-ಸಾರ್ವಜನಿಕರಿಗೆ ಕಲಬುರಗಿ ಪೊಲೀಸ್ ಕಮೀಷನರ್ ಡಾ. ಶರಣಪ್ಪ ಕಿವಿಮಾತು । 1930ಗೆ ಕರೆ ಮಾಡಿ ಅಥವಾ ಪೊಲೀಸ್ ಠಾಣೆಗೆ ದೂರು ಕೊಡಿ
ಕನ್ನಡಪ್ರಭ ವಾರ್ತೆ ಕಲಬುರಗಿ
ಸೈಬರ್ ವಂಚಕರು ಕ್ರಿಯಾಶೀಲರಾಗಿದ್ದಾರೆ, ಎಚ್ಚರಾಗಿರಿ, ಕಲಬುರಗಿ ಸುತ್ತಮುತ್ತ ಅಲ್ಪಾವಧಿಯಲ್ಲೇ ಡಿಜಿಟಲ್ ಅರೆಸ್ಟ್ನಂತಹ ಕೃತ್ಯಗಳಲ್ಲಿ ಅಮಾಯಕರ ಬಹುಕೋಟಿ ಹಣ ಲೂಟಿಯಾಗುತ್ತಿದೆ. ಡಿಜಿಟಲ್ ಅರೆಸ್ಟ್ಗೆ ಭಯಬಿದ್ದು ಹಣ ಕಳೆದುಕೊಳ್ಳಬೇಡಿ. ಘಟನೆ ಸಂಭವಿಸಿದ ಮೊದಲ 24 ಗಂಟೆಯೊಳಗೆ 1930ಗೆ ಕರೆ ಮಾಡಿ ದೂರು ಕೊಡಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸುವಂತೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಜನತೆಗೆ ಕಿವಿಮಾತು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಲಬುರಗಿಯಲ್ಲಿನ ಸೈಬರ್ ಅಪರಾಧದಲ್ಲಿ ಕಳೆದು ಹೋಗಿರುವ ಜನರ ದುಡ್ಡನ್ನು ಜಪ್ತಿ ಮಾಡುವಲ್ಲಿ ತಕ್ಕಮಟ್ಟಿಗೆ ಸೆನ್ ಠಾಣೆಯ ಪೊಲೀಸರು ಯಶ ಕಂಡಿದ್ದಾರೆ. ಆದಾಗ್ಯೂ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದರು.
ಸೈಬರ್ ಅಪರಾಧದಲ್ಲಿ ಹಣ ಕಳೆದುಕೊಂಡವರು ಮೊದಲ 24 ಗಂಟೆ ಗೋಲ್ಡನ್ ಅವರ್ನಲ್ಲಿ ದೂರು ದಾಖಲಿಸಿದವರಿಗೆ ಅವರ ಕಳೆದು ಹೋದ ಹಣದಲ್ಲಿ ಶೇ.80ರಿಂದ ಶೇ. 90ರಷ್ಟು ಹಣ ಮರಳಿ ಬರುವಂತೆ ಮಾಡಲಾಗಿದೆ. ಜನ ಸೈಬರ್ ವಂಚನೆಗೊಳಗಾದಲ್ಲಿ ತಕ್ಷಣ 1930ಗೆ ಕರೆ ಮಾಡಿ ದೂರು ದಾಖಲಿಸಿದರೆ ಪ್ರಕರಣದ ತನಖೆಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಡಾ. ಶರಣಪ್ಪ ಢಗೆ ಹೇಳಿದರು.
ಬ್ಯಾಂಕ್ಗಳಿಂದ ಗ್ರಾಹಕರಿಗೆ ಆ ಕಾರ್ಡ್ ತಗೊಳ್ಳಿ, ಇದನ್ನ ತಗೊಳ್ಳಿರೆಂದು ಕರೆಗಳು ಬರುತ್ತಿವೆ. ಬ್ಯಾಂಕ್ನವರು ಯಾರು, ವಂಚಕರು ಯಾರು ಎಂಬ ಗೊಂದಲದಲ್ಲಿ ಇಂತಹ ಸೈಬರ್ ಅಪರಾಧಗಳಿಗೆ ಅವಕಾಶವಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಬ್ಯಾಂಕ್ಗಳಿಗೆ ಸೂಕ್ತ ಸೂಚನೆ ಕೊಡಲಾಗುವುದು. ಗ್ರಾಹಕರ ವಿವರ ಜನರಿಗೆ ಗೊಂದಲವಾಗದಂತೆ ಎಚ್ಚರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಸೆನ್ ಠಾಣೆಯಲ್ಲಿ ಉತ್ತಮ ಕೆಲಸ ಮಾಡಿದ ಪೊಲೀಸ್ ಸಿಬ್ಬಂದಿಗೆ ಮೆಚ್ಚುಗೆ ಪತ್ರ ನೀಡಿ ಶುಭ ಕೋರಿದರು. ಎಸಿಪಿ ಜೇಮ್ಸ್ ಮಿನೇಜಸ್ ಸೇರಿದಂತೆ ಪೊಲೀಸ್ ಅಧಿಕಾರಿಗಳಿದ್ದರು.
ನಾಲ್ಕು ಬ್ಯಾಂಕ್ ಖಾತೆಯಿಂದಲೂ ಹಣ: ನಿವೃತ್ತ ವೈದ್ಯ ಅಳಲು
ತಮ್ಮ ಮೊಬೈಲ್ ನಂಬರ್ಗೆ ವಾಟ್ಸಪ್ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತಾನು ಪ್ರದೀಪಕುಮಾರ, ಮುಂಬೈ ಕ್ರೈಂ ಬ್ರ್ಯಾಂಚ್ನಿಂದ ಮಾತನಾಡುತ್ತಿದ್ದು, ನಿಮ್ಮ ಹೆಸರಿನಲ್ಲಿ ಮುಂಬೈ ಕೆನರಾ ಬ್ಯಾಂಕ್ನಲ್ಲಿ ಅಕೌಂಟ್ ಇದೆ. ಅದು ನರೇಶ ಗೋಯಲ್ ಮನಿಲಾಂಡ್ರಿಂಗ್ ಕೇಸ್ನಲ್ಲಿ ಭಾಗಿಯಾಗಿದ್ದು, ನಿಮ್ಮ ಹೆಸರಿನಲ್ಲಿರುವ ಕೆನರಾ ಬ್ಯಾಂಕ್ ಖಾತೆಗೆ ₹2 ಕೋಟಿ ವರ್ಗಾವಣೆಯಾಗಿದೆ. ನಿಮ್ಮ ಮೇಲೆ ಕೇಸ್ ಆಗಿದೆ ಎಂದು ಹೆದರಿಸಿ ಹಣ ವಸೂಲಿ ಮಾಡಿದ್ದಾರೆಂದು ವೈದ್ಯರು ಗೋಳಾಡಿದರು. ಪ್ರತಿದಿನ ವಾಟ್ಸಪ್ ವಿಡಿಯೋ ಮತ್ತು ಆಡಿಯೋ ಕರೆ ಮಾಡಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಹಿತಿ ಪಡೆದು, ಆನ್ಲೈನ್ ಮೂಲಕ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೆದರಿಸಿ ಹಂತಹಂತವಾಗಿ ₹1.26 ಕೋಟಿ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡು ವಂಚಿಸಿದ್ದಾರೆಂದು ಹಣ ಮರಳಿ ಕೊಡಿಸುವಂತೆ ಕಮೀಷನರ್ ಡಾ. ಶರಣಪ್ಪ ಅವರಿಗೆ ಕೋರಿದರು.
ಸೈಬರ್ ಅಪರಾಧದಲ್ಲಿ ಹಣ ಕಳೆದುಕೊಂಡವರಿಗೆ ಕಮೀಷನರ್ ಡಾ. ಶರಣಪ್ಪ ಢಗೆ ಬ್ಯಾಂಕ್ ಖಾತೆಗೆ ಹಣ ಮರಳಿರುವ ದಾಖಲೆ ನೀಡಿ ಎಚ್ಚರದಿಂದಿರಲು ಕೋರಿದರು.
ಶರಣಪ್ಪ ಢಗೆ