ಹಾನಗಲ್ಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ಥಳೀಯರ ಸಹಕಾರದೊಂದಿಗೆ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ತಾಲೂಕಿನ ಮಾರನಬೀಡದಲ್ಲಿ ೫ನೇ ಕೆರೆ ಅಭಿವೃದ್ಧಿಗೊಳಿಸಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಾರನಬೀಡ ಜನರಿಗೆ ಕುಡಿಯುವ ನೀರನ್ನೂ ಒದಗಿಸುವ ಹಾಗೂ ಜನ ಜಾನುವಾರುಗಳ ಸದುಪಯೋಗಕ್ಕಾಗಿದ್ದ ಈ ಹೊಂಡವು ಹೂಳೆತ್ತದೆ, ಕಸ ಕಡ್ಡಿ ಕಂಟಿಗಳಿಂದ ತುಂಬಿತ್ತು. ಇದನ್ನು ಗಮನಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ೪.೨೯ ಎಕರೆ ವಿಸ್ತೀರ್ಣದ ಕೆರೆಯನ್ನು ೫ ಲಕ್ಷ ರು. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಪೂರ್ಣಗೊಳಿಸಿದೆ. ಇದರಿಂದ ಕೆರೆ ಆಳವಾಗಿದ್ದು, ಬಳಕೆಗೆ ಯೋಗ್ಯ ನೀರನ್ನು ನೀಡಲು ಸಿದ್ಧವಾಗಿದೆ. ಸ್ಥಳೀಯರು ಕರೆಯ ಸುತ್ತಲೂ ಗಿಡ ಮರಗಳನ್ನು ನೆಡುವ ಯೋಜನೆ ರೂಪಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಯೋಜನೆ ರೂಪಿಸಿ ಕೆರೆಗೆ ಕಲ್ಲಿನಿಂದ ಪಿಚ್ಚಿಂಗ ಮಾಡುವ ಯತ್ನವೂ ನಡೆದಿದೆ. ಈ ಕುರಿತು ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹಾನಗಲ್ಲ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪಟಗಾರ, ಹಾನಗಲ್ಲ ತಾಲೂಕಿನಲ್ಲಿ ಈವರೆಗೆ ಸಾಂವಸಗಿ, ಕೂಸನೂರು, ಬಾಳಂಬೀಡ, ಅಕ್ಕಿಆಲೂರು, ಮಾರನಬೀಡಗಳಲ್ಲಿ ೫ ಕರೆಗಳನ್ನು ನಮ್ಮ ಊರು ನಮ್ಮ ಕೆರೆ ಯೋಜನೆಯಲ್ಲಿ ಅಭಿವೃಧ್ದಿಪಡಿಸಲಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡಯವರು ಸಾಮಾಜಿಕ ಸೇವಾ ಕಾರ್ಯದಲ್ಲಿ ಇಂತಹ ಕೆರೆಗಳ ಹೂಳೆತ್ತಲು ವಿಶೇಷ ಆದ್ಯತೆ ನೀಡಿದ್ದಾರೆ. ಇದರೊಂದಿಗೆ ದೇವಸ್ಥಾನಗಳ ಅಭಿವೃದ್ಧಿಯೂ ಸೇರಿದೆ. ಅಲ್ಲದೆ ಹಾನಗಲ್ಲ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಮಹಿಳಾ ಸಂಘಗಳನ್ನು ಸಂಘಟಿಸಿ ಸಾಮಾಜಿಕ, ಆರ್ಥಿಕ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗಿದೆ. ದುರ್ಬಲರಿಗೆ ಸಹಾಯ ನೀಡುವುದು, ಪ್ರತಿಭಾವಂತ ಆರ್ಥಿಕ ಸಹಾಯ ಅವಶ್ಯಕತೆ ಇರುವವರಿಗೆ ಸಹಾಯ ನೀಡುವುದು ಸೇರಿದಂತೆ ಹತ್ತು ಹಲವು ಯೋಜನೆಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರಂತರವಾಗಿ ನಡೆದಿವೆ ಎಂದು ತಿಳಿಸಿದ್ದಾರೆ.ಕೆರೆ ಕಾಮಗಾರಿಯಲ್ಲಿ ಸಹಕರಿಸಿದ ಸಮಿತಿ ಅಧ್ಯಕ್ಷರಾದ ಮಲ್ಲೇಶಪ್ಪ ನೆರ್ಕಿಮನಿ, ಸದಸ್ಯರಾದ ಗದಿಗೆಪ್ಪ ಚಂಗಳಮ್ಮನವರ, ಒಕ್ಕೂಟದ ಅಧ್ಯಕ್ಷರಾದ ರೋಜಾ ಚಂಗಳೆಮ್ಮನವರ, ಅಶೋಕ ಸಂಸಿ, ಕೃಷಿ ಮೇಲ್ವಿಚಾರಕ ಕಂತೇಶಗೌಡ ಪಾಟೀಲ, ಮಹಾಂತೇಶ ಹರಕುಣಿ, ಸೇವಾ ಪ್ರತಿನಿಧಿ ಮಂಜುನಾಥ ಹಾಗೂ ಪ್ರೇಮಾ ಮೊದಲಾದವರ ಪರಿಶ್ರಮಕ್ಕೆ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.