ಹಾವೇರಿ: ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡದಿರುವುದಕ್ಕೆ ಜಿಲ್ಲೆಯ ಜನತೆಗೆ, ಎಲ್ಲ ಪಕ್ಷದ ನಾಯಕರಿಗೆ ನಿರಾಸೆಯಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಆಗ ಸಕಾರಾತ್ಮವಾಗಿ ಸ್ಪಂದನೆ ಮಾಡಿದ್ದ ಅವರು, ಬಜೆಟ್ನಲ್ಲಿ ಘೋಷಣೆ ಮಾಡದ್ದಕ್ಕೆ ನಿರಾಸೆಯಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿಗೆ ಮೆಡಿಕಲ್ ಕಾಲೇಜು, ಯುನಿವರ್ಸಿಟಿ, ಎಂಜಿನಿಯರಿಂಗ್ ಕಾಲೇಜು, ಲಾ ಕಾಲೇಜು ಮಾಡಿದ್ದು ಬಿಜೆಪಿ, ನಮ್ಮ ಜಿಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಏನಾದರೂ ಅನಾಹುತ ಆದರೆ ಬಹಳ ಜನರು ಹುಬ್ಬಳ್ಳಿ ಅಥವಾ ದಾವಣಗೆರೆಗೆ ಹೋಗಬೇಕು. ಆಗ ಬಹಳಷ್ಟು ಜನ ಜೀವ ಕಳೆದುಕೊಳ್ಳುತ್ತಾರೆ. ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಗಬೇಕೆಂದು ಹೇಳಿದ್ದೇವು. ಅವರದು ಕೇವಲ ಮಾತಿನ ಸಹಾನುಭೂತಿಯಾಗಿದೆ. ಈಗಲೂ ಅವರು ಮಾಡಿರುವ ಅನ್ಯಾಯ ಸರಿಪಡಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮತಿ ಕೊಟ್ಟು ಪೂರಕ ಬಜೆಟ್ನಲ್ಲಾದರೂ ಹಣ ಒದಗಿಸಿದರೆ ಕೆಲಸ ಆರಂಭವಾಗುತ್ತದೆ. ಈಗಲೂ ಕೂಡ ಸಿಎಂಗೆ ಆಗ್ರಹಿಸುತ್ತೇನೆ. ಈಗಾಗಲೇ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಒತ್ತಡ ಮಾಡಿದ್ದಾರೆ. ಆ ಒತ್ತಡಕ್ಕೆ ಸಿಎಂ ಮನ್ನಣೆ ಕೊಡಬೇಕು ಎಂದು ಆಗ್ರಹಿಸಿದರು.