ಶಿರಸಿ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುವ ಯಾವುದೇ ಕಾಯಕಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ. ಪ್ರತಿಯೊಬ್ಬರೂ ತಮ್ಮ ಕೈಲಾದ ಸೇವಾ ಕಾರ್ಯದಲ್ಲಿ ತೊಡಗುವ ಮೂಲಕ ಭಗವಂತನ ಪ್ರೇರಣೆ ಮತ್ತು ಕೃಪೆಗೆ ಪಾತ್ರರಾಗಬೇಕು ಎಂದು ಶಿರಸಿ ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಕರೆ ನೀಡಿದರು.
ನಗರದ ಕೋಡಿಬಾಗದ ಪುಣ್ಯಕ್ಷೇತ್ರ ಸಾಯಿಕಟ್ಟಾದಲ್ಲಿ ನಡೆದ 58ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂತಹ ಸತ್ಸಂಗ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಭಗವಂತನ ಪ್ರೀತಿಗೆ ಪಾತ್ರರಾಗುವ ಸೌಭಾಗ್ಯ ದೊರೆಯುತ್ತದೆ. ದೇವರು ಪ್ರತಿಯೊಬ್ಬ ಭಕ್ತರ ಮನಸ್ಸಿನಲ್ಲಿ ನೆಲೆಸಿರುತ್ತಾನೆ. ಆದ್ದರಿಂದ ನಾವು ಉತ್ತಮ ಸಂಸ್ಕಾರ, ಸಹಾಯ-ಸಹಕಾರ ಮತ್ತು ಮಾನವ ಸೇವೆ ಮೂಲಕ ದೇವರ ಪ್ರೀತಿ ಗಳಿಸಬೇಕು ಎಂದು ತಿಳಿಸಿದರು.
ಸಾಮಾಜಿಕ ಅರಣ್ಯ ವಿಭಾಗದ ಡಿಎಫ್ಓ ಮಂಜುನಾಥ ನಾವಿ, ಭಕ್ತಿ ಮತ್ತು ನಂಬಿಕೆ ಇದ್ದಾಗ ಮಾತ್ರ ಭಗವಂತನ ಸಾಕ್ಷಾತ್ಕಾರ ಪಡೆಯಲು ಸಾಧ್ಯವಿದೆ. ಮನಸ್ಸಿನಲ್ಲಿ ಬೇಡಿದ್ದನ್ನು ಸ್ವಾಮಿ ನೀಡುತ್ತಾನೆ ಎಂಬ ವಿಶ್ವಾಸದಿಂದ ಸತ್ಸಂಗದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.
ಸತ್ಯ ಸಾಯಿಬಾಬಾ ಅವರ 100 ವರ್ಷದ ಜನ್ಮದಿನೋತ್ಸವದ ಅಂಗವಾಗಿ ನೂರು ದೇಶಗಳಲ್ಲಿ ನೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೊಲಂಬಿಯಾದಲ್ಲಿ 70ನೇ ದಿನದ 70ನೇ ದೇಶದ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಧನಿಕಾ ಪ್ರಕಾಶ ಹರಿಕಂತ್ರ, ಕ್ರಿಶಿಕಾ ಗಿರೀಶ ಉಳ್ವೇಕರ್, ಗಗನ್ ಗಣಪತಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು.ಶ್ರೀ ಕ್ಷೇತ್ರದಲ್ಲಿ ಮುಂಜಾನೆಯಿಂದ ಸಂಜೆವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ ದಿ. ಶಾಂತಾರಾಮ್ ಸೈರು ನಾಯ್ಕ ಕುಟುಂಬದಿಂದ ಹಾಗೂ ಶ್ರೀ ಸಾಯಿಕಟ್ಟಾ ಸಾಯಿಭಕ್ತ ಮಂಡಳಿಯಿಂದ ಭಜನೆ ಹಾಗೂ ಅನ್ನಸಂತರ್ಪಣೆ ನಡೆಯಿತು.