2023-24 ನೇ ಸಾಲಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಕಾರ್ಯಕ್ರಮ
ಸ್ವಾತಂತ್ರ್ಯ ನಂತರದ ಮುಕ್ತ ಶಿಕ್ಷಣ, ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶ್ರದ್ಧೆ, ವಿನಯ, ವಿಶಾಲ ಮನೋಭಾವನೆ ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್ ಹೇಳಿದರು. ನಗರದ ಜೆಎಸ್ಎಸ್ ಬಾಲಕೀಯರ ಪ್ರೌಢಶಾಲೆ ಆವರಣದಲ್ಲಿ ನಡೆದ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,
ಶಿಕ್ಷಣ ಇಂದು ಜಾನ್ಞಾರ್ಜನೆ ಮತ್ತು ಜೀವನಕ್ಕೆ ಬೇಕಾದ ಮೌಲ್ಯಗಳ ಜೊತೆಗೆ ಬದುಕು ಕಟ್ಟಿಕೊಳ್ಳಲು ಅತ್ಯಂತ ಅವಶ್ಯಕವಾಗಿದೆ ಇಂತಹ ಶಿಕ್ಷಣವನ್ನು ಕಲಿಯುವಾಗ ಶ್ರದ್ಧೆ, ವಿನಯ, ವಿಶಾಲ ಮನೋಭಾವನೆ ಹಾಗೂ ಏಕಾಗ್ರತೆ ಅತಿ ಮುಖ್ಯವಾಗಿದೆ, ಇವುಗಳನ್ನು ಅಳವಡಿಸಿಕೊಂಡಾಗ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದು ಎಂದರು.ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣಲಕ್ಷಣ ಬೆಳೆಸಿಕೊಂಡು, ಸಮಾಜದ ಅಂಕು ಡೊಂಕುಗಳ ಬಗ್ಗೆ ಪ್ರಶ್ನೆ ಕೇಳುವ ಗುಣ ಬೆಳೆಸಿಕೊಳ್ಳುವುದರಿಂದ ಮುಂದೆ ಉತ್ತಮ ನಾಯಕನಾಗಬಹುದು ಎಂದರು.
ಸಮಾರೋಪ ಭಾಷಣ ಮಾಡಿದ ಕನ್ನಡ ಭಾಷಾ ರಾಜ್ಯ ಸಂಪನ್ಮೂಲ ವ್ಯಕ್ತಿ ಎಚ್. ಶಿವಣ್ಣ ಇಂದುವಾಡಿ ಮಾತನಾಡಿ, ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಬಾಣದಂತಿದ್ದರೆ ಬಿಲ್ಲು ಶಿಕ್ಷಕರು ಮತ್ತು ಪೋಷಕರು, ಅವರು ಗುರಿಯಿಟ್ಟು ಒಳ್ಳೆಯ ದಿಕ್ಕಿಗೆ ಬಾಣ ಹೂಡಿದರೆ ದೇಶಕ್ಕೆ ಉತ್ತಮ ನಾಗರೀಕರಾಗುತ್ತೀರಿ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸದಿಂದ ಶ್ರೇಷ್ಠ ಮೌಲ್ಯಗಳನ್ನು ರೂಢಿಸಿಕೊಂಡರೆ ಗುರಿ ಸಾಧನೆ ಮಾಡಬಹುದು. ಗುರಿ ಸಾಧನೆ ಹಿಂದೆ ಉತ್ತಮ ಶಿಕ್ಷಕರಿರುತ್ತಾರೆ ಎಂಬುದನ್ನು ಮರೆಯಬಾರದು, ಗುರುಗಳು ನೀಡುವ ಸಲಹೆಗಳನ್ನು ನಕಾರಾತ್ಮವಾಗಿ ಸ್ವೀಕರಿಸದೇ ಸಕಾರಾತ್ಮವಾಗಿ ಸ್ವೀಕರಿಸಬೇಕು ಎಂದರು.ಈ ನಾಡಿನಲ್ಲಿ ಅನೇಕ ಸಂತರು, ಶರಣರು, ಮಹಾನುಭಾವರು ಹುಟ್ಟಿ ನಮಗೆ ದಾರಿದೀಪವಾಗಿದ್ದಾರೆ, ಆ ಬೆಳಕಿನಲ್ಲಿ ನಾವು ಬದುಕು ರೂಢಿಸಿಕೊಳ್ಳಬೇಕು, ಇಂತಹ ಬೆಳಕನ್ನು ತೋರಿಸುವ ಜೆಎಸ್ಎಸ್ನಂತಹ ಸಂಸ್ಥೆಗಳು, ಶಿಕ್ಷಕರು ನಮಗೆ ದೊರೆತಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಇಂದು ಜಗತ್ತು ಬಹಳ ಮುಂದುವರಿದಿದೆ, ಹೃದಯ ಶ್ರೀಮಂತಿಕೆ ಕಡಿಮೆಯಾಗುತ್ತಿದೆ, ಅನೈತಿಕ ಮತ್ತು ಭ್ರಷ್ಟಾಚಾರ ಹೆಚ್ಚುತ್ತಿದ್ದು ಉತ್ತಮ ಸಮಾಜಕ್ಕೆ ವಿದ್ಯಾರ್ಥಿಗಳ ಜವಾಬ್ದಾರಿಯು ಹೆಚ್ಚಾಗುತ್ತದೆ, ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಮೌಲ್ಯಗಳ ಕಡೆ ಗಮನಹರಿಸಿ, ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ನಾಗರಿಕರಾಗಿ ಎಂದರು. ಜೆಎಸ್ಎಸ್ ಅಕ್ಷರ ದಾಸೋಹ ಸಮಿತಿಯ ಅಧ್ಯಕ್ಷ ಆರ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಸೋಮಣ್ಣೇಗೌಡ, ಜ್ಯುವೆಲರ್ಸ್ ಮತ್ತು ಪಾನ್ಬ್ರೋಕರ್ ಸಂಘದ ಅಧ್ಯಕ್ಷ ಕೆ.ಪ್ರಕಾಶ್ ಚಂದ್ ಜೈನ್, ಮುಖ್ಯೋಪಾಧ್ಯಾಯರಾದ ಎನ್. ನಾಗೇಶ್ವರಿ ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿನಿಯರು ಮತ್ತು ಉತ್ತಮ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು.