ಯಲ್ಲಾಪುರ: ಸರ್ಕಾರಿ ಸೇವೆಗೂ ಖಾಸಗಿ ಸೇವೆಗೂ ಸಾಕಷ್ಟು ವ್ಯತ್ಯಾಸವಿದೆ. ಸರ್ಕಾರಿ ಸೇವೆಯಲ್ಲಿ ಗುಣಮಟ್ಟ ಮತ್ತು ನಿಷ್ಠೆ, ಶ್ರದ್ಧೆಯ ಕೊರತೆ ಕಾಣುತ್ತೇವೆ. ಆದರೆ, ಖಾಸಗಿಯಲ್ಲಿ ಪ್ರಾಮಾಣಿಕತನ, ನಿಷ್ಠೆ, ಬದ್ಧತೆ, ತತ್ಪರತೆ ಇರಲೇಬೇಕು. ಅದರಿಂದಲೇ ಖಾಸಗಿ ಕಂಪನಿ ಬೆಳೆಯಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಅ. ೧೫ರಂದು ಪ್ರಥಮದರ್ಜೆ ಕಾಲೇಜು, ಕ್ರಿಯೇಟಿವ್ ಕಂಪ್ಯೂಟರ್ ಇನ್ಸಿಟ್ಯೂಟ್ನ ಸಹಯೋಗದಲ್ಲಿ ಪಟ್ಟಣದ ಸ.ಪ್ರ.ದ. ಕಾಲೇಜಿನ ಸಭಾಭವನದಲ್ಲಿ ಬೋಸ್ಚ್ ಬ್ರಿಡ್ಜ್ ೨೦೨೪ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.ದೇಶವು ಕಂಪನಿಯ ಮೂಲಕವೇ ಅಭಿವೃದ್ಧಿ ಮಾಡಿಕೊಳ್ಳಬೇಕಿದೆ. ಹಾಗಾಗಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಿದೆ. ಪ್ರತಿಭೆಯ ಆಧಾರದ ಮೇಲೆ ಯಶಸ್ಸನ್ನು ಸಾಧಿಸಬಹುದು. ಅದರ ಆಧಾರದಲ್ಲೇ ಕಂಪನಿ ತನ್ನ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಯಾವುದೇ ವ್ಯಕ್ತಿ ತಾನು ಕಾರ್ಯನಿರ್ವಹಿಸುವ, ಅನ್ನ ನೀಡುವ ಸಂಸ್ಥೆಗೆ ಋಣ ತೀರಿಸುವ ಭಾವನೆ ಬೆಳೆಸಿಕೊಳ್ಳಬೇಕು. ಎಂದಿಗೂ ಅನ್ನ ನೀಡಿದ ಸಂಸ್ಥೆಗೆ ದ್ರೋಹ ಮಾಡುವಂತಿಲ್ಲ. ಆ ನಿಟ್ಟಿನಲ್ಲಿ ಇಂತಹ ಉದ್ಯೋಗ ಮೇಳದ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.ಕ್ರಿಯೇಟಿವ್ ಕಂಪ್ಯೂಟರ್ ಮಾಲೀಕ ಶ್ರೀನಿವಾಸ ಮುರ್ಡೇಶ್ವರ ಅಧ್ಯಕ್ಷತೆ ವಹಿಸಿ, ಮಾತನಾಡಿ, ಯುವಜನಾಂಗಕ್ಕೆ ಉದ್ಯೋಗ ಕಲ್ಪಿಸುವ ನೆಲೆಯಲ್ಲಿ ಮೇಳವನ್ನು ಆಯೋಜಿಸಿದ್ದೇವೆ. ಅದರ ಪ್ರಯೋಜನವನ್ನು ಯುವಕರು ಪಡೆದುಕೊಳ್ಳಬೇಕು ಎಂದರು. ಪ್ರಾಚಾರ್ಯ ಆರ್.ಡಿ. ಜನಾರ್ದನ ಮಾತನಾಡಿ, ಉದ್ಯೋಗ ಮೇಳದ ಯಶಸ್ಸಿಗೆ ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ಪ್ರತಿಭಾವಂತರಿಗೆ ಉದ್ಯೋಗ ನೀಡಲು ಬಾಶ್ ಕಂಪನಿ ವೇದಿಕೆ ಕಲ್ಪಸಿದೆ. ಸುಮಾರು ೩೦ ಕಂಪನಿಗಳು ಮೇಳದಲ್ಲಿ ಉದ್ಯೋಗ ಕಲ್ಪಿಸಿಕೊಡಲಿವೆ. ನಮ್ಮ ಕಾಲೇಜಿನ ಇಡೀ ತಂಡವೇ ಈ ಮೇಳದ ಯಶಸ್ಸಿಗೆ ಕಾರಣರಾಗಿದ್ದಾರೆ. ಇದು ೨ನೇ ವರ್ಷದ ಉದ್ಯೋಗ ಮೇಳ. ಗೋವಾ ಸೇರಿದಂತೆ ಹುಬ್ಬಳ್ಳಿ, ಚಿತ್ರದುರ್ಗ, ಹಾವೇರಿ ವಿವಿಧ ಜಿಲ್ಲೆಗಳಿಂದ ಮತ್ತು ಉತ್ತರಕನ್ನಡ ಜಿಲ್ಲೆಯಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದರು. ಬಾಶ್ ಇಂಡಿಯಾ ಫೌಂಡೇಶನ್ನ ಪ್ರಾದೇಶಿಕ ಮುಖ್ಯಸ್ಥ ಕಲೀಂ ಎಸ್. ಮಾತನಾಡಿ, ಎರಡು ವರ್ಷದ ಹಿಂದೆ ಶಾಸಕ ಹೆಬ್ಬಾರ ಅವರ ಆಶಯದಂತೆ ಉದ್ಯೋಗ ಮೇಳ ಮೊದಲ ಹೆಜ್ಜೆ. ಅಂತೆಯೇ ೨ನೇ ಮೇಳವನ್ನು ಆಯೋಜಿಸುತ್ತಿದ್ದೇವೆ. ಇದಕ್ಕೆ ಆಯ್ಕೆಯಾದ ಯುವಕರು ನಿರಂತರ ಶ್ರಮ, ನಿಷ್ಠೆಯಿಂದ ಕೆಲಸ ಮಾಡಿ, ತಾವು ಸೇರಿದ ಕಂಪನಿಯ ಶ್ರೇಯಸ್ಸಿನ ಜತೆಗೆ ತಮ್ಮ ಬೆಳವಣಿಗೆಯನ್ನು ಮಾಡಿಕೊಳ್ಳಬೇಕು ಎಂದರು. ಪ್ರಾಧ್ಯಾಪಕರಾದ ಸುರೇಖಾ ತಡವಲ, ಡಾ. ರುಬೀನಾ, ಸಾಮಾಜಿಕ ಕಾರ್ಯಕರ್ತರಾದ ಎನ್.ಕೆ. ಭಟ್ಟ ಮೆಣಸುಪಾಲ, ವಿಜಯ ಮಿರಾಶಿ, ಬಾಶ್ ಕಂಪನಿಯ ಸಿಎಸ್ಆರ್ ಮೇಲ್ವಿಚಾರಕ ಸುಧೀರ ಪಿ.ಡಿ., ಆಶಾ ಡಿಸೋಜಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವೇದಾ ಭಟ್ಟ ಪ್ರಾರ್ಥಿಸಿದರು. ಪ್ರಾಧ್ಯಾಪಕ ಶರತಕುಮಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದಿತಾ ಭಾಗ್ವತ್ ನಿರ್ವಹಿಸಿದರು. ಮೇಘಾ ದೇವಳಿ ವಂದಿಸಿದರು.