ಜಮಖಂಡಿ : ಭಕ್ತರಿಂದ ಮಠಗಳ ಅಭಿವೃದ್ಧಿ ಸಾಧ್ಯ - ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork | Updated : Dec 03 2024, 12:11 PM IST

ಸಾರಾಂಶ

12ನೇ ಶತಮಾನದಲ್ಲಿ ಬಸವಣ್ಣನವರು ಮಠಗಳಿಂದ ವಿದ್ಯೆ, ದಾಸೋಹ ನಡೆಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ, ಶಿಕ್ಷಣಕ್ಕೆ ಎಲ್ಲರೂ ಹೆಚ್ಚಿನ ಮಹತ್ವ ನೀಡಬೇಕು.

 ಜಮಖಂಡಿ : ಭಕ್ತರ ಸಹಕಾರ ವಿದ್ದಾಗ ಮಾತ್ರ ಮಠಗಳ ಅಭಿವೃದ್ಧಿ ಸಾಧ್ಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದ ಹೊರವಲಯ ಕುಂಚನೂರು ರಸ್ತೆಯಲ್ಲಿ ಬಬಲಾದಿ ಮಠದ ನೂತನ ಕಲ್ಯಾಣ ಮಂಟಪ, ಸಭಾಭವನದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಮಠಗಳಿಂದ ವಿದ್ಯೆ, ದಾಸೋಹ ನಡೆಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ, ಶಿಕ್ಷಣಕ್ಕೆ ಎಲ್ಲರೂ ಹೆಚ್ಚಿನ ಮಹತ್ವ ನೀಡಬೇಕು. ಅನೇಕ ಮಠಗಳು ರಾಜ್ಯದಲ್ಲಿ ತ್ರಿವಿಧ ದಾಸೋಹ ಮಾಡುವ ಮೂಲಕ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದಿವೆ. ಬಸವಣ್ಣನವರು ಹೇಳಿದಂತೆ ದಯವೇ ಧರ್ಮದ ಮೂಲ ದಯೆ ಯಿರುವ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಬಬಲಾದಿಯ 14 ಮಠಗಳಲ್ಲಿ ದಾಸೋಹ ಮತ್ತು ಶಿಕ್ಷಣ ನೀಡಲಾಗುತ್ತಿರುವುದು ಶ್ಲಾಘನೀಯವೆಂದರು.

ಬಬಲಾದಿ ನೂತನ ಮಠಕ್ಕೆ ಸರ್ಕಾರದ ಮುಜರಾಯಿ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ಮಾಡಲಾಗುವುದು. ಎಲ್ಲ ಭಕ್ತರ ಅಪೇಕ್ಷೆಯಂತೆ ಮಠದ ರಸ್ತೆಯ ನಿರ್ಮಾಣ ಹಾಗೂ ಇನ್ನಿತರ ಅಭಿವೃದ್ಧಿ ಮಾಡಲಾಗುವುದೆಂದರು, ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ ಪ್ರಾಸ್ತಾವಿಕ ವಾಗಿ ಮಾಡನಾಡಿ, ಭಕ್ತರು ಹೊಸ ಮಠಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಬಲಾದಿ ಮಠದ ವಿರೇಶ ಅಜ್ಜ, ಮಾತನಾಡಿ ಕಾಲಜ್ಞಾನದ ಬಗ್ಗೆ ವಿವರಣೆ ನೀಡದರು. ಚಿಕ್ಕಯ್ಯಮುತ್ಯಾರವರ ಕಾಲಜ್ಞಾನ ಇಂದಿಗೂ ಸುಳ್ಳಾಗಿಲ್ಲ ಎಂದರು. ಶಿವರುದ್ರಮುತ್ಯಾ ಮಾತನಾಡಿದರು. ಬಬಲಾದಿ ಮಠ ಜಮಖಂಡಿ ದಾಸೋಹ ಚಕ್ರವರ್ತಿ ಸದಾಶಿವ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಮಾಜಿ ಶಾಸಕ ಆನಂದ ನ್ಯಾಮಗೌಡ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ, ಉಪಾಧ್ಯಕ್ಷೆ ರೇಖಾ ಕಾಂಬಳೆ, ನ್ಯಾಯವಾದಿ ಜಿ.ಕೆ. ಮಠದ, ವೇದಿಕೆಯಲ್ಲಿದ್ದರು. ವಿಕ್ರಂ ಇಂಗಳೆ ಸ್ವಾಗತಿಸಿದರು, ಸರಸ್ವತಿ ಸಬರದ ಪ್ರಾರ್ಥನಾಗೀತೆ ಹಾಡಿದರು. ಶಿಕ್ಷಕ ಕಡಕೋಳ ವಂದಿಸಿದರು.

Share this article