ಹಾವೇರಿ: ಡಾ. ವೀರೇಂದ್ರ ಹೆಗ್ಗಡೆಯವರ ಹತ್ತಾರು ಜನಪರ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ನಮ್ಮೂರ ನಮ್ಮ ಕೆರೆ ಅವರ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಗ್ರಾಮೀಣ ಜನರಿಗೆ ಯೋಜನೆ ವರದಾನವಾಗಿದೆ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ತಾಲೂಕಿನ ಹಿರಲಿಂಗದಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಾಗೂ ಕುರುಬಗೊಂಡ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 776ನೇ ನಮ್ಮೂರ ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ನಾಮಫಲಕ ಅನಾವರಣ ಮಾಡಿ ಮಾತನಾಡಿದರು. ನಶಿಸಿ ಹೋಗುತ್ತಿರುವ ಕೆರೆಗಳ ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಅನುಕೂಲವಾಗುವ ಜತೆಗೆ ಕೃಷಿ ಅಭಿವೃದ್ಧಿ ಜನಜಾನುವಾರುಗಳಿಗೆ ಹಾಗೂ ಪ್ರಾಣಿ- ಪಕ್ಷಿಗಳಿಗೆ ನಿರಂತರವಾಗಿ ಉಪಯೋಗವಾಗುವ ಯೋಜನೆ ಇದಾಗಿದೆ. ಪೂಜ್ಯರ ದೂರದೃಷ್ಟಿ ಚಿಂತನೆಗಳಿಂದ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪೂಜ್ಯರ ಸಮುದಾಯ ಅಭಿವೃದ್ಧಿ ಯೋಜನೆಗಳು ಶ್ಲಾಘನೀಯವಾಗಿವೆ ಎಂದರು.ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಜಯಶೀಲ ಮಾತನಾಡಿ, ಯೋಜನೆಯ ವತಿಯಿಂದ 3.12 ಎಕರೆ ವಿಸ್ತಿರ್ಣದ ಕೆರೆಯನ್ನು ಹೂಳೆತ್ತಿ ಅಭಿವೃದ್ಧಿಪಡಿಸಲಾಗಿದೆ. ಅದಕ್ಕಾಗಿ ಯೋಜನೆಯಿಂದ ₹4.73 ಲಕ್ಷಗಳನ್ನು ವಿನಿಯೋಗಿಸಲಾಗಿದೆ. ಕೆರೆಯಲ್ಲಿ 90,89,732 ಲೀ. ನೀರು ಸಂಗ್ರಹಣೆಯಾಗಲಿದೆ ಎಂದರು.ಸಮಿತಿಯ ಸದಸ್ಯರಾದ ಶಿವಬಸಪ್ಪ ಮಾಗೋಡು ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಗ್ರಾಪಂ ಅಧ್ಯಕ್ಷೆ ಹೇಮಾವತಿ ಹಾವೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಧಾ ಪಾಟೀಲ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರುದ್ರೇಶ ಚಿನ್ನಣ್ಣನವರ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಪ್ಪ ಬಂಕಾಪುರ ಹಾಗೂ ಉಪಾಧ್ಯಕ್ಷ ಮರಿಸಿದ್ದಪ್ಪ ಮಾಗೋಡ, ನಾಗಪ್ಪ ಬಂಕಾಪುರ, ಕೆರೆ ವಿಭಾಗದ ಅಭಿಯಂತರ ನಿಂಗರಾಜ ಮಾಳಗಿ, ಮೇಲ್ವಿಚಾರಕರಾದ ದೀಪಾರಾಣಿ, ಸೇವಾಪ್ರತಿನಿಧಿಗಳು ಮತ್ತಿತರರು ಇದ್ದರು. ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಸ್ವಾಗತಿಸಿದರು. ತಾಲೂಕು ಯೋಜನಾಧಿಕಾರಿ ನಾರಾಯಣ ಜಿ. ನಿರೂಪಿಸಿದರು. ಕೃಷಿ ಮೇಲ್ವಿಚಾರಕ ಬಸವರಾಜ ವಂದಿಸಿದರು.