ಪಪಂ ಸಾಮಾನ್ಯ ಸಭೆ
ಕನ್ನಡಪ್ರಭ ವಾರ್ತೆ ಕನಕಗಿರಿ
ಫಾರಂ-3, ಮುಟೇಷನ್ ಹಾಗೂ ಕಟ್ಟಡ ಪರವಾನಗಿಯನ್ನು ದಂಧೆ ಮಾಡಿಕೊಂಡಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಅಂತಹ ಅಧಿಕಾರಿ, ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಾರಂ-3 ಮತ್ತು ಮುಟೇಷನ್ ಭಾರಿ ಗೋಲ್ ಮಾಲ್ ನಡೆದಿದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ.
ಅಲ್ಲದೇ ಕಟ್ಟಡ ಪರವಾನಗಿಯನ್ನೂ ಕೂಡಾ ಸರಳೀಕರಣ ಮಾಡಿಕೊಡುವಂತಾಗಬೇಕು.
ಪಟ್ಟಣದ ಸಿಸಿಟಿವಿ ಅಳವಡಿಸಲು ₹90 ಲಕ್ಷ ಅನುದಾನ ಮೀಸಲಿಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮತ್ತು ದುಷ್ಟಶಕ್ತಿಗಳನ್ನು ಮಟ್ಟ ಹಾಕಲು ಪ್ರಮುಖ ಬೀದಿ, ರಸ್ತೆ ಹಾಗೂ ವೃತ್ತಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗುವುದು.
ಸದ್ಯ ಇರುವ ಸಿಸಿಟಿವಿಗಳನ್ನು ತಕ್ಷಣವೇ ದುರಸ್ತಿ ಮಾಡಿಸಿ ಕೊಡಬೇಕು ಎಂದು ಪಪಂ ಮುಖ್ಯಾಧಿಕಾರಿ ದತ್ತಾತ್ರೆಯ ಹೆಗಡೆ ಅವರಿಗೆ ಸೂಚಿಸಿದರು. ಪ.ಪಂ ಅಧ್ಯಕ್ಷ ಹುಸೇನಬೀ ಚಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಶರಣೇಗೌಡ, ಅನಿಲ ಬಿಜ್ಜಳ, ಸಂಗಪ್ಪ ಸಜ್ಜನ, ರಾಜಸಾಬ ನಂದಾಪೂರ, ನಂದಿನಿ ರಾಮಾಂಜನೇಯರೆಡ್ಡಿ, ನೂರಸಾಬ ಗಡ್ಡಿಗಾಲ, ಹನುಮಂತ ಬಸರಿಗಿಡ ಇತರರಿದ್ದರು.ಪುಟ್ಪಾತ್ ತೆರವಿಗೆ ಸೂಚನೆ:ಪಟ್ಟಣದಿಂದ ತಾವರಗೇರಾ ಹಾಗೂ ನವಲಿ ರಸ್ತೆಯ ಪುಟ್ಪಾತ್ ತೆರವಿಗೆ ಸಚಿವ ತಂಗಡಗಿ ಸೂಚಿಸಿದರು.