ವಿಜಯಪುರ: ಗ್ರಾಮೀಣಾಭಿವೃದ್ಧಿಯೇ ಕಾಂಗ್ರೆಸ್ ಸರ್ಕಾರದ ಮುಖ್ಯ ಗುರಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಕಾಂಗ್ರೆಸ್ ಸರ್ಕಾರ ಪ್ರತಿ ಹಳ್ಳಿ ಅಭಿವೃದ್ಧಿಗೂ ವಿಶೇಷ ಗಮನ ಹರಿಸುತ್ತಿದೆ. ಕಳೆದ ೧೦ ವರ್ಷಗಳಲ್ಲಿ ಕಾಣದ ಹಳ್ಳಿಗಳ ಅಭಿವೃದ್ಧಿ ಪ್ರಸ್ತುತ ಅವಧಿಯಲ್ಲಿ ನಡೆಯುತ್ತಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೂ ಅನುದಾನ ನೀಡಲಾಗುತ್ತಿದೆ. ಸಿ.ಸಿ.ರಸ್ತೆಗಳು, ಚರಂಡಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಆಯಾ ಗ್ರಾಮಸ್ಥರು ಸರ್ಕಾರಿ ಅನುದಾನದಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಲೋಪದೋಷಗಳು ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಕೇವಲ ಸರ್ಕಾರದ ಮೇಲೆಯೇ ಆರೋಪ ಹೊರಿಸುವುದು ಸರಿಯಲ್ಲ. ನಮ್ಮ ಗ್ರಾಮದ ಅಭಿವೃದ್ಧಿಗೆ ನಮ್ಮ ಜವಾಬ್ದಾರಿಯೂ ಇರುತ್ತದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇನ್ಪೋಸಿಸ್ ಸಂಸ್ಥೆಯವರಿಂದ ಸಿಎಸ್ಆರ್ ಅನುದಾನದಡಿ ೩೦ ಗ್ರಾಮ ಪಂಚಾಯಿತಿಗಳಲ್ಲಿ ತಲಾ ೧ ಕೋಟಿ ವೆಚ್ಚದಲ್ಲಿ ಶಾಲಾ ಕಾಂಪೌಂಡ್, ಶೌಚಾಲಯ, ಕುಡಿಯುವ ನೀರು, ಶಾಲಾ ಕಟ್ಟಡ, ಗ್ರಂಥಾಲಯ, ಆಟದ ಪರಿಕರಗಳನ್ನು ಒದಗಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾರಣ, ಖಾಸಗಿ ಶಾಲೆಗಳ ಮಾದರಿಯಲ್ಲಿ ಉನ್ನತೀಕರಿಸುವ ಯೋಜನೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಯಡಿ ರೂಪಿಸಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಓದುವಂತಹ ಎಲ್ಲಾ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ ೩ ಲಕ್ಷ ಮನೆಗಳು ನಿರ್ಮಾಣ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ತಾಲೂಕಿನಲ್ಲಿ ೨೫೦೦ ನಿವೇಶನಗಳ ಹಂಚಿಕೆಯಾಗಿದೆ. ತಾಲೂಕಿನಲ್ಲಿ ಯಾವ ಯಾವ ಹಳ್ಳಿಗಳಲ್ಲಿ ಸರ್ಕಾರಿ ಭೂಮಿ ಇದೆ ಅದನ್ನು ಗುರುತಿಸಿ, ಹಳ್ಳಿಗಳಲ್ಲಿ ನಿವೇಶನ ರಹಿತರಿಗೆ ನಿವೇಶನಗಳು ಕೊಡುವಂತಹ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ತಾಲೂಕು ಅಧಿಕಾರಿಗಳಿಗೆ ನ.೨೨ರವರೆಗೂ ಗಡುವು ನೀಡಿದ್ದು, ಕಾರ್ಯಕ್ರಮ ಪ್ರಗತಿಯಲ್ಲಿದೆ. ಪ್ರತಿಯೊಬ್ಬರಿಗೂ ಸೂರು ಸಿಗಬೇಕು ಎಂಬುದೇ ಸರ್ಕಾರದ ಉದ್ದೇಶ ಎಂದು ಹೇಳಿದರು.ಇದೇ ಸಂದರ್ಭಲದಲ್ಲಿ ಭಟ್ರೇನಹಳ್ಳಿ, ವೆಂಕಟೇನಹಳ್ಳಿ, ಎ.ರಂಗನಾಥಪುರ, ಚಂದೇನಹಳ್ಳಿ, ನಾರಾಯಣಪುರ, ಚಿನುವಂಡಹಳ್ಳಿ, ಗೊಡ್ಲುಮುದ್ದೇನಹಳ್ಳಿಗಳಲ್ಲಿ ಸಿ.ಸಿ.ರಸ್ತೆಗಳು, ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಕೋಟ್............
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎಪಿಎಲ್, ಬಿಪಿಎಲ್ ಕಾರ್ಡ್ಗಳನ್ನು ರದ್ದು ಪಡಿಸಿಲ್ಲ. ಇದು ಸುಳ್ಳು ಮಾಹಿತಿ ಆಗಿದೆ. ಆದಾಯ ತೆರಿಗೆ ಪಾವತಿದಾರರು, ಕಾರು ಹೊಂದಿರುವವರು, ಅನುಕೂಲಸ್ಥರ ಕುರಿತು ಪರಿಶೀಲನೆ ನಡೆಸಿ, ಎಪಿಎಲ್ಗೆ ವರ್ಗಾಯಿಸಲಾಗುವುದು, ಯಾವುದೇ ಕಾರಣಕ್ಕೂ ಕಾರ್ಡ್ಗಳನ್ನು ರದ್ದು ಮಾಡುವುದಿಲ್ಲ.-ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವರು
(ಫೋಟೋ ಕ್ಯಾಪ್ಷನ್)
ವಿಜಯಪುರ ಹೋಬಳಿ ಚಂದೇನಹಳ್ಳಿ ಗ್ರಾಮದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವ ಕೆ.ಎಚ್.ಮುನಿಯಪ್ಪ, ಬಯಪ ಅದ್ಯಕ್ಷ ಶಾಂತಕುಮಾರ್, ನಿರ್ದೇಶಕರಾದ ವಿ.ಮಂಜುನಾಥ್, ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ ಇತರರು ಭೂಮಿಪೂಜೆ ನೆರವೇರಿಸಿದರು.