ಅವಿರತ ಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ಸಂಘ ಅಭಿವೃದ್ಧಿ: ಮಾಜಿ ಶಾಸಕ ಡಿ.ಎಸ್.ಸುರೇಶ್

KannadaprabhaNewsNetwork |  
Published : Nov 11, 2024, 11:46 PM IST
ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ.ಸಂಘದಲ್ಲಿ  ನೂತನ ಕಟ್ಟಡ ಉದ್ಗಾಟನಾ ಸಮಾರಂಭ | Kannada Prabha

ಸಾರಾಂಶ

ತರೀಕೆರೆ, ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕಿನಲ್ಲಿಯೇ ಹೆಚ್ಚು ವ್ಯಾಪ್ತಿ ಹೊಂದಿರುವ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮಾಜಿ ಶಾಸಕ, ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದ್ದಾರೆ.

ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತಾಲೂಕಿನಲ್ಲಿಯೇ ಹೆಚ್ಚು ವ್ಯಾಪ್ತಿ ಹೊಂದಿರುವ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮಾಜಿ ಶಾಸಕ, ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದ್ದಾರೆ.

ತಾಲೂಕಿನ ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡಿರುವ ಸಂಘ ರೈತರಿಗೆ ಅಗತ್ಯವಿರುವ ಗೊಬ್ಬರ, ಕೃಷಿ ಸಲಕರಣೆಗಳನ್ನು ಹೆಚ್ಚಿನ ಮಟ್ಟದಲ್ಲಿ ಮಾರಾಟ ಮಾಡುತ್ತಿದೆ. ಆಡಳಿತ

ಮಂಡಳಿ ಎಲ್ಲಾ ನಿರ್ದೇಶಕರ ಅವಿರತ ಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ಸಂಘ ಬೃಹದಾಕಾರ ವಾಗಿ ಬೆಳೆದಿದೆ. ರೈತರಿಗೆ ನೀಡಿದ ಎಲ್ಲಾ ಸಾಲಗಳು ಸಕಾಲದಲ್ಲಿ ಮರುಪಾವತಿಯಾಗಿವೆ. ಹೊಸದಾಗಿ ಕೆಸಿಸಿ ಸಾಲ ನೀಡಬೇಕೆಂದು ಜಿಲ್ಲೆಯ ಎಲ್ಲಾ ಸಂಘಗಳಿಂದ ಒತ್ತಾಯವಿದೆ. ಮೂಲಭೂತ ಸೌಕರ್ಯದಡಿ ಸಂಘಕ್ಕೆ ಸಿಡಿಸಿಸಿ 2 ಲಕ್ಷ ನೀಡಲಾಗಿದೆ. ಅಪೆಕ್ಸ್ ಬ್ಯಾಂಕ್ ನಿಂದ 3 ಲಕ್ಷ ರು. ಎಂಎಲ್ ಸಿ. ಎಸ್.ಎಲ್. ಭೋಜೇಗೌಡರು 5 ಲಕ್ಷ ನೀಡಲು ಒಪ್ಪಿದ್ದಾರೆ. ಸಂಸದರ ನಿಧಿಯಿಂದ 5 ಲಕ್ಷ ರು.ಕೊಡಿಸಲಾಗುವುದು ಎಂದು ಹೇಳಿದರು.

ನಮ್ಮ ಶಾಸಕ ಅವಧಿಯಲ್ಲಿ ಈ ಭಾಗದಲ್ಲಿ 26 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅವಕಾಶ ಮಾಡಿಕೊಡಲಾಗಿತ್ತು. ಜನವರಿ ತಿಂಗಳಲ್ಲಿ ನೀರು ತುಂಬಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ವಿಜಯಕುಮಾರ್ ಮಾತನಾಡಿ 1976ರಲ್ಲಿ ಸುಮಾರು 10000 ರು ಷೇರು ಹಣದಿಂದ ಪ್ರಾರಂಭವಾದ ಸಂಘ, ಇದೀಗ 5 ಕೋಟಿ ಠೇವಣಿ ಹೊಂದಿದೆ. ಸಂಘದ ವ್ಯಾಪ್ತಿಗೊಳಪಡುವ ರೈತರು ಮತ್ತಷ್ಟು ಹಣ ಠೇವಣಿ ಇಡುವ ಮೂಲಕ ಸಂಘದ ಉನ್ನತಿಗೆ ಸಹಕರಿಸಬೇಕು. ಎಲ್ಲರ ಬೆಂಬಲದಿಂದ ಸಂಘ ಉನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಮಾಜಿ ನಿರ್ದೇಶಕ ಎಂ.ನರೇಂದ್ರ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಸೊನಾಲ್ ಗೌಡ, ಸಂಘದ ಉಪಾಧ್ಯಕ್ಷೆ ಜಯಮ್ಮ, ಸಂಘದ ನಿರ್ದೇಶಕ ಎಸ್.ಎ. ಕೃಷ್ಣಪ್ಪ, ಎಲ್.ಭರತ್, ಜಿ.ರಾಜಪ್ಪ, ಎ.ಅಬ್ದುಲ್ ರೆಹಮಾನ್, ಆರ್.ಮಂಜುನಾಥ್, ಎಸ್.ಟಿ.ಕಮಲಮ್ಮ, ಕೆ.ಸಿ.ನಿಂಗೇಗೌಡ, ಬಿ.ಧನಂಜಯ. ಎನ್.ಜೆ.ಭದ್ರೇಗೌಡ, ಎಸ್.ವೆಂಕಟೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಎನ್.ಚಂದ್ರಶೇಖರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.11ಕೆಟಿಆರ್.ಕೆ.1

ಲಿಂಗದಹಳ್ಳಿ ಪ್ರಾಥಮಿಕ ಕೃಷಿ.ಪತ್ತಿನ ಸಹಕಾರ ಸಂಘದಲ್ಲಿ ನಡೆದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭವನ್ನು ಮಾಜಿ ಶಾಸಕ, ಸಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ನೆರವೇರಿಸಿದರು. ಸಂಘದ ಅಧ್ಯಕ್ಷ ಟಿ.ವಿಜಯಕುಮಾರ್, ನಿರ್ದೇಶಕ ಕೆ.ಆರ್.ಆನಂದಪ್ಪ, ಮಾಜಿ ನಿರ್ದೇಶಕ ಎಂ.ನರೇಂದ್ರ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ