ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಉನ್ನತ ಶಿಕ್ಷಣ ಕ್ಷೇತ್ರ ಅಭಿವೃದ್ಧಿ: ಶಾಕ ಎಚ್.ಟಿ.ಮಂಜು

KannadaprabhaNewsNetwork | Published : Oct 8, 2024 1:05 AM

ಸಾರಾಂಶ

ಅಕ್ಕಿಹೆಬ್ಬಾಳು ವಿಶೇಷ ಇತಿಹಾಸವುಳ್ಳ ಹಾಗೂ ರಾಜ್ಯ ಕಂಡ ಹಲವು ಮಹನೀಯರು ಜನಿಸಿರುವ ಗ್ರಾಮ. ಹೋಬಳಿ ಕೇಂದ್ರವಾದರೂ ಹೆಚ್ಚು ಗ್ರಾಮೀಣ ಹಿನ್ನೆಲೆ ಹೊಂದಿದ್ದು, ಶಾಲೆಯಲ್ಲಿ ಹೆಚ್ಚಿನ ಕೊಠಡಿಗಳು ನಿರ್ಮಾಣವಾದರೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗುತ್ತವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಉನ್ನತ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಶಾಸಕ ಎಚ್.ಟಿ ಮಂಜು ತಿಳಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿವೇಕ ಯೋಜನೆಯಡಿ 70.15 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಅಕ್ಕಿಹೆಬ್ಬಾಳು ವಿಶೇಷ ಇತಿಹಾಸವುಳ್ಳ ಹಾಗೂ ರಾಜ್ಯ ಕಂಡ ಹಲವು ಮಹನೀಯರು ಜನಿಸಿರುವ ಗ್ರಾಮ. ಹೋಬಳಿ ಕೇಂದ್ರವಾದರೂ ಹೆಚ್ಚು ಗ್ರಾಮೀಣ ಹಿನ್ನೆಲೆ ಹೊಂದಿದ್ದು, ಶಾಲೆಯಲ್ಲಿ ಹೆಚ್ಚಿನ ಕೊಠಡಿಗಳು ನಿರ್ಮಾಣವಾದರೆ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗುತ್ತವೆ ಎಂದರು.

ಮಕ್ಕಳು ಶಾಲೆಯಲ್ಲಿ ಮೂಲ ಸೌಕರ್ಯಗಳಿಂದ ವಂಚಿತರಾಗದಂತೆ ಸಮರ್ಪಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಪ್ರಸ್ತುತ ಸರ್ಕಾರದಲ್ಲಿ ಹಣವಿಲ್ದಿದ್ದರೂ ನನ್ನ ಕ್ಷೇತ್ರದ ಸಮಸ್ಯೆ ಇರುವುದನ್ನು ಮನವರಿಕೆ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುತ್ತಿದ್ದೇನೆ. ಆ ನಿಟ್ಟಿನಲ್ಲಿ ಇಂದು ನೂತನ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದೇವೆ ಎಂದರು.

ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ಕೈಗೊಂಡು ನಿಗದಿತ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿಗೆ ತಲುಪಿವೆ. ಆದರೆ, ಈ ಶಾಲೆ ಮತ್ತು ಕಾಲೇಜಿನಲ್ಲಿ ಒಟ್ಟು 250ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿರುವ ಮಾಹಿತಿ ತಿಳಿದು ಅರ್ಹ ಕಾಲೇಜಿಗೆ ಅನುದಾನ ನೀಡಿರುವ ತೃಪ್ತಿ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಎ.ಆರ್. ರಘು, ಹೋಬಳಿ ಜೆಡಿಎಸ್ ಅಧ್ಯಕ್ಷ ಬಸವಲಿಂಗಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸು, ಸದಸ್ಯೆ ಪವಿತ್ರ, ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ಮುಖಂಡರಾದ ಎ.ಸಿ. ಮಂಜೇಗೌಡ, ನಾರಾಯಣ್, ರಾಜೇಶ, ಮುದ್ಲಾಪುರ ರಾಮು, ಮಾಚಹೊಳಲು ಪದ್ದು , ವಿಠಲ್ ರಾವ್, ಲೋಕೇಶ್, ಗುತ್ತಿಗೆದಾರ ಆದರ್ಶ, ಉಪನ್ಯಾಸಕ ಚಿಕ್ಕಣ್ಣ, ಆಯಶ ಸಿದ್ದಕ್ಕಿ, ಅರುಣ್ ಕುಮಾರ್, ಶಂಕರ್, ನಾಗೇಶ್, ಪ್ರಿಯಾಂಕಾ ಸೇರಿದಂತೆ ಉಪಸ್ಥಿತರಿದ್ದರು.

Share this article