ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ
ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕಿನಲ್ಲಿಯೇ ಹೆಚ್ಚು ವ್ಯಾಪ್ತಿ ಹೊಂದಿರುವ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮಾಜಿ ಶಾಸಕ, ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದ್ದಾರೆ.
ತಾಲೂಕಿನ ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡಿರುವ ಸಂಘ ರೈತರಿಗೆ ಅಗತ್ಯವಿರುವ ಗೊಬ್ಬರ, ಕೃಷಿ ಸಲಕರಣೆಗಳನ್ನು ಹೆಚ್ಚಿನ ಮಟ್ಟದಲ್ಲಿ ಮಾರಾಟ ಮಾಡುತ್ತಿದೆ. ಆಡಳಿತಮಂಡಳಿ ಎಲ್ಲಾ ನಿರ್ದೇಶಕರ ಅವಿರತ ಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ಸಂಘ ಬೃಹದಾಕಾರ ವಾಗಿ ಬೆಳೆದಿದೆ. ರೈತರಿಗೆ ನೀಡಿದ ಎಲ್ಲಾ ಸಾಲಗಳು ಸಕಾಲದಲ್ಲಿ ಮರುಪಾವತಿಯಾಗಿವೆ. ಹೊಸದಾಗಿ ಕೆಸಿಸಿ ಸಾಲ ನೀಡಬೇಕೆಂದು ಜಿಲ್ಲೆಯ ಎಲ್ಲಾ ಸಂಘಗಳಿಂದ ಒತ್ತಾಯವಿದೆ. ಮೂಲಭೂತ ಸೌಕರ್ಯದಡಿ ಸಂಘಕ್ಕೆ ಸಿಡಿಸಿಸಿ 2 ಲಕ್ಷ ನೀಡಲಾಗಿದೆ. ಅಪೆಕ್ಸ್ ಬ್ಯಾಂಕ್ ನಿಂದ 3 ಲಕ್ಷ ರು. ಎಂಎಲ್ ಸಿ. ಎಸ್.ಎಲ್. ಭೋಜೇಗೌಡರು 5 ಲಕ್ಷ ನೀಡಲು ಒಪ್ಪಿದ್ದಾರೆ. ಸಂಸದರ ನಿಧಿಯಿಂದ 5 ಲಕ್ಷ ರು.ಕೊಡಿಸಲಾಗುವುದು ಎಂದು ಹೇಳಿದರು.
ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ವಿಜಯಕುಮಾರ್ ಮಾತನಾಡಿ 1976ರಲ್ಲಿ ಸುಮಾರು 10000 ರು ಷೇರು ಹಣದಿಂದ ಪ್ರಾರಂಭವಾದ ಸಂಘ, ಇದೀಗ 5 ಕೋಟಿ ಠೇವಣಿ ಹೊಂದಿದೆ. ಸಂಘದ ವ್ಯಾಪ್ತಿಗೊಳಪಡುವ ರೈತರು ಮತ್ತಷ್ಟು ಹಣ ಠೇವಣಿ ಇಡುವ ಮೂಲಕ ಸಂಘದ ಉನ್ನತಿಗೆ ಸಹಕರಿಸಬೇಕು. ಎಲ್ಲರ ಬೆಂಬಲದಿಂದ ಸಂಘ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಲಿಂಗದಹಳ್ಳಿ ಪ್ರಾಥಮಿಕ ಕೃಷಿ.ಪತ್ತಿನ ಸಹಕಾರ ಸಂಘದಲ್ಲಿ ನಡೆದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭವನ್ನು ಮಾಜಿ ಶಾಸಕ, ಸಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ನೆರವೇರಿಸಿದರು. ಸಂಘದ ಅಧ್ಯಕ್ಷ ಟಿ.ವಿಜಯಕುಮಾರ್, ನಿರ್ದೇಶಕ ಕೆ.ಆರ್.ಆನಂದಪ್ಪ, ಮಾಜಿ ನಿರ್ದೇಶಕ ಎಂ.ನರೇಂದ್ರ ಮತ್ತಿತರರು ಇದ್ದರು.