ಕರ್ನಾಟಕದ ಕಲಾ ವೈಭವ ಸಾರಿದ ಅಮದಳ್ಳಿಯ ಶ್ರೀ ಬಂಟದೇವ ಕಲಾತಂಡ
ಈಶಾನ್ಯ ಭಾರತದ ಏಳು ಸೋದರಿ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಅದ್ಭುತವಾದ ''''''''ದೇವಿ ನೃತ್ಯ'''''''' ಪ್ರದರ್ಶನ ನೀಡುವ ಮೂಲಕ ತಾಲೂಕಿನ ಅಮದಳ್ಳಿಯ ಶ್ರೀ ಬಂಟದೇವ ಯುವಕ ಸಂಘದ ಕಲಾತಂಡವು ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದೆ. ಭಾರತ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯ ಹಾಗೂ ನಾಗಪುರದ ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಷ್ಠಿತ ಉತ್ಸವಗಳಲ್ಲಿ ಈ ತಂಡ ಪಾಲ್ಗೊಂಡು ಜನಮನ ಗೆದ್ದಿದೆ.ನಾಗಾಲ್ಯಾಂಡ್ನ ದಿಮಾಪುರದ ಈಶಾನ್ಯ ಪೂರ್ವ ಸಾಂಸ್ಕೃತಿಕ ಕೇಂದ್ರದ ಸಹಯೋಗದೊಂದಿಗೆ ನಾಗಾಲ್ಯಾಂಡ್, ಅರುಣಾಚಲ್ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಆಯೋಜಿಸಲಾಗಿದ್ದ ದಕ್ಷಿಣಿ ಮಧ್ಯ ಸಾಂಸ್ಕೃತಿಕ ಉತ್ಸವ-2026, ಸ್ಪ್ರಿಂಗ್ ಫೆಸ್ಟಿವಲ್, ಬೋರ್ಡರ್ ಫೆಸ್ಟಿವಲ್ ಹಾಗೂ ಭಾರತ ಕೋ ಜಾನೋ ಉತ್ಸವಗಳಲ್ಲಿ ಅಮದಳ್ಳಿಯ ಕಲಾವಿದರು ಪಾಲ್ಗೊಂಡಿದ್ದರು. ತಂಡವು ಪ್ರದರ್ಶಿಸಿದ ''''''''ಮಹಿಷಾಸುರ ಮರ್ಧಿನಿ'''''''' ಮತ್ತು ದೇವಿ ನೃತ್ಯ ರೂಪಕಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು.ಈ ಸುದೀರ್ಘ ಸಾಂಸ್ಕೃತಿಕ ಯಾನದಲ್ಲಿ ಒಂದೇ ಬಾರಿ ಈಶಾನ್ಯ ಭಾರತದ ನಾಲ್ಕು ರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಶ್ರೀ ಬಂಟದೇವ ಕಲಾತಂಡ ಪಾತ್ರವಾಗಿದೆ. ಇದರೊಂದಿಗೆ ದೇಶದ ಒಟ್ಟು 22 ರಾಜ್ಯಗಳಲ್ಲಿ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದ ಅಪರೂಪದ ಸಾಧನೆ ಈ ತಂಡದ ಪಾಲಾಗಿದೆ. ಸುಮಾರು 22 ದಿನಗಳ ಕಾಲ ನಡೆದ ಈ ಕಠಿಣ ಹಾಗೂ ಸವಾಲಿನ ಸಾಂಸ್ಕೃತಿಕ ಪ್ರವಾಸದಲ್ಲಿ ಕರ್ನಾಟಕವನ್ನು ಯಶಸ್ವಿಯಾಗಿ ಪ್ರತಿನಿಧಿಸಿದ ತಂಡಕ್ಕೆ ಆಯೋಜಕರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.ಈ ಪ್ರವಾಸದ ವೇಳೆ ಕಲಾವಿದರು ಅರುಣಾಚಲ್ ಪ್ರದೇಶದ ಚೀನಾ ಗಡಿ ಭಾಗದಲ್ಲಿರುವ ಗೋಲ್ಡನ್ ಪಕೋಡ, ಅಸ್ಸಾಂನ ಪವಿತ್ರ ಕಾಮಾಖ್ಯಾ ದೇವಿ ಶಕ್ತಿಪೀಠ, ಮೇಘಾಲಯದ ಚಿರಾಪುಂಜಿ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿರುವ ಸುಂದರ ಮನ್ಮೋಹಕ ಸಾಗರ್ ವ್ಯೂ ಪಾಯಿಂಟ್ಗಳನ್ನು ವೀಕ್ಷಿಸುವ ಅವಕಾಶ ಪಡೆದುಕೊಂಡರು. ಇಂತಹ ಮಹತ್ವದ ಅವಕಾಶ ಕಲ್ಪಿಸಿಕೊಟ್ಟ ಎಸ್ಸಿಝಡ್ಸಿಸಿ ನಾಗಪುರದ ನಿರ್ದೇಶಕರು ಹಾಗೂ ಅಧಿಕಾರಿ ವರ್ಗಕ್ಕೆ ತಂಡವು ಕೃತಜ್ಞತೆ ಸಲ್ಲಿಸಿದೆ.ರಾಷ್ಟ್ರೀಯ ಜಾನಪದ ಕಲಾವಿದ ಪುರುಷೋತ್ತಮ ಗೌಡ ಮಾರ್ಗದರ್ಶನದಲ್ಲಿ ಹಾಗೂ ಅಕ್ಷತಾ ದಲಾಲ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದ ಈ ಕಲಾ ಪ್ರದರ್ಶನವನ್ನು ಸ್ನೇಹಾ ಪಿ. ಗೌಡ ಅತ್ಯುತ್ತಮವಾಗಿ ಮುನ್ನಡೆಸಿದರು. ತಂಡದಲ್ಲಿ ಸಹ ಕಲಾವಿದರಾಗಿ ಗಜಾನನ ಅಂಬಿಗ, ವಿನುತಾ ರಾವುತ, ಸ್ನೇಹ ಗೌಡ, ಸಹನಾ ಆಗೇರ, ಮೇಘ ಮಿಟಗಾರ್, ಕೃತಿಕಾ ನಾಯ್ಕ, ಅಶ್ವಿನಿ ರಾವುತ, ಪೂಜಾ ಪಾಟೀಲ್, ಸುದೀಪ ಓಣಿಕೆರೆ, ಪ್ರಜ್ವಲ ಗೌಡ ಮತ್ತು ಪ್ರಶಾಂತ ಪಾಟೀಲ್ ಪಾಲ್ಗೊಂಡು ತಮ್ಮ ಪ್ರತಿಭೆಯ ಮೂಲಕ ನಾಡಿನ ಸಂಸ್ಕೃತಿ ಪಸರಿಸಿದ್ದಾರೆ.