ಹಾನಗಲ್ಲ: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಮತದಾರರು ಈಗಲಾದರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೆಗೌಡರ ಹೇಳಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನಾಯಕರು ಕೇವಲ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆಯೇ ಹೊರತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಲು ಅವರಿಗೆ ವಿಷಯವೇ ಇಲ್ಲದಾಗಿದೆ. ಭಾಗ್ಯಗಳ ಹೆಸರಿನಲ್ಲಿ ಮತ ಯಾಚಿಸುವ ಕಾಂಗ್ರೆಸಿಗರು ಅಭಿವೃದ್ಧಿಗಳ ಕುರಿತು ಮಾತನಾಡಲಿ. ಜಾತಿ ಧರ್ಮಗಳ ಹೆಸರಿನಲ್ಲಿ ಒಡೆದಾಳುವ ನೀತಿಗೆ ಮುಂದಾಗಿರುವ ಕಾಂಗ್ರೆಸಿಗರಿಗೆ ಈ ಬಾರಿ ಮತದಾರರು ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು, ಇಡೀ ಜಗತ್ತಿಗೆ ಮಾದರಿಯಾದ ಆಡಳಿತ, ದೇಶದ ಘನತೆಯನ್ನು ಜಗತ್ತಿನಲ್ಲಿಯೇ ಎತ್ತರಕ್ಕೆ ಕೊಂಡೊಯ್ದ ಹಿರಿಮೆಗಳು ಎಲ್ಲ ಮತದಾರರ ಮನಸ್ಸಿನಲ್ಲಿವೆ. ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತಪೂರ್ವ ಜಯ ಸಾಧಿಸಲಿದ್ದಾರೆ. ಇಂತಹ ಯಶಸ್ಸಿಗಾಗಿ ಬೂತ್ ಮಟ್ಟದಿಂದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡೋಣ ಎಂದರು.ಪಕ್ಷದ ಮುಖಂಡರಾದ ರೇವಣಪ್ಪ ಬ್ಯಾಡಗಿ, ಶಿವಣ್ಣ ಸೈದಣ್ಣನವರ, ಜಿ.ಎಚ್. ಪೊಲೀಸ್ಪಾಟೀಲ, ಬಸವರಾಜ ಕೋಟಿ, ಚಂದ್ರಣ್ಣ ಕಳ್ಳಿ, ಚಂದ್ರಣ್ಣ ತಳವಾರ, ಬಸವರಾಜ ನಾಗಪ್ಪ ಕೋಟಿ ಇದ್ದರು.