ಆರೂರು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

KannadaprabhaNewsNetwork | Published : Aug 19, 2024 12:48 AM

ಸಾರಾಂಶ

ಕೊಪ್ಪ, ಆರೂರು ಲಕ್ಷ್ಮಿನಾರಾಯಣ ರಾವ್ ಶಾಲೆಯಲ್ಲಿ ಎಚ್.ಆರ್. ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಹಾಗು ಕೊಡುಗೈ ದಾನಿ ಹರೀಶ್ ಶೆಟ್ಟಿ ಕುಟುಂಬ ಸ್ತರು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.

ಹರೀಶ್ ಶೆಟ್ಟಿ ಕುಟುಂಬದಿಂದ ಸೇವಾ ಕಾರ್ಯ

ಕನ್ನಡಪ್ರಭ ವಾರ್ತೆ, ಕೊಪ್ಪ

ಆರೂರು ಲಕ್ಷ್ಮಿನಾರಾಯಣ ರಾವ್ ಶಾಲೆಯಲ್ಲಿ ಎಚ್.ಆರ್. ಇಂಜಿನಿಯರಿಂಗ್ ವರ್ಕ್ಸ್ ಮಾಲೀಕ ಹಾಗು ಕೊಡುಗೈ ದಾನಿ ಹರೀಶ್ ಶೆಟ್ಟಿ ಕುಟುಂಬ ಸ್ತರು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಸರಳ ಕಾರ್ಯಕ್ರಮದಲ್ಲಿ ಡಾ. ಹರೀಶ್ ಹಾಗು ರಮೇಶ್ ಶೆಟ್ಟಿ ಭಾಗವಹಿಸಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಹರೀಶ್‌ ಸರ್ಕಾರಿ ಶಾಲೆ ಮಕ್ಕಳು ಯಾವುದೇ ರೀತಿ ಖಾಸಗಿ ಶಾಲೆ ಮಕ್ಕಳಿಗಿಂತ ಕಡಿಮೆ ಇರಬಾರದು. ಖಾಸಗಿ ಶಾಲೆ ಮಕ್ಕಳು ಬಹಳ ಚಂದದ ಯೂನಿಫಾರ್ಮ್ ತೊಡುವುದು ಅಂತಹ ವಿಶೇಷವಲ್ಲ ಏಕೆಂದರೆ ಹೆಚ್ಚಾಗಿ ಸ್ಥಿತಿವಂತರೇ ಖಾಸಗಿ ಶಾಲೆಗೆ ಮಕ್ಕಳನ್ನು ದಾಖಲು ಮಾಡುವುದು. ಅದೇ ಸರ್ಕಾರಿ ಶಾಲೆ ಮಕ್ಕಳು ಅಂತಹ ಯುನಿಫಾರ್ಮ್ ತೊಟ್ಟಾಗ ನೋಡಲು ಖುಷಿಯಾಗುತ್ತದೆ ಎಂದರು. ಮುಂದೆಯೂ ನಮ್ಮ ಕುಟುಂಬದ ಸಹಕಾರ ಶಾಲೆಗೆ ಇರುತ್ತದೆ ಎಂದರು.

ಆರೂರು ಶಾಲೆಯಲ್ಲಿ ಈ ಹಿಂದೆ ಎಲ್.ಕೆ.ಜಿ-ಯುಕೆಜಿ ಪ್ರಾರಂಭಿಸಲು ಮೂಲ ಕಾರಣಕರ್ತರೆ ಡಾ. ಹರೀಶ್. ಇವರು ಸುಮಾರು 4 ವರ್ಷಗಳ ಕಾಲ ೧ ಶಿಕ್ಷಕರ ವೇತನ ನೀಡಿದ ಪರಿಣಾಮ ಇಂದು ಎಲ್ಕೆಜಿ-ಯುಕೆಗೆ ತರಗತಿ ಬಹಳ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಒಂದು ದಿನವೂ ಶಾಲೆಗೆ ಭೇಟಿ ನೀಡದೆ ಯಾವುದೇ ರೀತಿ ಪ್ರಚಾರದ ಹಮ್ಮಿಲ್ಲದೆ ಕೇವಲ ವೇತನ ನೀಡುವುದು ಮಾತ್ರವಲ್ಲದೆ ಹಬ್ಬ ಹರಿದಿನಗಳಲ್ಲಿ ಶಿಕ್ಷಕಿಯರಿಗೆ ಹಾಗೂ ಆಯಾರವರಿಗೆ ಸೀರೆ, ಸಿಹಿ ನೀಡುವ ಸಂಪ್ರದಾಯ ಬೆಳೆಸಿಕೊಂಡಿದ್ದ ಇವರ ಈ ಸೇವೆ ಈ ಸಂದರ್ಭದಲ್ಲಿ ಸ್ಮರಿಸಬೇಕಾಗುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಡಾ. ಹರೀಶ್ ರವರಿಗೆ ಅಭಿನಂದನೆ ಸಲ್ಲಿಸಿದರು. ಶಾಲೆ ಎಸ್ ಡಿಎಂಸಿ ಅಧ್ಯಕ್ಷ , ಅಮೃತ ಸಿಂಚನ ಟ್ರಸ್ಟಿನ ಸದಸ್ಯರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಶಾಲೆ ಶಿಕ್ಷಕ ವೃಂದ ಹಾಗೂ ಮಕ್ಕಳು ಹಾಜರಿದ್ದರು.

Share this article