ಡಿಸೆಂಬರೊಳಗೆ ಬಾಕಿ ಇ-ಫೌತಿ ಅರ್ಜಿ ವಿಲೇವಾರಿ ಕಡ್ಡಾಯ

KannadaprabhaNewsNetwork |  
Published : Jun 16, 2026, 01:15 AM IST
 | Kannada Prabha

ಸಾರಾಂಶ

ಡಿಸೆಂಬರ್-2026ರ ಅಂತ್ಯದೊಳಗೆ ಎಲ್ಲಾ ಬಾಕಿ ಇ-ಫೌತಿ ಅರ್ಜಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದುವ ನಿಟ್ಟಿನಲ್ಲಿ ಪ್ರತಿದಿನ ತಹಸೀಲ್ದಾರ್, ಆರ್‌ಆರ್‌ಟಿ ಶಿರಸ್ತೇದಾರರು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಹೋಬಳಿ ರಾಜಸ್ವ ನಿರೀಕ್ಷಕರ ಸಭೆಗಳನ್ನು ನಡೆಸಿ ಪ್ರಗತಿ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಡಿಸೆಂಬರ್-2026ರ ಅಂತ್ಯದೊಳಗೆ ಎಲ್ಲಾ ಬಾಕಿ ಇ-ಫೌತಿ ಅರ್ಜಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದುವ ನಿಟ್ಟಿನಲ್ಲಿ ಪ್ರತಿದಿನ ತಹಸೀಲ್ದಾರ್, ಆರ್‌ಆರ್‌ಟಿ ಶಿರಸ್ತೇದಾರರು, ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಹೋಬಳಿ ರಾಜಸ್ವ ನಿರೀಕ್ಷಕರ ಸಭೆಗಳನ್ನು ನಡೆಸಿ ಪ್ರಗತಿ ಪರಿಶೀಲನೆ ಮಾಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ, ತಾಲೂಕು ಹಾಗೂ ಗ್ರಾಮಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕಂದಾಯ ಇಲಾಖೆಯ ವಿವಿಧ ಸೇವೆಗಳ ಪ್ರಗತಿ ಪರಿಶೀಲಿಸಿದರು. ಕಂದಾಯ ಅದಾಲತ್‌ಗಳನ್ನು ಪರಿಣಾಮಕಾರಿಯಾಗಿ ನಡೆಸುವ ಉದ್ದೇಶದಿಂದ ತಹಸೀಲ್ದಾರ್‌ಗಳಿಗೆ ಈಗಾಗಲೇ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿದೆ. ಸರ್ಕಾರವು ಜಾರಿಗೆ ತಂದಿರುವ ರೆವಿನ್ಯೂ ಮಾಡ್ಯೂಲ್ ತಂತ್ರಾಂಶದ ಮೂಲಕ ಪಹಣಿ ತಿದ್ದುಪಡಿ ಕಾರ್ಯಗಳನ್ನು ವೇಗಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುಮಕೂರು ಜಿಲ್ಲೆಯಲ್ಲಿ ವಿಷಯ ನಿರ್ವಾಹಕರ ಹಂತದಲ್ಲಿ ಒಟ್ಟು 14,435 ಅರ್ಜಿಗಳು ಬಾಕಿಯಿದ್ದು, ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಇರುವುದರಿಂದ, ಸದರಿ ಅರ್ಜಿಗಳನ್ನು ತಕ್ಷಣ ಗ್ರಾಮ ಆಡಳಿತಾಧಿಕಾರಿಗಳ ಲಾಗಿನ್‌ಗೆ ಕಳಿಸಿ, ಆರ್‌ಆರ್‌ಟಿ ಶಿರಸ್ತೇದಾರರು ಹಾಗೂ ಎಡಿಎಲ್‌ಆರ್ ಅಧಿಕಾರಿಗಳ ಸಮನ್ವಯದೊಂದಿಗೆ ಆದ್ಯತೆ ಮೇರೆಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಇ-ಪೌತಿ ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲನೆ ವೇಳೆ, ಜಿಲ್ಲೆಯಲ್ಲಿ ಒಟ್ಟು 3,36,847 ಅರ್ಜಿಗಳು ಬಾಕಿಯಿದ್ದು, ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಪ್ರತಿಯೊಬ್ಬ ಗ್ರಾಮ ಆಡಳಿತಾಧಿಕಾರಿಯು ಪ್ರತಿದಿನ ಕನಿಷ್ಠ ಎರಡು ಪೌತಿ ಖಾತೆಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದ ಅವರು, ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದರು. ಈ ಕಾರ್ಯಕ್ರಮಗಳನ್ನು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ನಿರ್ದೇಶನದಂತೆ ಕೈಗೊಳ್ಳುತ್ತಿರುವುದರಿಂದ ಯಾವುದೇ ಲೋಪ ಮತ್ತು ಉದಾಸಿನ ಮನೋಭಾವ ತಾಳದೆ ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ರಮ ಸಂಬಂಧಿಸಿದಂತೆ ತಾಲೂಕು ಹಂತದಲ್ಲಿ ಎಲ್ಲಾ ಅಧಿಕಾರಿಗಳು ವಹಿಸುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದ ಅವರು, ನೋಂದಾಯಿತ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಏಜೆಂಟರ್‌ಗಳನ್ನು ಕೂಡಲೇ ನೇಮಿಸಬೇಕು. ಈ ಸಂಬಂಧ ಆಯಾ ತಹಸೀಲ್ದಾರ್ ಹಂತದಲ್ಲಿ ರಾಜಕೀಯ ಪಕ್ಷಗಳಿಗೆ ತಿಳಿಸಿ ಏಜೆಂಟರ್ ನೇಮಕ ಮಾಡುವಂತೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯ ಸಭೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಎಲ್ಲಾ ತಾಲ್ಲೂಕು ಹಂತದಲ್ಲಿ ಕಲುಷಿತ ನೀರಿನ ಪರೀಕ್ಷೆ ಕಡ್ಡಾಯವಾಗಿ ನಡೆಸಬೇಕು ಹಾಗೂ ಈ ಪ್ರಕ್ರಿಯೆಯನ್ನು ಮುಂದುವರೆಸುವಂತೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

25 ವರ್ಷಗಳ ಚನ್ನಗಿರಿ ಅಜ್ಞಾತವಾಸ ಅಂತ್ಯ ಸನ್ನಿಹಿತ
ಹಳ್ಳ ಮುಚ್ಚಿದ್ದ ಹೋರಾಟದಲ್ಲಿ ನನ್ನ ಗೆಲುವು: ಬಿ.ಪಿ.ಹರೀಶ