವಿಭಾಗದಿಂದ ಪಂಪ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಇತ್ತೀಚಿನ ಅಭಿವೃದ್ಧಿ ಮಾದರಿಗಳು ಮತ್ತು ಸಮಾಜ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಭಿವೃದ್ಧಿ ಎಂಬುದು ಸಮಾಜದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ವಿಷಯಗಳು ಬದಲಾದಂತೆ ಅಭಿವೃದ್ಧಿಯ ವ್ಯಾಖ್ಯಾನ ಬದಲಾಗಿದೆ. ಇದಕ್ಕೆ ಪ್ರಾಚೀನ, ಮಧ್ಯಕಾಲ, ಆಧುನಿಕ ಕಾಲದಲ್ಲಿ ಅಭಿವೃದ್ಧಿಯ ಕುರಿತು ಬದಲಾದ ಧೋರಣೆಗಳನ್ನು ಕಾಣಬಹುದು. ಮಾನವ ಅಭಿವೃದ್ಧಿ ಎಂಬ ಕಲ್ಪನೆ ಮೂಡುವುದಕ್ಕಿಂತಲೂ ಆರಂಭದಲ್ಲಿ ಇದ್ದದು ಕೇವಲ ಆರ್ಥಿಕ ಅಭಿವೃದ್ಧಿ. ಬದಲಾದ ಕಾಲದಲ್ಲಿ ಅಭಿವೃದ್ಧಿ ಎಂದರೆ ಅದು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಮಾನವ ಅಭಿವೃದ್ಧಿ ಎಂಬ ವಿಶಾಲವಾದ ವ್ಯಾಪ್ತಿ ಆವರಿಸಿಕೊಂಡಿದೆ. ದೇಶ ಸ್ವಾತಂತ್ರ್ಯ ಪಡೆದ ಆರಂಭದ ದಿನಗಳಲ್ಲಿ ಸಮಾಜದಲ್ಲಿದ್ದ ವರ್ಣಭೇದ, ಜಾತೀಯತೆ, ಧರ್ಮಗಳಂತಹ ಕಂದಕಗಳಿಗೆ ಅಭಿವೃದ್ಧಿಯೇ ಪರಿಹಾರವಾಗಿತ್ತು. ಆದರಿಂದ ನೆಹರೂರವರ ಮೂರು ದಶಕಗಳ ಕಾಲವನ್ನು ಅಭಿವೃದ್ಧಿಯ ಸುವರ್ಣ ಯುಗ ಎಂದು ಕರೆಯಲಾಗಿದೆ. ಆದರೆ, ಇಂದು ವರ್ಣಭೇದ ಎಲ್ಲ ದೇಶಗಳಲ್ಲಿ ಸಾಮಾನ್ಯವಾಗಿದೆ ಇದು ಸೈದ್ಧಾಂತಿಕವಾಗಿ ಅಭಿವೃದ್ಧಿಗೆ ಮಾರಕವಾದ ವಿಷಯವಾಗಿದೆ ಎಂದರು.
ಕುಲಸಚಿವ ಪ್ರೊ.ವಿಜಯ್ ಪೂಣಚ್ಚ ತಂಬಂಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯವು ಬೌದ್ಧಿಕವಾಗಿ ಇತರೆ ವಿಶ್ವವಿದ್ಯಾಲಯಗಳಿಗಿಂತ ಮುಂದಿದೆ. ಇಲ್ಲಿನ ಸಂಶೋಧನಾರ್ಥಿಗಳು ಅತ್ಯುತ್ತಮವಾದ ವಿಷಯ ಮಂಡನೆಯಲ್ಲಿ ಹಿಂದೆ ಬಿದ್ದಿಲ್ಲ ಎಂದರು.ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಗೀತಮ್ಮ ನಿರ್ವಹಿಸಿದರು.