ಮೂಡುವೇಣುಪುರಕ್ಕೆ ಗೋಕರ್ಣ ಮಠಾಧೀಶರ ಪ್ರಥಮ ಭೇಟಿ
ಎಲ್ಲವೂ ದೇವರ ಸೃಷ್ಟಿಯೇ ಆಗಿರುವಾಗ ದೇವರಿಗೆ ನಾವು ನೀಡಿದ್ದೇವೆ ಎನ್ನುವ ಅಹಂಭಾವಕ್ಕೆ ಅರ್ಥವಿಲ್ಲ. ಭಾವ ಗ್ರಾಹಿಯಾಗಿರುವ ಭಗವಂತನಿಗೆ ನಾವು ನೀಡಬಹುದಾಗಿರುವುದು ಭಕ್ತಿ ಮಾತ್ರ ಎಂದು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಸಂಜೆ ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನಕ್ಕೆ ತಮ್ಮ ಪ್ರಥಮ ಅನುಗ್ರಹ ಭೇಟಿ ನೀಡಿದ ಬಳಿಕ ಆಶೀರ್ವಚನ ನೀಡಿದರು.ಶ್ರೀ ಸಂಸ್ಥಾನದ 550ನೇ ವರ್ಷಾಚರಣೆಯ ಅಂಗವಾಗಿ ನಡೆದಿರುವ 550 ದಿನಗಳ 550 ಕೋಟಿ ಶ್ರೀ ರಾಮನಾಮ ಜಪ ಅಭಿಯಾನದಲ್ಲಿ 120 ಜಪ ಕೇಂದ್ರಗಳು 85 ಉಪ ಕೇಂದ್ರಗಳಲ್ಲಿ ಈಗಾಗಲೇ ಒಟ್ಟು 415 ಕೋಟಿ ಜಪ ಪೂರ್ಣಗೊಂಡು ಸಂಕಲ್ಪ ಯಶಸ್ಸಿನ ಹಾದಿಯಲ್ಲಿದೆ ಎಂದ ಶ್ರೀಗಳು, ನಮ್ಮ ಭಕ್ತಿಯ ಶ್ರೀ ರಾಮ ನಾಮ ಜಪ ಪರಮಾತ್ಮನಿಗೆ ಅರ್ಪಿಸುವುದೇ ಶ್ರೇಷ್ಠ ಸೇವೆ ಎಂದರು.
ಬಳಿಕ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳನ್ನು ಆಡಳಿತ ಮಂಡಳಿ ವತಿಯಿಂದ ಪಾದಪೂಜೆ ಸಹಿತ ಗೌರವಿಸಲಾಯಿತು. ದೇವಳ ಆಡಳಿತ ಮೊಕ್ತೇಸರ ಜಿ. ಉಮೇಶ ಪೈ ಸ್ವಾಗತಿಸಿದರು. ಜಪ ಕೇಂದ್ರದ ಪ್ರತಿನಿಧಿ ಎಂ. ಗಣೇಶ್ ಕಾಮತ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಎಂ. ನಾಗೇಂದ್ರ ಭಟ್ ವಂದಿಸಿದರು.
ವೈದಿಕ ವೃಂದದ ಪ್ರಾರ್ಥನೆ, ಆಶೀರ್ವಚನದ ಬಳಿಕ ಶ್ರೀ ರಾಮನಾಮ ಜಪ ಅಭಿಯಾನದ ಅಂಗವಾಗಿ ಇಲ್ಲಿನ ವಿದ್ಯಾನಿಧಿ ಜಪ ಕೇಂದ್ರದ ವಿಶೇಷ ಜಪ ಅಭಿಯಾನದಲ್ಲಿ ವೈದಿಕ ಎಂ. ಸುಧೇಶ್ ಭಟ್ ವಿಶೇಷ ಜಪ ಅಭಿಯಾನವನ್ನು ಸಂಕಲ್ಪದೊಂದಿಗೆ ನೆರವೇರಿಸಿದರು. ಶ್ರೀಗಳು ಜಪ ಅಭಿಯಾನದಲ್ಲಿ ಪಾಲ್ಗೊಂಡು ಶ್ರೀರಾಮ ದೇವರಿಗೆ ಮಹಾಪೂಜೆ ಸಲ್ಲಿಸಿದರು.ದೇವಳದ ಮೊಕ್ತೇಸರರು, ಪ್ರಧಾನ ಅರ್ಚಕ ಎಂ. ಹರೀಶ್ ಭಟ್ ಸಹಿತ ವೈದಿಕ ವೃಂದ, ಹೋಬಳಿಯ ಊರ, ಪರಪೂರಿನ ದೇವಳಗಳ ಪ್ರಮುಖರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಬಳಿಕ ಶ್ರೀಗಳು ಸಮಾಜ ಬಾಂಧವರಿಗೆ ಫಲಮಂತ್ರಾಕ್ಷತೆ ವಿತರಿಸಿದರು.
ವಿದ್ಯಾಕಲ್ಪತರು ಬಳಗದ ವಿದ್ಯಾರ್ಥಿಗಳು ಸ್ತೋತ್ರ ಪಠಣ, ಸಂಕೀರ್ತನೆಯಲ್ಲಿ ಸಹಕರಿಸಿದರು.ಪೊನ್ನೆಚಾರಿ ದೇವಳ ಭೇಟಿ:ಬಳಿಕ ಶ್ರೀಗಳು ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ತಮ್ಮ ಮೊದಲ ಅನುಗ್ರಹ ಭೇಟಿ ನೀಡಿದರು. ಅನುವಂಶಿಕ ಮೊಕ್ತೇಸರ ಎಂ.ಪಿ. ಅಶೋಕ್ ಕಾಮತ್ ಕುಟುಂಬಸ್ಥರು ಶ್ರೀಗಳನ್ನು ಗೌರವಾದರಗಳೊಂದಿಗೆ ಸ್ವಾಗತಿಸಿ, ಪಾದಪೂಜೆ ಸಲ್ಲಿಸಿ ಫಲಮಂತ್ರಾಕ್ಷತೆ ಸ್ವೀಕರಿಸಿದರು. ಬಳಿಕ ಶ್ರೀಗಳನ್ನು ಕಾಪು ಮೊಕ್ಕಾಂಗೆ ಬೀಳ್ಕೊಡಲಾಯಿತು.