ಕನ್ನಡಪ್ರಭ ವಾರ್ತೆ ಹೊಳೆನರಸೀಪುರಭೌಗೋಳಿಕವಾಗಿ ಸಂಪನ್ಮೂಲ ಇದ್ದರೆ ಸಾಲದು. ಅದನ್ನು ಅಚ್ಚುಕಟ್ಟಾಗಿ ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬ ದೂರದೃಷ್ಟಿ ಇದ್ದಾಗ ಮಾತ್ರ ನಗರವನ್ನು ಅಭಿವೃದ್ಧಿಪಡಿಸಲು ಸಾಧ್ಯವೆಂಬ ಮುಂದಾಲೋಚನೆಯ ಚಿಂತನೆಯಿಂದ ಕೂಡಿದ ಮಹಾನ್ ವ್ಯಕ್ತಿ ಕೆಂಪೇಗೌಡರ ಶ್ರಮದಿಂದ ಇಂದು ಬೆಂಗಳೂರು ಅಭಿವೃದ್ಧಿ ಪಥದತ್ತ ಸಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಯೋಗೇಂದ್ರ ಶೆಟ್ಟಿ ಅವರು ಅಭಿಪ್ರಾಯಪಟ್ಟರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ೧೫೭ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಸುಸಜ್ಜಿತವಾದ ಒಂದು ನಗರವಾಗಿ ರೂಪ ಗೊಂಡಿರುವಂತಹ ನಮ್ಮ ಬೆಂಗಳೂರಿಗೆ ಬುನಾದಿ ಹಾಕಿರುವಂತಹ ಧೀಮಂತ ವ್ಯಕ್ತಿಯು ಹಾಕಿರುವಂತಹ ಬುನಾದಿ, ಅವರ ತತ್ವ ಮಾರ್ಗದರ್ಶನದಿಂದಲೇ ಇವತ್ತು ನಮ್ಮ ಬೆಂಗಳೂರು ಈ ರೀತಿ ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯ ಆಯ್ತು. ಧೀಮಂತ ವ್ಯಕ್ತಿಯನ್ನು ಸ್ಮರಿಸುವ ಭಾಗ್ಯ ನಮಗೆ ಒದಗಿ ಬಂದಿದೆ. ನಾವು ಅವರನ್ನು ಕೇವಲ ಸ್ಮರಿಸುವುದಕ್ಕೋಸ್ಕರ ಕಾರ್ಯಕ್ರಮ ಮಾಡಬಾರದು, ಅದರ ಜೊತೆಗೆ ನಾವು ಅವರ ತತ್ವ, ಮಾರ್ಗದರ್ಶನವನ್ನು ನಾವು ದಿನನಿತ್ಯದ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ನಾವು ನೀಡುವಂತಹ ನಿಜವಾದ ಗೌರವವೆಂದು ಹೇಳಬಹುದು. ಆದ್ದರಿಂದಲೇ ಒಂದು ಧೀಮಂತ ವ್ಯಕ್ತಿಯ ಮಾರ್ಗದರ್ಶನ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪ್ರಗತಿಯತ್ತ ಸಾಗೋಣವೆಂದರು.ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸುಂದರೇಶ್ ಅವರು ಹಲವಾರು ಶಾಸನಗಳ ಉಲ್ಲೇಖದೊಂದಿಗೆ ವಿಜಯನಗರ ಸಾಮ್ರಾಜ್ಯದ ವೈಭವ, ಕೆಂಪೇಗೌಡರು ಹಿಂದಿನ ಆಳ್ವಿಕೆಯ ಎಡರು ತೊಡರುಗಳು, ಕೋಟೆಯ ನಿರ್ಮಾಣದಲ್ಲಿ ನರಬಲಿ ಕುರಿತು ಮಾಹಿತಿ ನೀಡಿ, ನಾಡಪ್ರಭು ಕೆಂಪೇಗೌಡರು ೬೦ ನಗರಗಳು ಹಾಗೂ ಕೆರೆಗಳ ನಿರ್ಮಾಣ ಕುರಿತು ಸುರ್ಧೀಘವಾಗಿ ಮಾತನಾಡಿದರು. ಅಪರ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಗುಡದಿನ್ನಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಜೆ.ಪಿ.ಶೇಖರ್ ಹಾಗೂ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ. ವಿ. ಶಿವಕುಮಾರ್ ಮಾತನಾಡಿದರು. ನ್ಯಾಯಾಲಯದ ಸಿಬ್ಬಂದಿ ರೇಣುಕಾ ಪ್ರಾರ್ಥಿಸಿದರು, ಎಚ್. ಶಿವಣ್ಣ ಸ್ವಾಗತಿಸಿದರು, ಸುನೀಲ್ ವಂದಿಸಿದರು ಹಾಗೂ ಶ್ವೇತ ನಿರೂಪಿಸಿದರು.