ಕನ್ನಡಪ್ರಭ ವಾರ್ತೆ ಬೆಂಗಳೂರು ಚಲನಚಿತ್ರ ನಿರ್ದೇಶಕನನ್ನು ಅಪಹರಿಸಿ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ಹಣ ದೋಚಿದ ಪ್ರಕರಣದ ಸಂಬಂಧ ನಟಿ ಸೇರಿ 11 ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಫೆ.9 ರಂದು ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಅನಿಶ್ ಅವರನ್ನು ಅಪಹರಿಸಿ ಬ್ಯಾಡರಹಳ್ಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟು ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್ನಿಂದ ತೀವ್ರವಾಗಿ ಹಲ್ಲೆ ಮಾಡಿ ಅವರು ಧರಿಸಿದ್ದ 20 ಗ್ರಾಂ ಚಿನ್ನದ ಒಡವೆ ಮತ್ತು 30 ಸಾವಿರ ನಗದು, 5 ಸಾವಿರ ಅಕೌಂಟ್ನಿಂದ ವರ್ಗಾಯಿಸಿಕೊಂಡಿದ್ದರು. ನಂತರ ಆತನನ್ನು ಕಾರಿನಲ್ಲೇ ತುಮಕೂರಿನ ಮಂದಾರಗಿರಿ ಬೆಟ್ಟದ ಬಳಿ ಕರೆದುಕೊಂಡು ಹೋಗಿ ಅಲ್ಲೂ ಹಲ್ಲೆ ಮಾಡಿ ಬಿಟ್ಟು ಕಳುಹಿಸಿದ್ದರು. ಬಳಿಕ ಅನಿಶ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈಗೆ ಸ್ಥಳಾಂತರಗೊಂಡಿದ್ದ ನಿರ್ದೇಶಕ:
ಅಪಹರಣಕ್ಕೊಳಗಾಗಿದ್ದ ಅನಿಶ್ ಯುವ ನಿರ್ದೇಶಕನಾಗಿದ್ದು, ಈ ಹಿಂದೆ ‘ಭರವಸೆಯೇ ಜೀವನ’ ಸೇರಿ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಇತ್ತೀಚೆಗೆ ‘ಜೀವನದ ಭಾಷೆ’ ಎಂಬ ಹೊಸ ಚಲನಚಿತ್ರ ನಿರ್ದೇಶಿಸಲು ಮುಂದಾಗಿದ್ದರು, ಕೆಲ ಕಾರಣಗಳಿಂದಾಗಿ ಆ ಸಿನಿಮಾ ನಿಂತ ಬಳಿಕ ಅವರು ಮುಂಬೈಗೆ ಸ್ಥಳಾಂತರಗೊಂಡಿದ್ದರು. ನಟಿ ಐಶ್ವರ್ಯ ಭೀಮಾ ಚಿತ್ರದಲ್ಲಿ ನಟಿಸಿದ್ದರು ಎಂದು ತಿಳಿದು ಬಂದಿದೆ.ಕಾರು ಖರೀದಿ ನೆಪದಲ್ಲಿ ಕೃತ್ಯ
ನಿರ್ದೇಶಕ ಅನಿಶ್ ಅವರೊಂದಿಗೆ ಹಣಕಾಸು ವಿಚಾರವಾಗಿ ಆರೋಪಿಗಳಾದ ಐಶ್ವರ್ಯ, ಆಶೀರ್ವಾದ್ ಗಲಾಟೆ ಮಾಡಿಕೊಂಡಿದ್ದಾರೆ. ಹೀಗಾಗಿ ಉಳಿದ ಆರೋಪಿಗಳ ಜತೆ ಸೇರಿ ನಿರ್ದೇಶಕನನ್ನು ಅಪಹರಿಸಿ ಹಲ್ಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಕಾರು ಮಾರಾಟ ಮಾಡಿಕೊಡುವುದಾಗಿ ನಟಿ ಐಶ್ವರ್ಯ ಮುಂಬೈನಿಂದ ಅನಿಶ್ನನ್ನು ಕರೆಸಿಕೊಂಡು ಅಪಹರಣ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.