ರಾಮನಗರ: ಪೊಲೀಸರು ಮತ್ತು ಜನರ ನಡುವಿನ ಅಂತರ ಕಡಿಮೆ ಮಾಡಿ ಬಾಂಧವ್ಯ ಗಟ್ಟಿಗೊಳಿಸಬೇಕು. ಆ ಮೂಲಕ ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ರೂಪಿಸುವುದು ತಮ್ಮ ಉದ್ದೇಶ. ಯಾರೇ ಆಗಲಿ ಪೊಲೀಸ್ ಇಲಾಖೆಗೆ ಅಗೌರವ ತರುವ ಕೆಲಸ ಮಾಡಿದರೆ ಸಹಿಸುವುದಿಲ್ಲ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಎಚ್ಚರಿಕೆ ನೀಡಿದರು.
ಪೊಲೀಸ್ ಠಾಣೆಗೆ ಜನರು ನೋವಿನಿಂದ ಬರುತ್ತಾರೆ. ಆ ನೊಂದ ಜನರ ಕಣ್ಣೀರು ಒರೆಸುವ ಕೆಲಸ ಮಾಡಬೇಕೇ ಹೊರತು ಮತ್ತಷ್ಟು ನೋವು ಕೊಡುವ ಕೆಲಸ ಮಾಡಬಾರದು. ಅವರ ದೂರನ್ನು ತಾಳ್ಮೆಯಿಂದ ಆಲಿಸಿ, ಕಾನೂನಾತ್ಮಕವಾಗಿ ನಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಸಹಾಯ ಮಾಡಬೇಕು. ವಿನಾಃ ಕಾರಣ ಜನರಿಗೆ ನೋವುಂಟು ಮಾಡುವ, ಕಾಯಿಸುವ ಅಥವಾ ಮಾನಸಿಕ ಕಿರುಕುಳ ನೀಡಬಾರದೆಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ :ನಾನು ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ, ಬೆಳಗಾವಿ ನಗರ ಹಾಗೂ ಗದಗದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. 7 ವರ್ಷಗಳ ಸೇವೆಯಲ್ಲಿ ಪೊಲೀಸರು ಮತ್ತು ಜನರ ನಡುವಿನ ಅಂತರ ಕಡಿಮೆ ಮಾಡಿ ಬಾಂಧವ್ಯ ಗಟ್ಟಿಗೊಳಿಸಿ ಪೊಲೀಸ್ ಇಲಾಖೆಯನ್ನು ಜನಸ್ನೇಹಿಯನ್ನಾಗಿ ರೂಪಿಸಿದ್ದೇನೆ. ನಾನು ಕೆಲಸ ಮಾಡಿರುವ ಎಲ್ಲಾ ಜಿಲ್ಲೆಗಳಲ್ಲಿ ಜನಸಾಮಾನ್ಯರ ಹೃದಯ ಗೆದ್ದಿದ್ದೀನಿ. ಅದೇ ರೀತಿ ಈ ಜಿಲ್ಲೆಯಲ್ಲಿಯೂ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತೇನೆ. ಒಳ್ಳೆಯವರಿಗೆ ಒಳ್ಳೆಯ ರೀತಿ ಕೆಲಸ ಮಾಡಿ, ಸಮಾಜದ ಶಾಂತಿ ಸುವ್ಯವಸ್ಥೆ ಕದಡುವುದನ್ನೇ ಪ್ರವೃತ್ತಿ ಮಾಡಿಕೊಂಡಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕಾನೂನು ಮತ್ತು ನೈತಿಕವಾಗಿ ಎಲ್ಲ ರೀತಿಯಲ್ಲೂ ನಿರ್ವಹಿಸಿ ಅದಕ್ಕೆ ಕಾನೂನು ಪ್ರಕಾರ ಪರಿಹಾರ ಕಂಡುಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹಾಜರಿದ್ದರು.
ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ರೋಹನ್ ಜಗದೀಶ್ ಸೋಮವಾರ ಅಧಿಕಾರ ವಹಿಸಿಕೊಂಡರು.