ರಾಜ್ಯದ ಬಗ್ಗೆ ಪ್ರಜ್ವಲ್‌ ಸಂಸತ್ ನಲ್ಲಿ ಮಾತನಾಡಿದ್ದಾರಾ?: ಸಿಎಂ

KannadaprabhaNewsNetwork | Published : Apr 23, 2024 12:48 AM

ಸಾರಾಂಶ

ಹತ್ತು ವರ್ಷಗಳ ಕಾಲ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಿದ್ದರು, ಈ‌ ಹತ್ತು ವರ್ಷಗಳಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಈಗ ನಿಮಗೆ ಒಂದು ಅವಕಾಶ ಬಂದಿದೆ, ಯಾರು ಬಡವರು, ರೈತರು, ಮಹಿಳೆಯರ ಪರ ಇರುತ್ತಾರೆಯೋ ಅವರಿಗೆ ತೀರ್ಪು ನೀಡಿ.

ಕನ್ನಡಪ್ರಭ ವಾರ್ತೆ ಅರಸೀಕೆರೆಯಾವತ್ತಾದರೂ ಕರ್ನಾಟಕದ ಬಗ್ಗೆ ಪ್ರಜ್ವಲ್‌ ರೇವಣ್ಣ ಸಂಸತ್ ನಲ್ಲಿ ಮಾತನಾಡಿದ್ದಾರಾ? ಅರಸೀಕೆರೆಗೆ ಬಂದು ನಿಮ್ಮ ಕಷ್ಟ- ಸುಖ ಕೇಳಿದ್ದಾರಾ? ದಯಮಾಡಿ ಈ‌ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣರನ್ನು ಸೋಲಿಸಿ, ಶ್ರೇಯಸ್‌ ಪಟೇಲ್ ರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ನಗರದ ಶಿವಮೊಗ್ಗ-ಬೆಂಗಳೂರು ರಸ್ತೆಯಲ್ಲಿ ಆರಂಭವಾದ ರೋಡ್ ಶೋನಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯನವರಿಗೆ ಕೆ,ಎಂ.ಶಿವಲಿಂಗೇಗೌಡ, ಕಡೂರು ಶಾಸಕ ಆನಂದ್ ಸಾಥ್ ನೀಡಿದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ, ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಿವಲಿಂಗೇಗೌಡರನ್ನು ಮಂತ್ರಿ ಮಾಡುತ್ತೇನೆ, ಮೊದಲ ಬಾರಿಯೇ ಮಂತ್ರಿ ಮಾಡಲು ಪ್ರಯತ್ನ ಪಟ್ಟೆ, ಆದರೆ ಬೇರೆ ಕಾರಣಗಳಿಂದ ಆಗಲಿಲ್ಲ, ಮುಂದಿನ ಬಾರಿ ಶಿವಲಿಂಗೇಗೌಡರನ್ನು ಸಚಿವರನ್ನಾಗಿ ಮಾಡೇ ಮಾಡುವೆ ಎಂದು ತಿಳಿಸಿದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ:

ಹತ್ತು ವರ್ಷಗಳ ಕಾಲ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಿದ್ದರು, ಈ‌ ಹತ್ತು ವರ್ಷಗಳಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಈಗ ನಿಮಗೆ ಒಂದು ಅವಕಾಶ ಬಂದಿದೆ, ಯಾರು ಬಡವರು, ರೈತರು, ಮಹಿಳೆಯರ ಪರ ಇರುತ್ತಾರೆಯೋ ಅವರಿಗೆ ತೀರ್ಪು ನೀಡಿ. ದೇವೇಗೌಡರು ಕಳೆದ ಲೋಕಸಭಾ ಚುನಾವಣೆಯಲ್ಲಿ ಏನೆಲ್ಲಾ ಹೇಳಿದ್ದರು. ಬಿಜೆಪಿ, ನರೇಂದ್ರಮೋದಿ ಅವರ ಬಗ್ಗೆ ಏನೆಲ್ಲ ಮಾತನಾಡಿದ್ದರು, ವಾಚಾಮಗೋಚರವಾಗಿ ಬಿಜೆಪಿಯನ್ನು ಬೈದಿದ್ದರು. ಆದರೆ ಇವತ್ತು ನರೇಂದ್ರ ಮೋದಿ ಅವರನ್ನೇ ಅಪ್ಪಿಕೊಂಡಿದ್ದಾರೆ. ನರೇಂದ್ರ ಮೋದಿ ಹಾಗೂ ನನ್ನ ಸಂಬಂಧ ಅನ್ಯೋನ್ಯವಾಗಿದೆ, ಬಹಳ ಪ್ರೀತಿಸುತ್ತಾರೆ, ಗೌರವ ಕೊಡುತ್ತಾರೆ ಎಂದೆಲ್ಲ ಹೇಳುತ್ತಾರೆ, ನಿಮ್ಮದು ಜಾತ್ಯಾತೀತ ಜನತಾದಳ ಎಂದು ನಾನು ದೇವೇಗೌಡರಿಗೆ ಸಲಹೆ ಕೊಟ್ಟಿದ್ದೇನೆ . ನೀವು ಇನ್ನು ಮುಂದೆ ಜನತಾದಳ ಎಂದು ಹೆಸರು ಬದಲಾಯಿಸಿ, ನೀವು ಕೋಮುವಾದಿಗಳ ಜೊತೆ ಸೇರಿಕೊಂಡಿದ್ದೀರಿ ಎಂದು ಹೇಳಿದ್ದಕ್ಕೆ ದೇವೇಗೌಡರು ಕೆಂಡಾಮಂಡಲರಾಗಿ ನನ್ನ ಗರ್ವಭಂಗ ಮಾಡುತ್ತೇನೆ ಎಂದರು. ನನಗೆ ಗರ್ವವೂ ಇಲ್ಲಾ, ಭಂಗವೂ ಇಲ್ಲ, ನರೇಂದ್ರಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದು ಗೌಡರು ಹೇಳಿದ್ದರು. ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುತ್ತೇನೆ ಎಂದಿದ್ದರು,

ಬಿಜೆಪಿ ಕೋಮುವಾಗಿ ಪಕ್ಷ, ಒಂದು ಕೋಮಿನ‌ ಮೇಲೆ ಇನ್ನೊಂದು ಕೋಮನ್ನು ಎತ್ತಿಕಟ್ಟುವ ಪಕ್ಷದಲ್ಲಿ ದೇವೇಗೌಡರು ಭಾಷಣ‌ ಮಾಡಿದ್ದಾರೆ,

ಖಾಲಿ‌ ಚೊಂಬನ್ನು ಮೋದಿ ಅಕ್ಷಯ ಪಾತ್ರೆ ಮಾಡುತ್ತಾರೆ ಎಂದಿದ್ದಾರೆ ಎಂದು ತಿಳಿಸಿದರು.

ದೇವೇಗೌಡರು ತಮ್ಮ ಸ್ವಾರ್ಥಕ್ಕೋಸ್ಕರ ನರೇಂದ್ರ ಮೋದಿಯವರನ್ನು ಹೊಗಳುತ್ತಿದ್ದಾರೆ, ಅವರ ಮೊಮ್ಮಗನ ರಕ್ಷಣೆಗೋಸ್ಕರ ಹೊಗಳುತ್ತಿದ್ದಾರೆ

ರೇವಣ್ಣ ಎಂಎಲ್‌ಎ, ಪ್ರಜ್ವಲ್‌ ರೇವಣ್ಣ ಸಂಸದ, ಇನ್ನೊಬ್ಬ ಮಗ ಎಂಎಲ್‌ಸಿ, ಹೆಂಡತಿ ಜಿಪಂ ಮಾಜಿ ಸದಸ್ಯೆ, ಡಿಸಿಸಿ ಬ್ಯಾಂಕ್ ಎಲ್ಲಾ ಅವರಿಗೇ ಬೇಕು,

ಬೇರೆ ಯಾರೂ ಇಲ್ಲವೇ? ಅವರ ಪಕ್ಷದಲ್ಲಿ ದೇವೇಗೌಡರು, ಅವರ ಮನೆಯವರನ್ನು ಬಿಟ್ಟರೆ ಬೇರೆ ಯಾರನ್ನೂ ಸಹಿಸುವುದಿಲ್ಲ. ದೇವೇಗೌಡರು ಅನೇಕ ಒಕ್ಕಲಿಗರ ನಾಯಕರನ್ನು ಮುಗಿಸಿದ್ದಾರೆ, ಅವರ ಕುಟುಂಬಕ್ಕೋಸ್ಕರ ಬಿಜೆಪಿ‌ ಜೊತೆ ಸೇರಿದ್ದಾರೆ, ನಾನು ಹಾಸನ ಜಿಲ್ಲೆಯ ಎಂಟು ಕ್ಷೇತ್ರಗಳಿಗೆ ಭೇಟಿ ನೀಡಿರುವೆ, ಅಲ್ಲೆಲ್ಲಾ ಜೆಡಿಎಸ್ ಅನ್ನು ಸೋಲಿಸಲು ನಿರ್ಧರಿಸಿದ್ದಾರೆ. ರೇವಣ್ಣ, ಪ್ರಜ್ವಲ್‌ ರೇವಣ್ಣ ಎಷ್ಟೇ ಹಣ ಖರ್ಚು ಮಾಡಿದರೂ ಗೆಲ್ಲುವುದು ಶ್ರೇಯಸ್‌ ಪಟೇಲ್ ಎಂದು ತಿಳಿಸಿದರು.

Share this article