ತುಂಬಕೆರೆಯಲ್ಲಿ ಅಲೆಮಾರಿ ವಿದ್ಯಾರ್ಥಿಗಳಿಗೆ ಶೂ ವಿತರಣೆ

KannadaprabhaNewsNetwork |  
Published : Jun 17, 2026, 01:30 AM IST
೧೬ಕೆಎಂಎನ್‌ಡಿ-೨ಮಂಡ್ಯ ತಾಲ್ಲೂಕಿನ ತುಂಬಕೆರೆಯಲ್ಲಿರುವ ಅಲೆಮಾರಿ ಜನಾಂಗದ ಶಾಲಾ ಮಕ್ಕಳಿಗೆ ತುಮಕೂರಿನ ದಾನಿ ಸಂಸ್ಥೆಯಾದ ತ್ರಿವರ್ಣ ಫೌಂಡೇಷನ್ ವತಿಯಿಂದ ಶೂ ಹಾಗೂ ಚಪ್ಪಲಿ ವಿತರಿಸಲಾಯಿತು. | Kannada Prabha

ಸಾರಾಂಶ

ಅಲೆಮಾರಿ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಇಬ್ಬರು ಹೆಣ್ಣು ಮಕ್ಕಳು ಉತ್ತಮ ಅಂಕ ಪಡೆದು ಮೊದಲ ಪ್ರಯತ್ನದಲ್ಲೆ ಎಸ್ಸೆಸ್ಸೆಲ್ಸಿ ಪಾಸಾಗಿರೋದು ಒಳ್ಳೆಯ ಬೆಳವಣಿಗೆ ಎಲ್ಲಾ ಮಕ್ಕಳೂ ಹೀಗೇ ಓದಿ ಸಾಧನೆ ಮಾಡಬೇಕೆಂದು ಆಶಯ.

ಕನ್ನಡಪ್ರಭ ವಾರ್ತೆ, ಮಂಡ್ಯ

ತಾಲೂಕಿನ ತುಂಬಕೆರೆಯಲ್ಲಿರುವ ಅಲೆಮಾರಿ ಜನಾಂಗದ ಶಾಲಾ ಮಕ್ಕಳಿಗೆ ತುಮಕೂರಿನ ದಾನಿ ಸಂಸ್ಥೆಯಾದ ತ್ರಿವರ್ಣ ಫೌಂಡೇಷನ್ ವತಿಯಿಂದ ಶೂ ಹಾಗೂ ಚಪ್ಪಲಿ ವಿತರಿಸಲಾಯಿತು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಅವರು ಶೂ ವಿತರಿಸಿ ಮಾತನಾಡಿ, ತ್ರಿವರ್ಣ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿಯವರಾದ ಪಿ.ಗೋಪಾಲ್ ಹಾಗೂ ಟ್ರಸ್ಟಿ ಮೋಹನ್‌ಕುಮಾರ್ ಅವರ ದಾನಗುಣ ಮೆಚ್ಚುವಂತದ್ದು, ಉಳ್ಳವರೆಲ್ಲರಿಗೂ ಬಡವರಿಗೆ ಸಹಾಯ ಮಾಡುವ ಗುಣ ಇರುವುದಿಲ್ಲ, ಇಂತಹ ಗುಣವಂತರಿಗೆ ಸದಾ ಒಳ್ಳೆಯದಾಗಲಿ ಎಂದು ಆರೈಸಿದರು.

ಇಂತಹ ಅಲೆಮಾರಿ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು, ಇಬ್ಬರು ಹೆಣ್ಣು ಮಕ್ಕಳು ಉತ್ತಮ ಅಂಕ ಪಡೆದು ಮೊದಲ ಪ್ರಯತ್ನದಲ್ಲೆ ಎಸ್ಸೆಸ್ಸೆಲ್ಸಿ ಪಾಸಾಗಿರೋದು ಒಳ್ಳೆಯ ಬೆಳವಣಿಗೆ ಎಲ್ಲಾ ಮಕ್ಕಳೂ ಹೀಗೇ ಓದಿ ಸಾಧನೆ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದರು.

ಆಂಗ್ಲ ಉಪನ್ಯಾಸಕ ಕಲ್ಲಹಳ್ಳಿ ಕೆ.ಸಿ ಲೋಕೇಶ್ ಮಾತನಾಡಿ, ಕರೋನಾ ಲಾಕ್‌ಡೌನ್ ಆದಾಗ ಪರಸ್ಪರ ಸಂಸ್ಥೆ ಸೇರಿದಂತೆ ಇತರೆ ಮೂರ್ನಾಲ್ಕು ಸಂಸ್ಥೆಗಳು ಇವರನ್ನು ಮೂರು ತಿಂಗಳ ಕಾಲ ಪುನರ್ವಸಿ ಕಲ್ಪಿಸಿ ಸಲಹಿದರು, ನಂತರ ಸರ್ಕಾರಿ ಭೂಮಿಯಲ್ಲಿ ತಂದು ಇರಿಸಿ, ಎಲ್ಲಾ ರೀತಿಯ ಸಹಾಯ ಮಾಡಿ ಇಲ್ಲಿ ನೆಲೆಸುವಂತೆ ಮಾಡಿದರು, ಹಂತ ಹಂತವಾಗಿ ಇವರ ಬೆಳವಣಿಗೆ ಪರಿವರ್ತನೆ ಆಗುತ್ತಿದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಮಂಚಶೆಟ್ಟರು ಮಾತನಾಡಿ ಇಲ್ಲಿ ಇನ್ನೂ ಸಾಕಷ್ಟು ಸಮಸ್ಯೆ ಇವೆ, ಕುಡಿಯುವ ನೀರು, ಬೀದಿದೀಪದ ಸಮಸ್ಯೆ, ಪಂಚಾಯಿತಿ ಯವರು ಇವರ ಬಗ್ಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರು ಇದೆ ಇದೆಲ್ಲವನ್ನೂ ಶಾಸಕರು, ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದರು.

ಪರಸ್ಪರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ, ಪತ್ರಕರ್ತ ದೇವರಾಜ್ ಕೊಪ್ಪ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ವೇದಿಕೆಯಲ್ಲಿ ಇಬ್ಬನಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಶೃತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಶ್ರಮದ ಮೇಲ್ವಿಚಾರಕಿ ಶಾಲಿನಿ ಉಪಸ್ಥಿತರಿದ್ದರು.

ಜೂ.೧೮ರಂದು ಹೊನ್ನಾಯ್ಕನಹಳ್ಳಿಯಲ್ಲಿ ನೈಸರ್ಗಿಕ ಸಾವಯವ ಕೃಷಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಮಂಡ್ಯಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾದಿಂದ ಜೂ.೧೮ರಂದು ಬೆಳಗ್ಗೆ ೧೦.೩೦ಕ್ಕೆ ತಾಲೂಕಿನ ಹೊನ್ನಾಯ್ಕನಹಳ್ಳಿ ಗ್ರಾಮದ ನಿರಂಜನ್ ಅವರ ಹೊಲದಲ್ಲಿ ನೈಸರ್ಗಿಕ ಸಾವಯವ ಕೃಷಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಅಶೋಕ ಎಸ್.ಡಿ.ಜಯರಾಮ್ ತಿಳಿಸಿದರು.

ರೈತರಲ್ಲಿ ಸಾವಯವ ಕೃತಿ ಪದ್ಧತಿಯ ಅಳವಡಿಕೆ ಹಾಗೂ ನೈಸರ್ಗಿಕವಾಗಿ ಭೂಮಿಯ ಫಲವತ್ತತೆ ಹೆಚ್ಚಿಸುವ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕಾರ್ಯಾಗಾರದಲ್ಲಿ ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಜಯಸೂರ್ಯಕುರ್ಮಾ ಮುಖ್ಯ ಭಾಷಣಕಾರರಾಗಿ ಮಾತನಾಡುವರು, ಮುಖ್ಯ ಅತಿಥಿಗಳಾಗಿ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುರ್ಮಾ, ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್, ಮಾಜಿ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮೈಸೂರು ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಡಾ.ಈ.ಸಿ.ನಿಂಗರಾಜೇಗೌಡ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾ ಮುಖಂಡರಾದ ಶಿವಣ್ಣ ಚಂದಗಾಲು, ವಿದ್ಯಾನಾಗೇಂದ್ರ, ವಿಶೇಷ ಆಹ್ವಾನಿತರಾಗಿ ಮಂಡ್ಯ ಗ್ರಾಮಾಂತರ ರೈತ ಮೋರ್ಚಾದ ಅಧ್ಯಕ್ಷ ವರದರಾಜು, ಮಾಜಿ ಜಿಲ್ಲಾಧ್ಯಕ್ಷ ಜೋಗಿಗೌಡ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಭೀಮೇಶ್, ನಗರ ಅಧ್ಯಕ್ಷ ಪ್ರಸನ್ನಕುಮಾರ್ ಇತರರು ಭಾಗವಹಿಸುವರು ಎಂದು ವಿವರಿಸಿದರು.

ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿ ಉತ್ಪನ್ನಗಳ ೧೦ ಸ್ಟಾಲ್‌ಗಳನ್ನು ತೆರೆಯಲಾಗುವುದು. ಅಲ್ಲಿ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ೫೦೦ಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.ಗೋಷ್ಠಿಯಲ್ಲಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್‌ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಜೋಗಿಗೌಡ, ಮಹೇಂದ್ರ, ಸಿ.ಎಂ.ಜವರೇಗೌಡ, ಸಿದ್ದರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ ಮರು ಪರೀಕ್ಷೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ: ಡಾ.ಕುಮಾರ
ಮತದಾರರ ಪಟ್ಟಿ ನಿಖರವಾಗಿ ಪರಿಷ್ಕರಿಸಿ: ಪಿ.ರವಿಕುಮಾರ್