ಬ್ಯಾಡಗಿ: ಸರ್ಕಾರ ರೈತರ ಹಿತದೃಷ್ಟಿಯಿಂದ ವಿವಿಧ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಒದಗಿಸುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳುವಂತೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಕರೆ ನೀಡಿದರು.
ಮಾನ್ಯತೆ ಪಡೆದ ಬೀಜ ಪಡೆದು ಬಿತ್ತನೆ ಮಾಡಿ: ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ ಬೆನಕನಕೊಂಡ ಮಾತನಾಡಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಲಭ್ಯವಿಲ್ಲದಿದ್ದಲ್ಲಿ ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದ ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸುವಂತೆ ಸಲಹೆ ನೀಡಿದರು.
ಏಕರೂಪ ದರ ನಿಗದಿಗೆ ಆಗ್ರಹ: ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಗಂಗಣ್ಣ ಎಲಿ ಮಾತನಾಡಿ, ಪ್ರತಿವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಆರಂಭದಲ್ಲಿ ಖಾಸಗಿ ಕಂಪನಿಗಳು ಮೆಕ್ಕೆಜೋಳ ಬಿತ್ತನೆ ಬೀಜದ ದರವನ್ನು ಏರಿಸಿ ರೈತರ ಆರ್ಥಿಕ ಶೋಷಣೆಗೆ ಕಾರಣವಾಗುತ್ತಿವೆ ಬಿತ್ತನೆ ಬೀಜಗಳಿಗೆ ಏಕರೂಪ ದರ ನಿಗದಿ ಮಾಡುವುದು ಅನಿವಾರ್ಯವಾಗಿದ್ದು, ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಂಯುಕ್ತ ರಸಗೊಬ್ಬರ ಬಳಸಿ: ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಗಾರು ಮುಂಚಿತವಾಗಿಯೇ ಆಗಮಿಸುವ ನಿರೀಕ್ಷೆಯಿದೆ, ರೈತರು ರಸ ಗೊಬ್ಬರ ಖರೀದಿಸುವಾಗ ಕೇವಲ ಡಿಎಪಿ ಗೊಬ್ಬರಕ್ಕೆ ಆದ್ಯತೆ ನೀಡದೆ, ಗಂಧಕ ಹಾಗೂ ಪೋಟ್ಯಾಸಿಯಂ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರ ಬಳಸುವಂತೆ ಸಲಹೆ ನೀಡಿದರು.ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ: ತಾಲೂಕಿನಲ್ಲಿ ಮೆಕ್ಕೆಜೋಳ, ಸೋಯಾಬೀನ್, ಶೇಂಗಾ, ತೊಗರಿ ಹಾಗೂ ಹೆಸರು ಸೇರಿದಂತೆ ವಿವಿಧ ಬಿತ್ತನೆ ಬೀಜಗಳು ಮತ್ತು ರಸಗೊಬ್ಬರ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತಿದೆ. ಬ್ಯಾಡಗಿ, ಕಾಗಿನೆಲೆ, ಮೋಟೆಬೆನ್ನೂರು ಹಾಗೂ ಚಿಕ್ಕಬಾಸೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಚ್ಚುವರಿ ವಿತರಣಾ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಖುದ್ದಾಗಿ ಬಂದು ಬೀಜ ಪಡೆದುಕೊಳ್ಳಬೇಕು, ಗರಿಷ್ಠ 2 ಹೆಕ್ಟೇರ್ ವ್ಯಾಪ್ತಿಗೆ ಮಾತ್ರ ಬೀಜ ವಿತರಿಸಲಾಗುವುದು ಮತ್ತು ಖರೀದಿಸಿದ ಬೀಜಗಳ ರಸೀದಿಯಲ್ಲಿ ಲಾಟ್ ನಂಬರ್ ಹಾಗೂ ಮಾರಾಟ ದರ ಪರಿಶೀಲಿಸಿ, ಮುಂದಿನ ಅವಶ್ಯಕತೆಗೆ ರಸೀದಿಯನ್ನು ಸುರಕ್ಷಿತವಾಗಿ ಕಾಯ್ದಿರಿಸಿಕೊಳ್ಳುವಂತೆ ರೈತರಿಗೆ ಸೂಚನೆ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಉಪಾಧ್ಯಕ್ಷ ಎನ್.ಟಿ. ಪಾಟೀಲ, ಸದಸ್ಯರಾದ ಬಸವರಾಜ ಸಂಕಣ್ಣನವರ, ಶಿವಪ್ಪ ಪೋಟೇರ, ಎಸ್.ಎನ್. ತೋಟದ, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಪಂಚ ಗ್ಯಾರಂಟಿ ಯೋಜನೆ ತಾಲೂಕಾ ಧ್ಯಕ್ಷ ಶಂಭನಗೌಡ ಪಾಟೀಲ, ಸಿ.ಆರ್.ಬಳ್ಳಾರಿ, ಕೃಷಿ ಅಧಿಕಾರಿಗಳಾದ ನಿಂಗಪ್ಪ ಕಾಕೋಳ, ನಾಗರಾಜ ಬನ್ನಿಹಟ್ಟಿ ಸೇರಿದಂತೆ ರೈತರು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.