ಕನ್ನಡಪ್ರಭ ವಾರ್ತೆ ಉಳ್ಳಾಲ
ಸ್ಟಾರ್ಟ್- ಅಪ್ ಕ್ಷೇತ್ರದಲ್ಲಿ ಪ್ರಗತಿಪರ ಯೋಜನೆಗಳನ್ನು ರೂಪಿಸುವ ಉದ್ದೇಶವಿದ್ದು, ಗ್ರಾಮೀಣ ಕರ್ನಾಟಕ ಮತ್ತು ಭಾರತದ ದುರ್ಬಲ ವರ್ಗದ ಪಾರ್ಕಿನ್ಸನ್ ರೋಗಿಗಳಿಗೆ ಕೈಗೆಟುಕುವ ಚಿಕಿತ್ಸಾ ಸಾಧನಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ಹೊಂದಿದ್ದೇನೆ. ಈಗಾಗಲೇ ನನ್ನ ಆವಿಷ್ಕಾರ ಪ್ರೋಟೋಟೈಪ್ ಹಂತದಲ್ಲಿದೆ. ಇದನ್ನು ಶೀಘ್ರದಲ್ಲೇ ಸಂಪೂರ್ಣ ಉತ್ಪನ್ನವಾಗಿ ಮಾರ್ಪಡಿಸುವ ಯೋಜನೆ ಹೊಂದಿರುವುದಾಗಿ ಪ್ರಧಾನಮಂತ್ರಿ ಬಾಲಪುರಸ್ಕಾರ ಪ್ರಶಸ್ತಿ ಪುರಸ್ಕೃತೆ ಸಿಂಧೂರು ರಾಜ ಹೇಳಿದರು.ಉಳ್ಳಾಲ ಪ್ರೆಸ್ಕ್ಲಬ್ ವತಿಯಿಂದ ಶುಕ್ರವಾರ ನಡೆದ ‘ತಿಂಗಳ-ಬೆಳಕು, ಗೌರವ-ಅತಿಥಿ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವೈಜ್ಞಾನಿಕ ಆವಿಷ್ಕಾರಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಧಾನಮಂತ್ರಿ ಬಾಲ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಮೊಗವೀರಪಟ್ಣದ ವಿದ್ಯಾರ್ಥಿನಿ ಸಿಂಧೂರ ರಾಜ ಅವರನ್ನು ಸ್ಪೀಕರ್ ಯು.ಟಿ. ಖಾದರ್ ಸನ್ಮಾನಿಸಿದರು.ಸಿಂಧೂರ ತನ್ನ ಮೊದಲ ಹೆಜ್ಜೆಯಲ್ಲೇ ದೊಡ್ಡ ಯಶಸ್ಸು ಪಡೆದಿದ್ದು, ಮತ್ತಷ್ಟು ದೊಡ್ಡ ಹೆಜ್ಜೆ ಇಡಲು ಆಕೆಗೆ ಎಲ್ಲ ಅವಕಾಶವೂ ಇದೆ. ವಿಶಿಷ್ಟ ಆವಿಷ್ಕಾರದ ಸಾಧನೆಯ ಮೂಲಕ ಆಕೆ ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಿದ್ದಾಳೆ ಎಂದು ಖಾದರ್ ಹಾರೈಸಿದರು.
ಸಿಂಧೂರ ಅವರ ತಾಯಿ ಶಿಬಾನಿ ರಾಜಾ, ಅಜ್ಜ ಬಾಬು ಬಂಗೇರ, ಅಜ್ಜಿ ಶಶಿಕಾಂಥಿ, ಮಾರ್ಗದರ್ಶಕರಾದ ಪ್ರಶಾಂತ್ ಅಂಚನ್, ಹಿತೈಷಿಗಳಾದ ದೇವಕಿ ಆರ್. ಉಳ್ಳಾಲ್, ಮನೋಜ್ ಬಂಗೇರ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮೋಹನ್ ಕುತ್ತಾರು, ಉಳ್ಳಾಲ ತಾಲೂಕು ಘಟಕದ ಉಪಾಧ್ಯಕ್ಷ ದಿನೇಶ್ ನಾಯಕ್, ಆರೀಫ್ ಯು.ಆರ್., ಕಾರ್ಯದರ್ಶಿಗಳಾದ ವಜ್ರ ಗುಜರನ್, ಡಾ. ಸತೀಶ್ ಕೊಣಾಜೆ, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯರಾದ ಆಸೀಫ್ ಬಬ್ಬುಕಟ್ಟೆ, ಸುಪ್ರೀತ್ ಇರಾ, ಪತ್ರಕರ್ತರಾದ ಸತೀಶ್ ಕುಮಾರ್ ಪುಂಡಿಕಾಯಿ, ವಿನೋಭ, ಸುಶ್ಮಿತಾ ಸಾಮಾನಿ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಧರ ಪೊಯ್ಯತ್ತಬೈಲು ಸ್ವಾಗತಿಸಿ, ನಿರೂಪಿಸಿದರು. ಅಧ್ಯಕ್ಷ ವಸಂತ್ ಎನ್ .ಕೊಣಾಜೆ ಸನ್ಮಾನಿತ ಅತಿಥಿಯನ್ನು ಪರಿಚಯಿಸಿದರು.