ಕರಾವಳಿಯ ಮತೀಯ ರಾಜಕಾರಣದ ಕುರಿತು ಬಿ.ಕೆ.ಹರಿಪ್ರಸಾದ್‌ ಜೊತೆ ಚರ್ಚೆ

KannadaprabhaNewsNetwork | Published : Jun 7, 2025 12:22 AM
ಮುಖ್ಯಮಂತ್ರಿಗಳ ಸೂಚನೆಯಂತೆ ಮಂಗಳೂರಿಗೆ ಆಗಮಿಸಿರುವ ಹಿರಿಯ ಕಾಂಗ್ರೆಸ್‌ ನಾಯಕ, ವಿಧಾನ ಪರಿಷತ್ ಸದಸ್ಯ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರನ್ನು ದ.ಕ‌. ಉಡುಪಿ ಜಿಲ್ಲೆಯ ಪ್ರಮುಖ ಚಿಂತಕರು, ಬರಹಗಾರರು, ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರು, ವಿವಿಧ ಚಳವಳಿಗಳ ಪ್ರಮುಖರು ಶುಕ್ರವಾರ ಭೇಟಿಯಾದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ಜಿಲ್ಲೆಗಳಲ್ಲಿ ಭುಗಿಲೆದ್ದಿರುವ ಮತೀಯ ಹಿಂಸಾಚಾರ, ದ್ವೇಷ ಭಾಷಣ, ಪ್ರತೀಕಾರದ ಹತ್ಯೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆಯಂತೆ ಮಂಗಳೂರಿಗೆ ಆಗಮಿಸಿರುವ ಹಿರಿಯ ಕಾಂಗ್ರೆಸ್‌ ನಾಯಕ, ವಿಧಾನ ಪರಿಷತ್ ಸದಸ್ಯ ಸದಸ್ಯ ಬಿ. ಕೆ. ಹರಿಪ್ರಸಾದ್ ಅವರನ್ನು ದ.ಕ‌. ಉಡುಪಿ ಜಿಲ್ಲೆಯ ಪ್ರಮುಖ ಚಿಂತಕರು, ಬರಹಗಾರರು, ರಂಗಕರ್ಮಿಗಳು, ಸಾಮಾಜಿಕ ಕಾರ್ಯಕರ್ತರು, ವಿವಿಧ ಚಳವಳಿಗಳ ಪ್ರಮುಖರು ಶುಕ್ರವಾರ ಭೇಟಿಯಾದರು.

ಹೆಚ್ಚುತ್ತಿರುವ ಕೋಮು ಸಂಘರ್ಷ, ಆಳಗೊಳ್ಳುತ್ತಿರುವ ಮತೀಯ ಧ್ರುವೀಕರಣದ ಕುರಿತು ಕಳವಳ ವ್ಯಕ್ತ ಪಡಿಸಿದರು. ಶಾಂತಿ, ಸಾಮರಸ್ಯ ಮರಳಿ ನೆಲೆಗೊಳಿಸಲು ಸರಕಾರ ಕೈಗೊಳ್ಳಬೇಕಾದ ಕೆಲಸಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು, ಸಲಹೆಗಳನ್ನು ನೀಡಿದರು. ಸುಮಾರು ಎರಡು ತಾಸುಗಳ ಕಾಲ ಈ ಸಭೆ ನಡೆಯಿತು. ಮೂರು ದಶಕಗಳಿಗಿಂತೂ ದೀರ್ಘ ಅವಧಿಯಲ್ಲಿ ವ್ಯವಸ್ಥಿತವಾಗಿ ಕೋಮುವಾದಿ ಸಿದ್ದಾಂತವನ್ನು ಕರಾವಳಿ ಜಿಲ್ಲೆಯಲ್ಲಿ ಹರಡಲಾಗಿದೆ. ಸರಿಯಾದ ಪ್ರತಿರೋಧ ಒಡ್ಡದಿರುವುದರಿಂದ ಕೋಮುವಾದ ಯಾರ ಅಂಕೆಗೂ ಸಿಗದಷ್ಟು ರಾಕ್ಷಸೀ ರೂಪ ತಾಳಿದೆ. ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಕುರಿತು ಸ್ಪಷ್ಟ ಧೋರಣೆ ಹೊಂದದೇ ಇರುವುದರಿಂದ ಬಿಜೆಪಿ ಸರ್ಕಾರ ಇಲ್ಲದಿದ್ದರೂ ಸಂಘ ಪರಿವಾರದ ಶಕ್ತಿಗಳ ಚಟುವಟಿಕೆ ತಡೆ ಇಲ್ಲದೆ ಮುಂದುವರಿದಿದೆ. ದ್ವೇಷ ಭಾಷಣಗಳು ತಡೆ ರಹಿತವಾಗಿ ನಡೆಯುತ್ತಿದೆ. ಇದು ಭೀಕರ ಹತ್ಯೆಗಳಿಗೂ ಸಾಕ್ಷಿ ಆಗುತ್ತಿರುವುದು ಭೀತಿಗೆ ಕಾರಣವಾಗಿದೆ. ರಾಜ್ಯದ ಸಿದ್ದರಾಮಯ್ಯ ಸರ್ಕಾರ ಕೋಮು ಶಕ್ತಿಗಳ ನಿಗ್ರಹಕ್ಕೆ ಈಗಲಾದರು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚಿಂತಕರು ಅಭಿಪ್ರಾಯ ಪಟ್ಟರು.

ಚಿಂತಕರ ನಿಯೋಗದ ಅಭಿಪ್ರಾಯಗಳನ್ನು ಆಲಿಸಿದ ಬಿ. ಕೆ. ಹರಿಪ್ರಸಾದ್, ಈ ಕುರಿತು ಜಾತ್ಯತೀತ ಶಕ್ತಿಗಳ ಜೊತೆಗಿರುವುದಾಗಿ ಭರವಸೆ ನೀಡಿದರು, ಮುಖ್ಯಮಂತ್ರಿಗಳ ಜೊತೆಗೆ ಕರಾವಳಿಯ ಚಿಂತಕರು, ಬರಹಗಾರರು, ಸಂಘಟನೆಗಳ ಪ್ರಮುಖರ ಸಭೆ ಏರ್ಪಡಿಸುವುದಾಗಿ ತಿಳಿಸಿದರು. ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಸ್ತಾವಿಕ ಮಾತನಾಡಿದರು.