ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಸಮವಸ್ತ್ರ ವಿತರಣೆ

KannadaprabhaNewsNetwork | Published : May 27, 2025 11:54 PM
ಈ ಬಾರಿ ೩೧ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡಿದ್ದೇವೆ. ನಮ್ಮ ಸಮಾಜವು ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಇನ್ನು ಹೆಚ್ಚು ಸೇವೆ ಮಾಡುವ ಗುರಿ ಹೊಂದಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸುವರ್ಣ ಕರ್ನಾಟಕ ಕೇರಳ ಸಮಾಜಂ ಮಂಡ್ಯ ವಲಯದ ವತಿಯಿಂದ ೧ ರಿಂದ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ಹಾಗೂ ಸಮವಸ್ತ್ರಗಳ ವಿತರಣಾ ಕಾರ್ಯಕ್ರಮ ನಗರದ ಸ್ವರ್ಣಸಂದ್ರದಲ್ಲಿರುವ ಸೆಂಟ್ ಮೇರಿಸ್ ಇ.ಎಂ.ಶಾಲಾ ಆವರಣದಲ್ಲಿ ಜರುಗಿತು.

ನೆರೆದಿದ್ದ ಗಣ್ಯರು ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್, ಸಮವಸ್ತ್ರ, ಶೂ, ಬ್ಯಾಗ್ ಹಾಗೂ ಇನ್ನಿತರ ಕಲಿಕಾ ಸಾಮಗ್ರಿಗಳನ್ನೂ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುವರ್ಣ ಕರ್ನಾಟಕ ಕೇರಳ ಸಮಾಜಂ ಮಂಡ್ಯ ವಲಯದ ಕಾರ್ಯದರ್ಶಿ ಮೇರಿ ಜೆನೆಟ್ ಮಾತನಾಡಿ, ಈ ಬಾರಿ ೩೧ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ನೀಡಿದ್ದೇವೆ. ನಮ್ಮ ಸಮಾಜವು ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಇನ್ನು ಹೆಚ್ಚು ಸೇವೆ ಮಾಡುವ ಗುರಿ ಹೊಂದಿದ್ದೇವೆ ಎಂದರು.

ಮಂಡ್ಯ ವಲಯದ ಉಪಾಧ್ಯಕ್ಷ ಟಿ.ಜೆ.ಆಂಟೋನಿ, ಖಜಾಂಜಿ ಐ.ಪಿ.ರಾಮದಾಸ್, ಬೋರ್ಡ್‌ಮೆಂಬರ್ ಎ.ವಿಲಿಯಂ, ಸಂಚಾಲಕಿ ಪುಷ್ಪಜಾ, ಸದಸ್ಯರಾದ ಟಿ.ಎಂ.ಸಿಬಿಚ್ಚನ್, ವಿ.ಕೆ.ಮನಿಕಂದನ್, ಶಿವು ಹಾಜರಿದ್ದರು.

ಗವಿಮಠದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ

ಹಲಗೂರು: ಹಲಸಹಳ್ಳಿ ಗವಿಮಠದಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.

ಮಠದ ಪೀಠಾಧ್ಯಕ್ಷ ಷಡಕ್ಷರ ಸ್ವಾಮೀಜಿ ಬಸವೇಶ್ವರ ಮೂರ್ತಿಯನ್ನು ಶುಚಿಗೊಳಿಸಿ ಅಭಿಷೇಕ, ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನಂತರ ಬಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.

ನಂತರ ಸ್ವಾಮೀಜಿ ಮಾತನಾಡಿ, ಈ ಸ್ಥಳ ಪುಣ್ಯಕ್ಷೇತ್ರವಾಗಿದೆ. ರಾಜ್ಯದಲ್ಲೇ ಅಪಾರ ಭಕ್ತಾರನ್ನು ಒಳಗೊಂಡಿದೆ. ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಸಿ ಬಂದ ಭಕ್ತರಿಗೆ ಪ್ರಸಾದ ನೀಡುತ್ತೇವೆ. ವಿವಿಧ ಜಿಲ್ಲೆಗಳಿಂದ ಅಮಾವಾಸ್ಯೆ ದಿನ ಸುಮಾರು 90ಕ್ಕೂ ಹೆಚ್ಚು ಭಕ್ತರು ಬರುತ್ತಾರೆ ಎಂದರು.

ನಾನು ಪಟ್ಟಾಧಿಕಾರ ವಹಿಸಿಕೊಂಡ ನಂತರ ಭಕ್ತರ ಸಹಕಾರದಿಂದ ಮಠವನ್ನು ಅಭಿವೃದ್ಧಿ ಮಾಡಿದ್ದೇನೆ. ಈ ಸ್ಥಳದಲ್ಲಿ ಮಹಾಕವಿ ಷಡಕ್ಷರ ದೇವ ಗ್ರಂಥಗಳನ್ನು ಬರೆದ ಪುಣ್ಯಸ್ಥಳವಾಗಿದ್ದು, ಈ ಸ್ಥಳದಲ್ಲಿ ಬಡವರ ಅನುಕೂಲಕ್ಕಾಗಿ ವಿವಾಹವನ್ನು ನಡೆಸುವುದಕ್ಕೆ ಅನುಕೂಲಕರವಾಗಿದೆ ಎಂದರು.

ಪಟ್ಟಣ ಪ್ರದೇಶಗಳಲ್ಲಿ ಹೋಗಿ ಕಲ್ಯಾಣ ಮಂಟಪದಲ್ಲಿ ಹೆಚ್ಚು ಹಣ ವೆಚ್ಚ ಮಾಡುವುದಕ್ಕಿಂತ ಇಂತಹ ಪುಣ್ಯಕ್ಷೇತ್ರಗಳಲ್ಲಿ ಮದುವೆ ಆಗುವುದರಿಂದ ವಧು-ವರರಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ವೃದ್ಧಿ ಆಗಲಿದೆ ಎಂದರು.